=ಕನ್ನಡಪ್ರಭ ವಾರ್ತೆ ಕೋಲಾರ
ಬೆಂಗಳೂರಿನ ಡಿಐಜಿಪಿ ಡಿ.ದೇವರಾಜ್ ನೇತೃತ್ವದಲ್ಲಿ ಯಗಾದಿ ಉತ್ಸವ ಕಾರ್ಯಕ್ರಮವನ್ನು ಸಿಎಂ ಮಾಧ್ಯಮ ಸಲಹೆಗಾರರಾದ ಕೆ.ವಿ. ಪ್ರಭಾಕರ್ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಕ್ರೇಜಿ ಸ್ಟಾರ್ ರವಿಚಂದ್ರನ್, ನಟಿ ಅನುಪ್ರಭಾಕರ್, ಸಂಗೀತ ಮಾಂತ್ರಿಕ ಅರ್ಜುನ್ ಜನ್ಯ, ನಿರೂಪಕಿ ಅನುಶ್ರೀ ಮತ್ತು ಅಖಿಲ ಪಜಿಮಣ್ಣು ಮ್ಯೂಸಿಕಲ್ ನೈಟ್ ನಡೆಸಿಕೊಟ್ಟರು. ಕಾರ್ಯಕ್ರಮವನ್ನು ಡಾ. ರಾಜಕುಮಾರ್ ವಂಶದ ಕುಡಿ ಯುವ ರಾಜ್ ಕುಮಾರ್, ಸಂಜನ ಆನಂದ್ ನಡೆಸಿಕೊಟ್ಟಿದ್ದು ವಿಶೇಷವಾಗಿತ್ತು.ಇದೇ ಸಂದರ್ಭದಲ್ಲಿ ಯು.ಪಿ.ಎಸ್.ಸಿ. ಪರೀಕ್ಷೆಯಲ್ಲಿ ಆಯ್ಕೆಯಾದ ಜಿಲ್ಲೆಯ ಯುವ ಪ್ರತಿಭೆಗಳನ್ನು ಗೌರವಿಸಲಾಯಿತು. ಬೆಂಗಳೂರಿನ ಡಿ.ಎನ್.ಎ. ಈವೆಂಟ್ ಮ್ಯಾನೆಜ್ಮೆಂಟ್ ತಂಡವು ಆಸನದ ವ್ಯವಸ್ಥೆಯೊಂದಿಗೆ ವೇದಿಕೆ ವಿನ್ಯಾಸ, ವಿದ್ಯುತ್ ದೀಪಾಲಂಕಾರ, ಉತ್ತಮ ಧ್ವನಿವರ್ಧಕ ವ್ಯವಸ್ಥೆ ಅಚ್ಚುಕಟ್ಟಾಗಿ ಮಾಡಿತ್ತು.
ಮುಖ್ಯ ಅತಿಥಿಗಳಾಗಿ ಡಾ.ಶಂಕರ್, ಪತ್ರಕರ್ತರಾದ ಬಿ.ವಿ.ಗೋಪಿನಾಥ್, ವಿ.ಮುನಿರಾಜು, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಕೆ.ಚಂದ್ರಶೇಖರ್, ಅಪರ ಜಿಲ್ಲಾಧಿಕಾರಿ ಮಂಗಳ, ಜಿಲ್ಲೆಯ ಹಿರಿಯ ವಕೀಲರಾದ ಕೆ.ವಿ.ಶಂಕರಪ್ಪ ಇದ್ದರು.
ಡಿ.ಐ.ಜಿ.ಪಿ ಡಿ.ದೇವರಾಜ್ ಪ್ರಾಸ್ತಾವಿಕ ನುಡಿಗಳಾಡಿ ಈ ಹಿಂದೆ ಎಸ್.ಪಿ. ಅಗಿ ಕಾರ್ಯನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಕೋರೋನಾದಿಂದ ಬೇಸತ್ತಿದ್ದ ಜನತೆಗೆ ಸಂಗೀತ ರಸ ಸಂಜೆ ಕಾರ್ಯಕ್ರಮ ಆಯೋಜಿಸುವ ಮೂಲಕ ಮನ ರಂಜಿಸಲು ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷರಾದ ಬಿ.ವಿ.ಗೋಪಿನಾಥ್ ನೀಡಿದ ಸಲಹೆ ಮೇರೆಗೆ ಈ ಕಾರ್ಯಕ್ರಮ ಪ್ರತಿವರ್ಷ ಆಯೋಜಿಸಿ ಕೊಂಡು ಬರಲಾಗುತ್ತಿದೆ ಎಂದು ಹೇಳಿದರು.ಇದೇ ಸಂದರ್ಭದಲ್ಲಿ ಯುವ ವಿದ್ಯಾರ್ಥಿಗಳಿಗೆ ಪ್ರೇರೇಪಿಸಲು ಯು.ಪಿ.ಎಸ್. ತೇರ್ಗಡೆಯಾಗಿರುವ ಪ್ರತಿಭೆಗಳನ್ನು ಸನ್ಮಾನಿಸಲಾಗುತ್ತಿದೆ. ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಸಾಧನೆ ಮಾಡುವ ಮೂಲಕ ಕೋಲಾರ ಜಿಲ್ಲೆಗೆ ಹಾಗೂ ನಿಮ್ಮ ಪೋಷಕರಿಗೆ ಕೀರ್ತಿ ತರುವಂತಾಗ ಬೇಕೆಂದು ಹಾರೈಕೆಯ ನುಡಿಗಳಾಡಿದರು. ಕಲಾವಿದ ಕೃಷ್ಣ ಮತ್ತು ತಂಡದವರಿಂದ ನಾಡಗೀತೆ ಹಾಡುಗಾರಿಕೆ ನಡೆಯಿತು.