ಕನ್ನಡಪ್ರಭ ವಾರ್ತೆ ಮೇಲುಕೋಟೆ
ಸಾಂಸ್ಕೃತಿಕ ಮತ್ತು ಧಾರ್ಮಿಕ ಪರಂಪರೆಯ ಸೌಹಾರ್ಧಯುತ ವಿನಿಮಯಕ್ಕಾಗಿ ಚೆಲುವನಾರಾಯಣಸ್ವಾಮಿಗೆ ರಾಜಮುಡಿ ಉತ್ಸವದಂದು ತಮಿಳುನಾಡು ಸರ್ಕಾರದ ಪರವಾಗಿ ಕಾಂಚೀಪುರಂ ವಿಭಾಗದ ಧಾರ್ಮಿಕ ದತ್ತಿ ಇಲಾಖೆ ಜಂಟಿ ನಿರ್ದೇಶಕ ಕುಮಾರದೊರೈ ಮತ್ತು ಅಧಿಕಾರಿಗಳು, ಅರ್ಚಕರ ತಂಡ ವಿಶೇಷ ವಸ್ತ್ರ ಸಮರ್ಪಣೆ ಮಾಡಿದರು.ಈ ವೇಳೆ ಮಾಧ್ಯಮದೊಂದಿಗೆ ಮಾತನಾಡಿದ ಜಂಟಿ ಆಯುಕ್ತ ಕುಮಾರದೊರೈ, ತಮಿಳುನಾಡಿನಲ್ಲಿ ಜನಿಸಿದ ರಾಮಾನುಜಾರ್ಯರ ಕರ್ಮಭೂಮಿ ಮೇಲುಕೋಟೆಗೆ ತಮಿಳುನಾಡಿನಿಂದ ಸಹಸ್ರಾರು ಭಕ್ತರು ಆಗಮಿಸುತ್ತಾರೆ. ಈ ಕಾರಣ ಭಕ್ತರ ವಾಸ್ತವ್ಯಕ್ಕೆ ಭವನ ನಿರ್ಮಿಸಲು ಹಾಗೂ ರಾಜಮುಡಿ ಉತ್ಸವಕ್ಕೆ ಉತ್ತಮ ವ್ಯವಸ್ಥೆ ಮಾಡಲು ತಮಿಳುನಾಡು ಧಾರ್ಮಿಕದತ್ತಿ ಇಲಾಖೆ ಸಿದ್ಧವಿದೆ ಎಂದರು.
ಸರ್ಕಾರ ಎರಡೂ ರಾಜ್ಯಗಳ ಸೌಹಾರ್ಧಯುತ ಬೆಳವಣಿಗೆ ಪರಂಪರೆಯ ಪರಸ್ಪರ ವಿನಿಮಯಕ್ಕಾಗಿ ನೀಡಿರುವ ವಿಶೇಷ ಆದೇಶದಂತೆ ರಾಮಾನುಜರಿಗೇ ಗುರುಗಳಾಗಿದ್ದ ಮಧುರಮಂಗಲಂ ಎಂಬಾರ್ ಮತ್ತು ಕೇಶವಪೆರುಮಾಳ್ ದೇವಾಲಯದಿಂದ ಚೆಲುವನಾರಾಯಣನಿಗೆ ವಿಶೇಷ ಗೌರವ ಸಮರ್ಪಣೆಯನ್ನು ಮಾಡಲಾಗಿದೆ ಎಂದು ತಿಳಿಸಿದರು.ಈ ವರ್ಷ ರಾಜಮುಡಿ ಉತ್ಸವಕ್ಕೆ ಪುಷ್ಪ ಕೈಂಕರ್ಯ, ವಿಶೇಷವಾದ್ಯ, ವಸ್ತ್ರ ಸಮರ್ಪಣೆ ಮಾಡಿದ್ದೇವೆ. ಈ ಪರಂಪರೆ ನಾಲ್ಕು ವರ್ಷಗಳಿಂದ ಮುಂದುವರೆಯುತ್ತಾ ಬಂದಿದೆ. ಮತ್ತಷ್ಟು ರೀತಿಯಲ್ಲಿ ವಿಶೇಷ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತದೆ ಎಂದರು.
ತಮಿಳುನಾಡಿನಿಂದ ತಂದ ವಸ್ತ್ರಗಳನ್ನು ದೇವಾಲಯದ ಹೊರಪ್ರಾಕಾರದ ಸುತ್ತ ಮಂಗಳವಾದ್ಯದೊಡನೆ ಭವ್ಯ ಮೆರವಣಿಗೆ ಮಾಡಿದ ನಂತರ ಚೆಲುವನಾರಾಯಣಸ್ವಾಮಿಗೆ ಅರ್ಪಿಸಿ ವಿಶೇಷಪೂಜೆ ಮಾಡಿಸಲಾಯಿತು.ಈ ವೇಳೆ ಶ್ರೀಪೆರಂಬೂದೂರು ರಾಮಾನುಜಾಚಾರ್ಯರ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ರಾಜಾ ಇರುಂಪೆರುವಲತಿ, ದೇವಾಲಯದ ಟಿ.ಲಕ್ಷ್ಮಣರಾವ್, ವೆಂಕಟೇಶನ್, ಚಕ್ರಪಾಣಿ, ಮೇಲುಕೋಟೆ ದೇವಾಲಯದ ಇಒ ಎನ್.ಎಸ್. ಶೀಲ, ಪಾರುಪತ್ತೇಗಾರರಾದ ಸ್ಥಾನೀಕಂ ಶ್ರೀನಿವಾಸ ನರಸಿಂಹನ್ ಗುರೂಜಿ, ಪರಿಚಾರಕ ಎಂ.ಎನ್ ಪಾರ್ಥಸಾರಥಿ ಇತರರು ಇದ್ದರು.
ಇಂದು ತೊಟ್ಟಿಲಮಡು ಜಾತ್ರೆ:ರಾಜಮುಡಿ ಬ್ರಹ್ಮೋತ್ಸವದ 6ನೇ ದಿನವಾದ ನ.11ರಂದು ಕಣಿವೆಬಳಿಯ ತೊಟ್ಟಿಲಮಡು ಬಳಿ ಸಂಜೆ 4 ರಿಂದ ಜಾತ್ರೆ ನಡೆಯಲಿದೆ. ಈಗಾಗಲೇ ಗ್ರಾಪಂ ವತಿಯಿಂದ ದೀಪಾಲಂಕಾರ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ವಿವಿಧ ಸಮುದಾಯದವರು ಸಂಜೆ ರುಚಿಕರವಾದ ಕದಂಬ ಪ್ರಸಾದ ತಯಾರಿಸಿ ಜಾತ್ರೆಗೆ ಬರುವ ಸಹಸ್ರಾರು ಭಕ್ತರಿಗೆ ವಿತರಸುವರು.
ಜಾತ್ರೆಗೂ ಮುನ್ನ ಅಷ್ಟತೀರ್ಥೋತ್ಸವ ಬೆಳಗ್ಗೆ 8 ಗಂಟೆಗೆ ಕಲ್ಯಾಣಿಯಲ್ಲಿ ಮೊದಲ ಅಭಿಷೇಕದೊಂದಿಗೆ ಆರಂಭವಾಗಿ ಸಂಜೆ 4 ಗಂಟೆಗೆ ವೈಕುಂಠಗಂಗೆ ತೊಟ್ಟಿಲ ಮಡುವಿನಲ್ಲಿ ಕೊನೆ ಅಭಿಷೇಕದೊಂದಿಗೆ ಮುಕ್ತಾಯವಾಗಲಿದೆ. ನಂತರ ಯೋಗಾ ನರಸಿಂಹಸ್ವಾಮಿ ಬೆಟ್ಟದ ಗಿರಿಪ್ರದಕ್ಷಿಣೆ ನಡೆದು ಮಹೋತ್ಸವ ರಾತ್ರಿ 8 ಗಂಟೆಗೆ ಮುಕ್ತಾಯವಾಗಲಿದೆ.