ಇತ್ತೀಚೆಗೆ ಜಿಲ್ಲಾ ಸತ್ರ ನ್ಯಾಯಾಲಯ ಕ್ರಮವಾಗಿ ಜೀವಾವಧಿ ಮತ್ತು ಮರಣದಂಡನೆ ಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು.
ಭಟ್ಕಳ; ಹಾಡವಳ್ಳಿಯ ಶಂಭು ಭಟ್ಟ ಕುಟುಂಬದ ಕೊಲೆ ಪ್ರಕರಣದ ಆರೋಪಿಗಳಿಗೆ ನ್ಯಾಯಾಲಯದಿಂದ ಕಠಿಣ ಶಿಕ್ಷೆ ತೀರ್ಪು ಪ್ರಕಟವಾದ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ. ನಾರಾಯಣ ಅವರು ಹಾಡವಳ್ಳಿಯ ಘಟನಾ ಸ್ಥಳಕ್ಕೆ ತೆರಳಿ ಶಂಭು ಭಟ್ಟರ ಕುಟುಂಬದ ಮಕ್ಕಳು ಮತ್ತು ಸಾಕ್ಷ್ಯ ನುಡಿದವರಿಗೆ ಧೈರ್ಯ ಹೇಳಿ ಪರಿಸ್ಥಿತಿ ಅವಲೋಕಿಸಿದರು.
ಹಾಡವಳ್ಳಿಯ ಶಂಭು ಭಟ್ಟ ಸೇರಿದಂತೆ ಅವರ ಪತ್ನಿ, ಮಗ, ಸೊಸೆ ಸಹಿತ ನಾಲ್ವರನ್ನು ಕೊಲೆ ಮಾಡಿದ ಆರೋಪಿಗಳಾದ ಶ್ರೀಧರ ಭಟ್ಟ ಮತ್ತು ಆತನ ಮಗ ವಿನಯ ಭಟ್ಟ ಈತನಿಗೆ ಇತ್ತೀಚೆಗೆ ಜಿಲ್ಲಾ ಸತ್ರ ನ್ಯಾಯಾಲಯ ಕ್ರಮವಾಗಿ ಜೀವಾವಧಿ ಮತ್ತು ಮರಣದಂಡನೆ ಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು. ಈ ಕೊಲೆ ಪ್ರಕರಣದಲ್ಲಿ ಹಲವರು ಸಾಕ್ಷ್ಯ ನುಡಿದಿದ್ದರು. ಘಟನೆ ನಡೆದ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ ನಾರಾಯಣ ಭೇಟಿ ನೀಡಿ ಶಂಭು ಭಟ್ಟರ ಮೊಮ್ಮಕ್ಕಳಿಗೆ ಸಾಂತ್ವನದ ಜತೆಗೆ ಧೈರ್ಯ ತುಂಬಿದರು.ಪ್ರಸ್ತುತ ಸ್ಥಳದಲ್ಲಿನ ಪರಿಸ್ಥಿತಿ ಅವಲೋಕಿಸಿದ ಅವರು, ಯಾವುದೇ ಕಾರಣಕ್ಕೂ ಯಾರೂ ಭಯ ಪಡುವ ಅಗತ್ಯವಿಲ್ಲ ಎಂದರು. ಇದೇ ಸಂದರ್ಭದಲ್ಲಿ ಅವರು ಪ್ರಮುಖ ಸಾಕ್ಷ್ಯ ನುಡಿದ ವ್ಯಕ್ತಿಗಳ ಮನೆಗೂ ತೆರಳಿ ಅವರಿಗೂ ಸಹ ಧೈರ್ಯ ತುಂಬಿದರು. ಎಸ್ಪಿ ಅವರು ಈ ಪ್ರಕರಣದಲ್ಲಿ ಉತ್ತಮ ಕೆಲಸ ಮಾಡಿದ ಪೊಲೀಸ್ ಸಿಬ್ಬಂದಿ ವಿನಾಯಕ ಪಾಟೀಲ್ ಮತ್ತಿತರರ ಬಗ್ಗೆ ಮೆಚ್ಚುಗೆ ಮಾತನಾಡಿದರು.
ಈ ಸಂದರ್ಭದಲ್ಲಿ ಶಂಭು ಭಟ್ಟರ ಮೊಮ್ಮಕ್ಕಳಾದ ಶರಧಿ ರಾಘವೇಂದ್ರ ಮತ್ತು ಶರ್ವ ರಾಘವೇಂದ್ರ , ಪುತ್ರಿ ಜಯಾ ಅಡಿಗ, ಅಳಿಯ ಪ್ರಕಾಶ ಅಡಿಗ, ಸ್ಥಳೀಯ ಪೊಲೀಸ್ ಅಧಿಕಾರಿಗಳು ಮುಂತಾ್ವರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.