ಹಣ ಬಲ, ಅಧಿಕಾರದ ಬಲ, ಜಾತಿಯ ವಿಷ ಬೀಜ ಬಿತ್ತಿ ಒಂದು ಕಾಲದಲ್ಲಿ ಚುನಾವಣೆ ಗೆಲ್ಲುತ್ತಿದ್ದರು. ಈಗ ಕಾಲ ಬದಲಾಗಿದೆ. ಇದು ಮೋದಿ ಕಾಲ. ಈ ಉಪ ಚುನಾವಣೆಯಲ್ಲಿ ಬಿಜೆಪಿ ಮೂರು ಕ್ಷೇತ್ರಗಳಲ್ಲೂ ಗೆಲ್ಲುತ್ತದೆ. ಸಿದ್ದರಾಮಯ್ಯ ನೀವು ಯಾವ ಕ್ಷೇತ್ರ ಗೆಲ್ಲುತ್ತೀರಿ ಹೇಳಿ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸವಾಲು ಹಾಕಿದರು.
ಹಾವೇರಿ (ಶಿಗ್ಗಾಂವಿ): ಹಣ ಬಲ, ಅಧಿಕಾರದ ಬಲ, ಜಾತಿಯ ವಿಷ ಬೀಜ ಬಿತ್ತಿ ಒಂದು ಕಾಲದಲ್ಲಿ ಚುನಾವಣೆ ಗೆಲ್ಲುತ್ತಿದ್ದರು. ಈಗ ಕಾಲ ಬದಲಾಗಿದೆ. ಇದು ಮೋದಿ ಕಾಲ. ಈ ಉಪ ಚುನಾವಣೆಯಲ್ಲಿ ಬಿಜೆಪಿ ಮೂರು ಕ್ಷೇತ್ರಗಳಲ್ಲೂ ಗೆಲ್ಲುತ್ತದೆ. ಸಿದ್ದರಾಮಯ್ಯ ನೀವು ಯಾವ ಕ್ಷೇತ್ರ ಗೆಲ್ಲುತ್ತೀರಿ ಹೇಳಿ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸವಾಲು ಹಾಕಿದರು. ಶಿಗ್ಗಾಂವಿಯ ಪಟ್ಟಣದ ಸಂತೆ ಮೈದಾನದಲ್ಲಿ ನಡೆದ ಬಿಜೆಪಿಯ ಬೃಹತ್ ಸಾರ್ವಜನಿಕ ಸಮಾವೇಶದಲ್ಲಿ ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿ ಅವರನ್ನು ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸಿ ರಾಜ್ಯ ಸರ್ಕಾರಕ್ಕೆ ಪಾಠ ಕಲಿಸುವಂತೆ ಮನವಿ ಮಾಡಿದರು.
ನಾನು ಮುಖ್ಯಮಂತ್ರಿಯಾಗಿದ್ದಾಗ ಭಾಗ್ಯಲಕ್ಷ್ಮೀ ಯೋಜನೆ ಜಾರಿಗೆ ತಂದಿದ್ದೆ. ಅದು ಈಗ ಮೆಚ್ಯುರಿಟಿಗೆ ಬಂದಿದೆ. ಈ ಪಾಪರ್ ಸರ್ಕಾರ ಆ ಹಣ ಬಿಡುಗಡೆ ಮಾಡಿಲ್ಲ. ಈ ಸರ್ಕಾರ ದಿವಾಳಿಯಾಗಿದೆ. ಒಂದು ವಾರದಲ್ಲಿ ಹೆಣ್ಣು ಮಕ್ಕಳಿಗೆ ಭಾಗ್ಯಲಕ್ಷ್ಮೀ ಹಣ ಬಿಡುಗಡೆ ಮಾಡದಿದ್ದರೆ ರಾಜ್ಯಾದ್ಯಂತ ಹೋರಾಟ ಮಾಡುತ್ತೇನೆ ಎಂದು ಎಚ್ಚರಿಕೆ ನೀಡಿದರು. ರಾಜ್ಯಾದ್ಯಂತ ಒಂದೂ ಅಭಿವೃದ್ಧಿ ಕಾರ್ಯ ನಡೆಯುತ್ತಿಲ್ಲ. ಅಬಕಾರಿ ಇಲಾಖೆಯಲ್ಲಿ ಲೂಟಿ ಮಾಡುತ್ತಿದ್ದಾರೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಈ ಸರ್ಕಾರ ಸಂಪೂರ್ಣ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂದು ವಾಗ್ದಾಳಿ ನಡೆಸಿದರು.ಸಮಾವೇಶದಲ್ಲಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಮಾಜಿ ಸಚಿವರಾದ ರಾಜುಗೌಡ, ಸಿ.ಸಿ. ಪಾಟೀಲ್, ಬೈರತಿ ಬಸವರಾಜ, ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿ, ಮಾಜಿ ಶಾಸಕರಾದ ಅರುಣಕುಮಾರ ಪೂಜಾರ, ವಿರೂಪಾಕ್ಷಪ್ಪ ಬಳ್ಳಾರಿ, ಶಿವರಾಜ ಸಜ್ಜನರ ಸೇರಿದಂತೆ ಅನೇಕ ಬಿಜೆಪಿ ನಾಯಕರು ಹಾಜರಿದ್ದರು.ಶಿಗ್ಗಾಂವಿ ಕ್ಷೇತ್ರದಲ್ಲಿ ಅಭಿವೃದ್ಧಿ ಪಥ ಮುಂದುವರಿಯಬೇಕು. ಸೌಹಾರ್ದತೆ ಮುಂದುವರಿಯಬೇಕು. ಪೊಲೀಸ್ ರಾಜ್ಯ ನಿಲ್ಲಬೇಕು ಎಂದು ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.ಸಿಎಂ ಸಿದ್ದರಾಮಯ್ಯ ಅವರು ಈಗ ನಮ್ಮ ಕ್ಷೇತ್ರದ ಹಳ್ಳಿ ಹಳ್ಳಿಗೆ ಬರುತ್ತಿದ್ದಾರೆ. ಸಚಿವರು, ಶಾಸಕರು ನಿಮ್ಮ ಕ್ಷೇತ್ರದಲ್ಲಿ ಮಾಡಿರುವ ಕೆಲಸದ ಪಟ್ಟಿ ಬಿಡುಗಡೆ ಮಾಡಿ, ನಾನು ನನ್ನ ಕ್ಷೇತ್ರದ ಅಭಿವೃದ್ಧಿ ಪಟ್ಟಿ ಬಿಡುಗಡೆ ಮಾಡುತ್ತೇನೆ. ಬೆಳಗಾವಿ ಜನರು ಅಲ್ಲಿನ ಶಾಸಕರು ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡದೇ ಕಾಣೆಯಾಗಿದ್ದಾರೆ ಎಂದು ಪೋನ್ ಮಾಡಿ ಹೇಳುತ್ತಿದ್ದಾರೆ. ಇಲ್ಲಿನ ಉಸ್ತುವಾರಿ ಸಚಿವರಿಗೆ ನಾವು ರೆಡಿ ಮಾಡಿದ್ದ ಟೆಕ್ಸ್ಟೈಲ್ ಪಾರ್ಕ್, ಬಸ್ ಡಿಪೋ ಉದ್ಘಾಟನೆ ಮಾಡಲು ಆಗಿಲ್ಲ ಎಂದು ವಾಗ್ದಾಳಿ ನಡೆದಿದರು. ಈ ಕ್ಷೇತ್ರದಲ್ಲಿ ಕ್ಲಬ್ಗಳು ಬಂದಾಗಬೇಕು, ಇನ್ನ ಮೇಲೆ ಶಿಕ್ಷಕರಿಂದಲೂ ವಸೂಲಿ ಮಾಡಲು ಮುಂದಾಗಿದ್ದಾರೆ. ಸೋತ ಅಭ್ಯರ್ಥಿಯಿಂದ ಹಫ್ತಾ ವಸೂಲಿ ಮಾಡುವ ವ್ಯವಸ್ಥೆ ಈ ಕ್ಷೇತ್ರದಲ್ಲಿ ನಡೆಯುತ್ತಿದೆ. ಅವರನ್ನು ಆರಿಸಿ ಕಳುಹಿಸಿದರೆ ಮುಂದೆ ಸಂಕಷ್ಟ ಎದುರಿಸಬೇಕಾಗುತ್ತದೆ. ಭರತ್ ಬೊಮ್ಮಾಯಿ ಅವರಿಗೆ ಮತ ನೀಡಿ ನಿಮ್ಮನ್ನು ನಾವು ರಕ್ಷಣೆ ಮಾಡುತ್ತೇವೆ ಎಂದರು.ಇನ್ನು ಇಪ್ಪತ್ತು, ಮೂವತ್ತು ವರ್ಷ ಈ ಕ್ಷೇತ್ರವನ್ನು ಪ್ರತಿನಿಧಿಸುವ ಶಕ್ತಿ ಭರತ್ ಬೊಮ್ಮಾಯಿಗೆ ಇದೆ. ಕಳ್ಳಕಾಕರಿಗೆ ಮತ ಹಾಕಿ ಮುಂದಿನ ದಿನಗಳಲ್ಲಿ ಪಶ್ಚಾತ್ತಾಪ ಪಡುವಂತಾಗಬಾರದು ಮಾಜಿ ಸಚಿವ ಬೈರತಿ ಬಸವರಾಜ ಹೇಳಿದರು.ಸತೀಶ್ ಜಾರಕಿಹೊಳಿ ಸಾಹುಕಾರು ಸಿಎಂ ಅಕ್ಕೇನಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸಿ ಅಂತ ಶಿಗ್ಗಾಂವಿಯಲ್ಲಿ ಓಡಾಡುತ್ತಿದ್ದಾರೆ. ವಾಲ್ಮೀಕಿ ನಿಗಮದ ಹಗರಣವಾದಾಗಾಗ ಪ್ರಶ್ನಿಸಿ ಸಚಿವ ಸ್ಥಾನಕ್ಕೆ ರಾಜಿನಾಮೆ ಕೊಡಬೇಕಿತ್ತು. ನ. ೧೩ರ ನಂತರ ಇವರ್ಯಾರು ನಿಮ್ಮ ಕೈಗೆ ಸಿಗೋದಿಲ್ಲ, ಯಾವಾಗಲೂ ನಿಮ್ಮ ಕೈಗೆ ಸಿಗುವ ಬೊಮ್ಮಾಯಿ ಅವರ ಬೆಂಬಲಕ್ಕೆ ಕ್ಷೇತ್ರದ ಜನತೆ ನಿಲ್ಲಬೇಕು ಮಾಜಿ ಸಚಿವ ರಾಜು ಗೌಡ ಹೇಳಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.