ಕೊಪ್ಪಳ: ಕಾರ್ಗಿಲ್ ವಿಜಯೋತ್ಸವ ದೇಶದ ಹೆಮ್ಮೆಯಾಗಿದೆ. ಇಂಥ ಹೆಮ್ಮೆಯನ್ನು ತಂದುಕೊಡಲು ಸೈನಿಕರು ಪ್ರಾಣದ ಹಂಗು ತೊರೆದು ಹೋರಾಟ ಮಾಡಿದ್ದನ್ನು ಮರೆಯುವಂತೆಯೇ ಇಲ್ಲ ಎಂದು ಉಪವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ ಮಾಲಗಿತ್ತಿ ಹೇಳಿದ್ದಾರೆ.
ನಗರದ ಮಾಜಿ ಸೈನಿಕರ ಸಂಘದ ಕಾರ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಕಾರ್ಗಿಲ್ ವಿಜಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಕಠಿಣ ಪರಿಸ್ಥಿತಿಯಲ್ಲಿಯೂ ನಮ್ಮ ಸೈನಿಕರು ಜಯ ಸಾಧಿಸಿದ್ದಾರೆ. ಅಲ್ಲಿಯ ಸೈನಿಕರ ಹೋರಾಟ ಮೈ ಜುಮ್ಮೆನ್ನಿಸುತ್ತದೆ. ಕಣ್ಣಿಗೆ ನಿದ್ದೆ, ಹೊಟ್ಟೆಗೆ ಊಟ ಇಲ್ಲದಿದ್ದರೂ ಹೋರಾಡಿ ಜಯ ಸಾಧಿಸಿದರು. ಅಂಥ ಹೋರಾಟವನ್ನು ನಾವು ಎಂದು ಸಹ ಮರೆಯಲು ಸಾಧ್ಯವಿಲ್ಲ ಎಂದರು.ಕೊಪ್ಪಳ ಮಾಜಿ ಸೈನಿಕರ ಸಂಘಕ್ಕೆ ನಿವೇಶನ ಮಂಜೂರು ಮಾಡಲಾಗಿದ್ದು, ಅದನ್ನು ಶೀಘ್ರದಲ್ಲಿಯೇ ನೀಡಲಾಗುವುದು ಎಂದರು.
ತಹಸೀಲ್ದಾರ್ ವಿಠ್ಠಲ ಚೌಗಲೇ ಮಾತನಾಡಿ, ಸೈನಿಕರ ಕಾರ್ಯವನ್ನು ದೇಶವೇ ಸ್ಮರಿಸಬೇಕಾಗುತ್ತದೆ. ಅದರಲ್ಲೂ ಕಾರ್ಗಿಲ್ ಯುದ್ಧದಲ್ಲಿ ಪ್ರಾಣದ ಹಂಗು ತೊರೆದು ಹೋರಾಟ ಮಾಡಿದ ಅವರ ದೇಶಕ್ಕೆ ಜಯ ತಂದುಕೊಟ್ಟರು ಎಂದರು.ವಾಣಿಜ್ಯ ತೆರಿಗೆ ಅಧಿಕಾರಿ ಶಿವಾನಂದ ಪೂಜಾರ ಮಾತನಾಡಿ. ಸೈನಿಕರು ದೇಶ ಕಾಯುತ್ತಿರುವುದರಿಂದಲೇ ನಾವು ದೇಶದ ಒಳಗೆ ನೆಮ್ಮದಿಯಾಗಿದ್ದೇವೆ. ಅಂಥ ಸೈನಿಕರ ಶ್ರಮದ ಫಲವಾಗಿಯೇ ನೆರೆಯ ಪಾಕಿಸ್ತಾನವನ್ನು ಕಾರ್ಗಿಲ್ ಯುದ್ಧದಲ್ಲಿ ಸೋಲಿಸಲು ಸಾಧ್ಯವಾಯಿತು. ಅಂಥ ಜಯಕ್ಕೆ ಈಗ 25 ವರ್ಷ ಪೂರ್ಣಗೊಂಡಿದೆ ಎಂದರು.
ಮಾಜಿ ಸೈನಿಕರ ಸಂಘದ ಜಿಲ್ಲಾಧ್ಯಕ್ಷ ಮಾರುತಿ ಗೊಂದಿ, ಉಪಾಧ್ಯಕ್ಷ ಶ್ರೀಧರ ಪೊಲೀಸ್ ಪಾಟೀಲ್, ಸಹಕಾರ್ಯದರ್ಶಿ ಗುರುಬಸಯ್ಯ ಬೃಹ್ಮನಮಠ, ಮಲ್ಲಿಕಾರ್ಜುನ ಸಜ್ಜನ, ಉಮೇಶ ಕಾಮನೂರು, ಇಂದೂಧರ ಸೊಪ್ಪಿಮಠ, ವಾಸಪ್ಪ ಚಲ್ಲಾ, ಯಂಕರಡ್ಡಿ ರೊಡ್ಡರ, ಕಾರ್ಗಿಲ್ ವೀರನಾರಿ ಸರೋಜಮ್ಮ ಮೇಗಳಮಠ ಇತರರು ಇದ್ದರು.ಮಾಜಿ ಸೈನಿಕರ ಸಂಘದ ಜಿಲ್ಲಾ ಉಪಾಧ್ಯಕ್ಷ ಶ್ರೀಧರ ಪಾಟೀಲ್ ಕಾರ್ಯಕ್ರಮ ನಿರೂಪಿಸಿದರು.