- ರಾಜ್ಯದಲ್ಲಿಯೇ ಮೊದಲ ಬಾರಿಗೆ ಕೊಪ್ಪಳದಲ್ಲಿ ರಾಯಚೂರು ಕೃಷಿ ವಿವಿ ಅನುದಾನದಲ್ಲಿ ನಿರ್ಮಾಣ
ಸೋಮರಡ್ಡಿ ಅಳವಂಡಿ
ಕನ್ನಡಪ್ರಭ ವಾರ್ತೆ ಕೊಪ್ಪಳಸೌರಚಾಲಿತ ಈರುಳ್ಳಿ ಸಂಗ್ರಹಣಾ ಘಟಕ ಮತ್ತು ಸಿರಿಧಾನ್ಯಗಳ ಮೌಲ್ಯವರ್ಧನ ಘಟಕ ಜಿಲ್ಲೆಯ ಕುಕನೂರು ತಾಲೂಕಿನ ಕುದರಿಮೋತಿ ಗ್ರಾಮದಲ್ಲಿ ತಲೆ ಎತ್ತಲಿದೆ.
ಈರುಳ್ಳಿಯನ್ನು ಸಂಗ್ರಹಿಸುವುದು ಮತ್ತು ಅವುಗಳನ್ನು ಒಣಗಿಸುವುದನ್ನು ಇದು ಒಳಗೊಂಡಿದ್ದು, ಸಿರಿಧಾನ್ಯಗಳ ಸಂರಕ್ಷಣೆ ಮತ್ತು ಮೌಲ್ಯವರ್ಧನೆ ಮಾಡಲಾಗುತ್ತದೆ.
ಕುದರಿಮೋತಿ ಗ್ರಾಮದ ಹೊರವಲಯದಲ್ಲಿ ನಿರ್ಮಾಣ ಮಾಡಲಾಗಿದ್ದು, ರೈತ ಉತ್ಪಾದಕ ಕಂಪನಿಯಲ್ಲಿ ಸದಸ್ಯತ್ವ ಇರುವ ರೈತರು ರಿಯಾಯಿತಿ ದರದಲ್ಲಿ ಇಲ್ಲಿ ಸಂಗ್ರಹಣೆ ಮಾಡಿಕೊಳ್ಳಬಹುದು. ಹಾಗೆಯೇ ಇತರೆ ರೈತರು ನಿಗದಿ ಮಾಡಿರುವ ದರದಲ್ಲಿ ಸಂಗ್ರಹಣೆ ಮಾಡಿಕೊಳ್ಳುವುದಕ್ಕೆ ಅವಕಾಶ ಕಲ್ಪಿಸಲಾಗಿದೆ.
ಈರುಳ್ಳಿ ಘಟಕದಲ್ಲಿ ೧೨ ಟ್ರೇಗಳಿದ್ದು, ಒಂದು ಟ್ರೇ ೪೦೦ರಿಂದ ೫೦೦ ಕೆಜಿ ಒಣಗಿಸುವ ಸಾಮರ್ಥ್ಯವಿದ್ದು, ಒಟ್ಟು ೧೨ ಟನ್ ಈರುಳ್ಳಿಯನ್ನು ೫ರಿಂದ ೬ ತಾಸುಗಳಲ್ಲಿ ಒಣಗಿಸಬಹುದಾಗಿದೆ. ೧೦ ಟನ್ ಈರುಳ್ಳಿಗೆ ಕೇವಲ ₹೨,೦೦೦ ಮಾತ್ರ ಖರ್ಚಾಗುತ್ತದೆ.
ಕುದರಿಮೋತಿ ಗ್ರಾಮದಧರಣಿ ಸಿರಿಧಾನ್ಯ ಉತ್ಪಾದಕರ ಕಂಪನಿಯಲ್ಲಿ ೭೪೨ ರೈತರು ಈಗಾಗಲೇ ನೋಂದಣಿ ಮಾಡಿಸಿದ್ದಾರೆ.
ಜಿಲ್ಲೆಯಲ್ಲಿ ಸುಮಾರು 3 ಸಾವಿರ ಎಕರೆ ಪ್ರದೇಶದಲ್ಲಿ ಸಿರಿಧಾನ್ಯ ಬೆಳೆಯುತ್ತಿದ್ದಾರೆ. ಇದನ್ನು ಸಂಸ್ಕರಣೆ ಮಾಡುವುದಕ್ಕೆ ಸಮಸ್ಯೆಯಾಗಿತ್ತು. ಆದರೆ, ಈಗ ಮೌಲ್ಯವರ್ಧನ ಸಂಸ್ಕರಣಾ ಘಟಕ ಸ್ಥಾಪಿಸಿರುವುದರಿಂದ ಸಿರಿಧಾನ್ಯ ಬೆಳೆಯುವ ರೈತರಿಗೆ ಅನುಕೂಲವಾಗುತ್ತದೆ.
ನಿರ್ವಹಣೆ:
ಹೈದರಾಬಾದ್ ತಂತ್ರಜ್ಞಾನ ಸಂಸ್ಥೆಯ ಮೂಲಕ ನಿರ್ವಹಣೆ ನಡೆಯುತ್ತದೆ. ರಾಯಚೂರು ಕೃಷಿ ವಿವಿ ಮೇಲುಸ್ತುವಾರಿಯನ್ನು ನೋಡಿಕೊಳ್ಳುತ್ತದೆ. ಇದಕ್ಕೆ ಐಸಿಐಸಿ ಸಂಸ್ಥೆ ಸೇರಿದಂತೆ ಹಲವಾರು ಸಂಸ್ಥೆಗಳು ನೆರವು ನೀಡಿರುವುದು ವಿಶೇಷ.