ಸೋಮವಾರಪೇಟೆ: ತಾಲೂಕಿನಾದ್ಯಂತ ಗುರುವಾರ ಬಿಟ್ಟು ಬಿಟ್ಟು ಭಾರಿ ಮಳೆಯಾಗುತ್ತಿದ್ದು, ಗ್ರಾಮೀಣ ಭಾಗಗಳಲ್ಲಿ ಜನರ ಪರದಾಡುವಂ ಸ್ಥಿತಿ ನಿರ್ಮಾಣವಾಗಿದೆ.ಬುಧವಾರದಿಂದಲೂ ಭಾರಿ ಗಾಳಿಯೊಂದಿಗೆ ಮಳೆ ಸುರಿಯುತ್ತಿದ್ದು, ವಿದ್ಯುತ್ ಮಾರ್ಗದ ಮೇಲೆ ಮರಗಳು ಬೀಳುತ್ತಿರುವುದರಿಂದ ಗ್ರಾಮೀಣ ಭಾಗಗಳಲ್ಲಿ ವಿದ್ಯುತ್ ಸಮಸ್ಯೆ ಎದುರಾಗಿದೆ. ಕುಡಿಯುವ ನೀರು ಸೇರಿದಂತೆ ಎಲ್ಲ ಚಟುವಟಿಕೆಗಳಿಗೆ ಸಮಸ್ಯೆಯಾಗಿರುವುದಾಗಿ ಸ್ಥಳೀಯರು ತಿಳಿಸಿದರು. ವಿದ್ಯಾರ್ಥಿಗಳಿಗೆ ಸಿಇಟಿಯಲ್ಲಿ ಕಾಲೇಜನ್ನು ಆಯ್ಕೆ ಮಾಡಲು ಗುರುವಾರ ಬೆಳಗ್ಗೆ ೧೦ಕ್ಕೆ ಕೊನೆಯಾಗಿದ್ದು, ವಿದ್ಯುತ್ ಸಮಸ್ಯೆಯಿಂದ ವಿದ್ಯಾರ್ಥಿಗಳು ಪರದಾಡುವಂತಾಯಿತು.
ಪಟ್ಟಣದ ಆನೆಕೆರೆ ಬಳಿಯ ಪಾರ್ಕ್ನಲ್ಲಿ ಬೃಹತ್ ಮರವೊಂದು ಉರುಳಿದ್ದು, ಯಾವುದೇ ಅಪಾಯ ಎದುರಾಗಲಿಲ್ಲ. ಮಲ್ಲಳ್ಳಿ ಜಲಪಾತ, ಮೇದುರ ಜಲಪಾತ, ಜ್ಞಾನ ಗಂಗ, ಅಬ್ಬಿ ಜಲಪಾತ ಸೆರಿದಂತೆ ಭಾರಿ ಮಳೆಯಿಂದ ತುಂಬಿ ಹರಿಯುತ್ತಿವೆ. ಅಕ್ಕಪಕ್ಕದ ಹೊಳೆ ತೊರೆಗಳು ತುಂಬಿ ಹರಿಯುತ್ತಿದ್ದು, ಕೆಲವು ಮನೆಗಳಿಗೆ ಹಾನಿಯಾಗಿದೆ. ಕಳೆದ ೨೪ ಗಂಟೆಗಳ ಅವಧಿಯಲ್ಲಿ ಸೋಮವಾರಪೇಟೆಗೆ ತಾಲೂಕಿಗೆ ಸರಾಸರಿ ೫.೬೨ ಸೆಂಟೀ ಮೀಟರ್ ಮಳೆಯಾಗಿದೆ. ಶಾಂತಳ್ಳಿ ಹೋಬಳಿಗೆ ೮.೩, ಕೊಡ್ಲಿಪೇಟೆ ೫.೫, ಸೋಮವಾರಪೇಟೆ ೪.೪ ಹಾಗೂ ಶನಿವಾರಸಂತೆ ಹೋಬಳಿಗೆ ೪.೩ ಸೆಂಟೀ ಮೀಟರ್ ಮಳೆಯಾಗಿದೆ.