ನರಗುಂದ: ಬದುಕಿನಲ್ಲಿ ಭೌತಿಕ ಸಂಪತ್ತು ಕೆಲವು ಕಾಲದವರೆಗೆ ಸುಖ ಕೊಡಬಹುದು. ಆಧ್ಯಾತ್ಮ ಸಂಪತ್ತು ನಿಜವಾದ ಸಂಪತ್ತು. ಸುಖ ಶಾಂತಿ ಬದುಕಿಗೆ ಆಧ್ಯಾತ್ಮ ಜೀವನ ಸಂಜೀವಿನಿಯಾಗಿದೆ ಎಂದು ಬಾಳೆಹೊನ್ನೂರು ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಹೇಳಿದರು.
ಅಮ್ಮಿನಭಾವಿ ಪಂಚಗೃಹ ಹಿರೇಮಠದ ಡಾ. ಅಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮಿಗಳು ಆಶೀರ್ವಚನ ನೀಡಿದರು. ಅತಿಥಿಗಳಾಗಿ ಆಗಮಿಸಿದ ನರಗುಂದ ಕ್ಷೇತ್ರದ ಶಾಸಕ, ಮಾಜಿ ಸಚಿವ ಸಿ.ಸಿ. ಪಾಟೀಲ ಮಾತನಾಡಿ, ಸಕಲ ಜೀವಾತ್ಮರಿಗೆ ಒಳಿತನ್ನೇ ಬಯಸಿದ ವೀರಶೈವಕ್ಕೆ ಅಪೂರ್ವ ಇತಿಹಾಸ ಪರಂಪರೆಯಿದೆ. ಜಗದ್ಗುರು ರೇಣುಕಾಚಾರ್ಯರು ಪೂರ್ವ ಕಾಲದಲ್ಲಿ ಕೊಟ್ಟ ಸಂದೇಶವನ್ನು 12ನೇ ಶತಮಾನದ ಬಸವಾದಿ ಶರಣರು ಪರಿಪಾಲಿಸಿ ಮತ್ತಷ್ಟು ಬೆಳೆಸಿದ ಕೀರ್ತಿ ಸಲ್ಲುತ್ತದೆ ಎಂದರು.
ಅಧ್ಯಕ್ಷತೆ ವಹಿಸಿ ನರಗುಂದ ಪಂಚಗೃಹ ಗುಡ್ಡದ ಹಿರೇಮಠದ ಸಿದ್ಧಲಿಂಗ ಶಿವಾಚಾರ್ಯ ಸ್ವಾಮಿಗಳು ಆಶೀರ್ವಚನ ನೀಡಿದರು. ಪುರಸಭೆ ಅಧ್ಯಕ್ಷ ಅನ್ನಪೂರ್ಣ ಯಲಿಗಾರ, ಪಂಚಣ್ಣ ಬೆಳವಟಗಿ, ಶಿವಾನಂದ ಮುತವಾಡ, ಅಜ್ಜಪ್ಪಗೌಡ ಪಾಟೀಲ, ಪಿ.ಎಲ್.ಪಾಟೀಲ, ಪವಾಡೆಪ್ಪ ವಡ್ಡಿಗೇರಿ, ಶಿವಾನಂದ ಮುತವಾಡ, ನ್ಯಾಯವಾದಿ ಎಸ್.ಎಚ್. ಪಾಟೀಲ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಶ್ರೀ ರಂಭಾಪುರಿ ಜಗದ್ಗುರುಗಳಿಂದ ಗುರು ರಕ್ಷೆ ಸ್ವೀಕರಿಸಿದರು. ಸಮಾರಂಭಕ್ಕೂ ಮುನ್ನ ಗವಿಸಿದ್ಧೇಶ್ವರ ಶಾಸ್ತ್ರಿಗಳು ಬೂದಿಹಾಳ ಇವರಿಂದ ನವಲಗುಂದ ಅಜಾತ ನಾಗಲಿಂಗ ಅಜ್ಜನ ಚರಿತ್ರೆ ಕುರಿತು ಪ್ರವಚನ ನಡೆಯಿತು. ಸಮಾರಂಭದ ನಂತರ ಸಕಲ ಸದ್ಭಕ್ತರಿಗೆ ಅನ್ನ ದಾಸೋಹ ನೆರವೇರಿತು.