ಕನ್ನಡಪ್ರಭ ವಾರ್ತೆ ಸಿದ್ದಾಪುರ
ಎಲ್ಲರೂ ಕಾನೂನು ಚೌಕಟ್ಟಿನಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರ ವಹಿಸಿ ಶಾಂತಿಯುತವಾಗಿ ಬಕ್ರೀದ್ ಹಬ್ಬವನ್ನು ಆಚರಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಮನವಿ ಮಾಡಿದರು.ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಬಕ್ರೀದ್ ಹಬ್ಬದ ಹಿನ್ನಲೆಯಲ್ಲಿ ಕರೆಯಲಾಗಿದ್ದ ಶಾಂತಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಬಲಿ ಹಬ್ಬ ಎಂದು ಪ್ರಖ್ಯಾತವಾದ ಬಕ್ರೀದ್ ಹಬ್ಬದಲ್ಲಿ ಸಂಗ್ರಹವಾಗುವ ತ್ಯಾಜ್ಯಗಳನ್ನು ನಿವಾಸಿಗಳಿಗೆ ತೊಂದರೆಯಾಗದಂತೆ ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಬೇಕೆಂದರು.
ಹಾಗೂ ಜಿಲ್ಲೆಯಲ್ಲಿ ಅಸ್ಸಾಂ ರಾಜ್ಯದ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿದ್ದು ಅವರು ಹೊರಗಿನ ಪ್ರದೇಶಗಳಿಂದ ಗೋಮಾಂಸ ತಂದು ಹಂಚದಂತೆ ಅವರುಗಳಿಗೆ ತಿಳಿಹೇಳುವಂತೆ ತಿಳಿಸಿದ ಅವರು ಅಂತಹ ಪ್ರಕರಣಗಳು ಕಂಡುಬಂದಲ್ಲಿ ಕ್ರಮ ಜರುಗಿಸುವುದಾಗಿ ಹೇಳಿದರು.ಹಬ್ಬದ ದಿನದಂದು ಯುವಕರು ಮಸೀದಿಗಳಲ್ಲಿ ಪ್ರಾರ್ಥನೆ ಮುಗಿಸಿದ ಬಳಿಕ ಹಬ್ಬವನ್ನು ಸಂಭ್ರಮದಿಂದ ಆಚರಿಸಲು ತಮ್ಮ ವಾಹನಗಳಲ್ಲಿ ಮಿತಿಮೀರಿದ ವೇಗದಲ್ಲಿ ತೆರಳಿ ಈ ಹಿಂದೆ ಹಲವಾರು ಅಪಘಾತಗಳು ಸಂಭವಿಸಿದೆ. ಈ ಬಗ್ಗೆ ಮಸೀದಿಯ ಪ್ರಮುಖರು ಹಾಗೂ ಪೋಷಕರು ಯುವಕರಿಗೆ ಬುದ್ದಿ ಮಾತುಗಳನ್ನು ಹೇಳುವ ಮೂಲಕ ಅವರಲ್ಲಿ ಜಾಗೃತಿ ಮೂಡಿಸಿ ನಿಧಾನವಾಗಿ ವಾಹನಗಳನ್ನು ಚಲಾಯಿಸುವಂತೆ ತಿಳುವಳಿಕೆ ನೀಡಬೇಕೆಂದು ತಿಳಿಸಿದರು.
ಕಳೆದ ವರ್ಷ ಜಿಲ್ಲೆಯಲ್ಲಿ 86 ಅಪಘಾತಗಳು ಸಂಭವಿಸಿರುವುದಾಗಿ ಮಾಹಿತಿ ನೀಡಿದ ಅವರು ಅಂತಹ ಪ್ರಕರಣಗಳ ವಿರುದ್ಧ ಪೊಲೀಸ್ ಇಲಾಖೆಯು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು. ಪೋಲಿಸ್ ಇಲಾಖೆ ಜಿಲ್ಲೆಯಲ್ಲಿ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕುತ್ತಿದ್ದು ಮದ್ಯಪಾನ ಮಾಡಿ ವಾಹನ ಚಾಲನೆ ಗಾಂಜಾ ಮಾರಾಟ ಅಪ್ರಾಪ್ತ ವಯಸ್ಕರಿಗೆ ವಾಹನ ಚಲಾಯಿಸಲು ನೀಡಿದಂತಹ ಪ್ರಕರಣಗಳನ್ನು ತಡಗಟ್ಟುತ್ತಿದ್ದು ಶಿಕ್ಷೆಯನ್ನು ನೀಡಿದೆ ಎಂದರು. ಹಾಗಾಗಿ ಅಕ್ರಮ ಚಟುವಟಿಕೆಗಳ ಬಗ್ಗೆ ಮಸೀದಿಗಳಲ್ಲಿ ಜಾಗೃತಿ ಮೂಡಿಸುವಂತೆ ಮನವಿ ಮಾಡಿದ ಅವರು ಪೋಲಿಸ್ ಇಲಾಖೆಯೊಂದಿಗೆ ಸಹಕರಿಸಿ ಶಾಂತಿಯುತವಾಗಿ ಬಕ್ರೀದ್ ಹಬ್ಬ ಆಚರಿಸುವಂತೆ ತಿಳಿಸಿದರು.ಈ ಸಂದರ್ಭ ಡಿವೈಎಸ್ ಪಿ ಸೂರಜ್ ಮಡಿಕೇರಿ ವೃತ್ತ ನಿರೀಕ್ಷಕ ರಾಜು, ಸಿದ್ದಾಪುರ ಠಾಣಾಧಿಕಾರಿ ರಾಘವೇಂದ್ರ ಸೇರಿದಂತೆ ಸಿದ್ದಾಪುರ ಭಾಗದ ಮಸೀದಿಗಳ ಪ್ರಮುಖರು ಸ್ಥಳೀಯರು ಇದ್ದರು.