ಕನ್ನಡಪ್ರಭ ವಾರ್ತೆ ಮೈಸೂರು
ನಾವೆಲ್ಲ ಮನುಷ್ಯರಾಗಿದ್ದು ಪರಸ್ಪರ ಸೌಹಾರ್ದದಿಂದ ಸಮಾಜದಲ್ಲಿ ಬೆಳೆಯಬೇಕು. ಪರಸ್ಪರ ಸಹಕಾರ ಎಂಬುದು ನಮ್ಮ ಕುಟುಂಬದ ಜೀವನ ಹಾಗೂ ವೃತ್ತಿಪರ ಜೀವನದಲ್ಲಿ ಅತ್ಯಂತ ಅವಶ್ಯಕ ಎಂದು ಶ್ರೀ ರಾಮಕೃಷ್ಣ ಆಶ್ರಮದ ಅಧ್ಯಕ್ಷ ಸ್ವಾಮಿ ಮುಕ್ತಿದಾನಂದ ತಿಳಿಸಿದರು.ನಗರದಷಕೆಆರ್ ಎಸ್ ರಸ್ತೆಯಲ್ಲಿರುವ ರಾಮಕೃಷ್ಣ ನೈತಿಕ ಮತ್ತು ಆಧ್ಯಾತ್ಮಿಕ ಶಿಕ್ಷಣ ಸಂಸ್ಥೆಯಲ್ಲಿ ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಸಂಸ್ಥೆಯು ಸಂಯುಕ್ತ ಸಹಕಾರಿಯ ಹಿರಿಯ ಅಧಿಕಾರಿಗಳು, ಕಿರಿಯ ಅಧಿಕಾರಿಗಳು ಹಾಗೂ ಜಿಲ್ಲಾ ಸಂಯೋಜಕರಿಗಾಗಿ ಆಯೋಜಿಸಿರುವ ಕೌಶಲ್ಯ ಅಭಿವೃದ್ಧಿ ತರಬೇತಿ ಕಾರ್ಯಕ್ರಮವನ್ನು ಅವರು ಶುಕ್ರವಾರ ಉದ್ಘಾಟಿಸಿ ಮಾತನಾಡಿದರು.
ಎಲ್ಲಾ ರೀತಿಯ ವಿಕೋಪ, ನಕಾರಾತ್ಮಕ ಭಾವನೆಗೆ ಸೌಹಾರ್ದದ ತರಬೇತಿ ಮುಖ್ಯ. ಸಹಕಾರಿ ಸಂಸ್ಥೆಗಳಿಗೆ ಸಂಬಂಧಿಸಿದಂತೆ ನಿಯಮಾವಳಿಗಳನ್ನು ಮಾಡಿದ್ದು, ಅದರಂತೆ ಕೆಲಸ ಮಾಡುತ್ತಿರುವುದು ಸಂತೋಷದ ವಿಷಯ. ಪ್ರತಿಯೊಬ್ಬರು ನೈಪುಣ್ಯತೆ, ಪ್ರಾಮಾಣಿಕತೆಯಿಂದ ಕೆಲಸ ಮಾಡಬೇಕು. ಪ್ರತಿಯೊಂದು ತರಬೇತಿಯಲ್ಲಿ ವಿವಿಧ ವಿಷಯದ ಬಗ್ಗೆ ನಿಮಗೆ ಅರಿವು ಮೂಡಿಸಲಿದ್ದು, ಅದನ್ನು ಆಸಕ್ತಿಯಿಂದ ಗ್ರಹಿಸಿ ಮಾಹಿತಿ ಪಡೆದುಕೊಳ್ಳಬೇಕು ಎಂದರು.ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಶಿಕ್ಷಣ ನಿಧಿ ಸಲಹಾ ಸಮಿತಿ ಸದಸ್ಯ ಎಚ್.ವಿ. ರಾಜೀವ ಮಾತನಾಡಿ, ಸಹಕಾರ ಸಂಘದ ಸದಸ್ಯರು, ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ಉತ್ತಮ ಸಂಬಂಧ ಕಾಯ್ದುಕೊಳ್ಳಬೇಕು. ಸಹಕಾರ ಕಾಯ್ದೆ, ಕಾನೂನನ್ನು ಅರಿತುಕೊಳ್ಳಬೇಕು. ಸಂಘದಲ್ಲಿ ಯಾವುದೇ ಸಮಸ್ಯೆ ಎದುರಾದಾಗ ಸಹಕಾರ ಇಲಾಖೆಯ ಗಮನಕ್ಕೆ ತಂದು ಪರಿಹರಿಸಿಕೊಂಡು ಸಂಘವನ್ನು ಸುಗಮವಾಗಿ ಮುನ್ನಡೆಸುವ ಕಡೆಗೆ ಪ್ರಥಮ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.
ಎಲ್ಲರು ಆರೋಗ್ಯ ಹಾಗೂ ಕುಟುಂಬದ ಜೊತೆ ಸೌಹರ್ದ ಪಡೆದುಕೊಂಡರೇ ಗುಣಾತ್ಮಕ ಜೀವನ ನಡೆಸಬಹುದು. ಇರುವ ಅವಧಿಯಲ್ಲಿ ಋಣಾತ್ಮಕವಾಗಿ ಎಷ್ಟು ಕೆಲಸ ಮಾಡುತ್ತೇವೆ ಎಂಬುದು ನಾವು ತಿಳಿಯಬೇಕು. ಇವತ್ತೀನ ಆಧುನಿಕ ಪ್ರಪಂಚದಲ್ಲಿ ಮನಸ್ಸಿನ ನೆಮ್ಮದಿ ಇಲ್ಲದಿರುವಂತಹ ಕುಟುಂಬಗಳು ನಾವು ನೋಡಿದ್ದೇವೆ ಎಂದರು.ರಾಮಕೃಷ್ಣ ನೈತಿಕ ಮತ್ತು ಆಧ್ಯಾತ್ಮಿಕ ಶಿಕ್ಷಣ ಸಂಸ್ಥೆಯ ಸಂಚಾಲಕ ಸ್ವಾಮಿ ಮಹಾಮೇದಾನಂದ, ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಅಧ್ಯಕ್ಷ ಜಿ. ನಂಜನಗೌಡ, ಉಪಾಧ್ಯಕ್ಷ ಎ.ಆರ್. ಪ್ರಸನ್ನಕುಮಾರ್, ವ್ಯವಸ್ಥಾಪಕ ನಿರ್ದೇಶಕ ಶರಣಗೌಡ ಜಿ. ಪಾಟೀಲ, ಸಿ.ಎನ್. ಪರಶಿವಮೂರ್ತಿ, ಪ್ರಸಾದ ರೆಡ್ಡಿ, ಕೆ. ಗಗನಾ, ಎಸ್.ಕೆ. ಮಂಜುನಾಥ್, ಪ್ರೇಮಾನಂದ ಮೊದಲಾದವರು ಇದ್ದರು.