ಮದ್ದೂರು:

ತಾಲೂಕಿಗೆ ಹೊಸದಾಗಿ 5 ಕರ್ನಾಟಕ ಪಬ್ಲಿಕ್ ಶಾಲೆಗಳು ಮಂಜೂರಾಗಿವೆ. ಮದ್ದೂರು ನಗರ ಸೇರಿದಂತೆ ಮಲ್ಲನಕುಪ್ಪೆ, ಕೊಕ್ಕರೆ ಬೆಳ್ಳೂರು, ಕೊಪ್ಪ ಹಾಗೂ ಅಣ್ಣೂರಿನಲ್ಲಿ ಇಷ್ಟರಲ್ಲೇ ಶಾಲೆಗಳ ನಿರ್ಮಾಣ ಮಾಡಲಾಗುವುದು ಎಂದು ಶಾಸಕ ಕೆ.ಎಂ.ಉದಯ್ ತಿಳಿಸಿದರು.

ತಾಲೂಕಿನ ಬೆಸಗರಹಳ್ಳಿಯಲ್ಲಿ ಕರ್ನಾಟಕ ಪಬ್ಲಿಕ್ ಶಾಲೆ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿ, ಗ್ರಾಮೀಣ ಭಾಗದ ಮಕ್ಕಳಿಗೆ ಉತ್ತಮ ಶಿಕ್ಷಣಕ್ಕಾಗಿ ಸರ್ಕಾರವು ಶಿಕ್ಷಣ ಇಲಾಖೆ ಮೂಲಕ ಹಲವು ಯೋಜನೆ ರೂಪಿಸುತ್ತಿದೆ ಎಂದರು.

ಕದಲೂರು ಉದಯ್ ಚಾರಿಟಬಲ್ ಟ್ರಸ್ಟ್‌ನಿಂದಲೂ ಶಾಲೆ, ವಿದ್ಯಾರ್ಥಿಗಳಿಗೆ ಅಗತ್ಯ ಸಹಕಾರ ಮತ್ತು ನೆರವನ್ನು ಹಿಂದಿನಿಂದಲೂ ನೀಡುತ್ತಿದ್ದು, ಮುಂದೆಯೂ ನೀಲಾಗುತ್ತದೆ. ವಿದ್ಯಾರ್ಥಿಗಳು ಚೆನ್ನಾಗಿ ಓದಿ ಉತ್ತಮ ಭವಿಷ್ಯ ರೂಪಿಸಿಕೊಂಡು ಪಾಲಕರಿಗೆ ಹಾಗೂ ತಾವು ಓದಿದ ಶಾಲೆಗೆ ಕೀರ್ತಿ ತರಬೇಕು ಎಂದರು.

ಬಿಇಒ ಧನಂಜಯ ಮಾತನಾಡಿ, ಶಾಸಕ ಕೆ.ಎಂ.ಉದಯ್ ಅವರು ಸರ್ಕಾರದ ಮಟ್ಟದಲ್ಲಿ ಹೆಚ್ಚಿನ ಆಸಕ್ತಿ ವಹಿಸಿ ತಾಲೂಕಿಗೆ ಮತ್ತೆ 5 ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಮಂಜೂರು ಮಾಡಿಸಿದ್ದಾರೆ. ನೂರಾರು ಶಾಲಾ ಕೊಠಡಿಗಳನ್ನು ದುರಸ್ತಿ ಮಾಡಿಸುವಲ್ಲಿ ಹಾಗೂ ಹೊಸಗಾಗಿ ನಿರ್ಮಾಣ ಮಾಡಿರುವುದು ನಮಗೆಲ್ಲರಿಗೂ ಹೆಮ್ಮೆಯ ಸಂಗತಿ ಎಂದರು.


ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಂಶುಪಾಲೆ ಯದುಶೈಲ ಸಂಪತ್ ಮಾತನಾಡಿದರು. ಡಿಸಿಸಿ ಬ್ಯಾಂಕ್ ನಿರ್ದೇಶಕ ಸಂದರ್ಶ, ಪ್ರಾಂಶುಪಾಲ ಬಾಂಗಾರು ನಾಯಕ್, ಶಾಲಾ ಅವೃದ್ಧಿ ಸಮಿತಿ ಉಪಾಧ್ಯಕ್ಷ ನಾಗರಾಜು, ಮಾಜಿ ಸೈನಿಕ ಸಿಪಾಯಿ ಶ್ರೀನಿವಾಸ್, ಮುಖಂಡರಾದ ಪಣ್ಣೆದೊಡ್ಡಿ ವಿಜಯೇಂದ್ರ, ಧನಂಜಯ, ಸುಧಾಕರ್, ಬಾಬು, ಮಂಜು, ಮುರಳಿ, ಶೋಭಾ ಸೇರಿದಂತೆ ಹಲವರು ಹಾಜರಿದ್ದರು.

ಜನಶ್ರೇಯೋಭಿವೃದ್ಧಿ ಬ್ಯಾಂಕ್‌ನಿಂದ ಬಡವರು, ರೋಗಿಗಳಿಗೆ ಅನ್ನಸಂತರ್ಪಣೆ

ಹಲಗೂರು:ಜನಶ್ರೇಯೋಭಿವೃದ್ಧಿ ಬ್ಯಾಂಕ್ ಸ್ಥಾಪನೆಯಾಗಿ 10 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಬ್ಯಾಂಕ್‌ ವತಿಯಿಂದ ಸರ್ಕಾರಿ ಆಸ್ಪತ್ರೆಗೆ ಬಂದ ಬಡವರು, ರೋಗಿಗಳಿಗೆ ಅನ್ನ ಸಂತರ್ಪಣೆ ನಡೆಸಲಾಯಿತು.

ಹಲಗೂರು ಲಯನ್ಸ್ ಕ್ಲಬ್‌ನಿಂದ ದಿನ ನಿತ್ಯ ಸರ್ಕಾರಿ ಪ್ರಾಥಮಿಕ ಆಸ್ಪತ್ರೆ ಆವರಣದಲ್ಲಿ ನಡೆಯುತ್ತಿರುವ ಹಸಿವು ನಿವಾರಣ ಕಾರ್ಯಕ್ರಮದಲ್ಲಿ ಬ್ಯಾಂಕ್‌ನ ಅಧ್ಯಕ್ಷ ಎಚ್.ವಿ.ಅಶ್ವಿನ್ ಕುಮಾರ್ ಮಾರ್ಗದರ್ಶನದಲ್ಲಿ ಶನಿವಾರ ಅನ್ನ ದಾಸೋಹ ನಡೆಯಿತು.ಬ್ಯಾಂಕಿನ ಸಿಬ್ಬಂದಿ ನಾಗವೇಣಿ ಮಾತನಾಡಿ, ನಮ್ಮ ಸಂಸ್ಥೆ ಕಳೆದ ಹತ್ತು ವರ್ಷಗಳಿಂದ ಜನರಿಗೆ ಉತ್ತಮ ಸೇವೆ ನೀಡುತ್ತಿದೆ. ಅದರ ಅಂಗವಾಗಿ ಇಂದು ನಾವು ಅನ್ನಸಂತರ್ಪಣೆ ಆಯೋಜಿಸಿ ಪಾಲ್ಗೊಂಡಿದ್ದೆವು ಎಂದರು.

ಲಯನ್ಸ್ ಕ್ಲಬ್‌ನ ಎ.ಎಸ್ ದೇವರಾಜು ಮಾತನಾಡಿ, ಹಸಿವು ನಿವಾರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಜನಶ್ರೇಯೋಭಿವೃದ್ಧಿ ಸಂಸ್ಥೆಗೆ ಪ್ರಶಸ್ತಿ ಪತ್ರ ನೀಡಿದ್ದೇವೆ ಎಂದರು.ಕಾರ್ಯಕ್ರಮದಲ್ಲಿ ಎಚ್.ಆರ್.ಪದ್ಮನಾಭ, ಶಿವರಾಜು, ಶ್ರೀನಾಥ್, ಜಯಣ್ಣ ,ಬ್ಯಾಂಕಿನ ಸಿಬ್ಬಂದಿ ನಾಗವೇಣಿ, ತೇಜಸ್ವಿನಿ, ಮನೋಜ್ ಕುಮಾರ್, ಪರಮೇಶ, ಸತೀಶ್ ಸೇರಿದಂತೆ ಇತರರು ಇದ್ದರು.