ಮಂಗಗಳಿಗೆ ಚೆಲ್ಲಾಟ, ರೈತರಿಗೆ ಪ್ರಾಣ ಸಂಕಟ !

KannadaprabhaNewsNetwork |  
Published : Jul 23, 2024, 12:31 AM IST
ಮಂಗಗಳು ಹೆಸರನ್ನು ತಿದ್ದು ಹಾಳು ಮಾಡಿರುವುದು. | Kannada Prabha

ಸಾರಾಂಶ

ಬೆಳೆದ ಹೆಸರನ್ನು ಮಂಗಗಳಿಂದ ರಕ್ಷಣೆ ಮಾಡಲು ಪಟಾಕಿ ಸಿಡಿಸಿ ಏನೇ ತಂತ್ರಗಾರಿಕೆ ಮಾಡಿದರೂ ಪ್ರಯೋಜನವಾಗುತ್ತಿಲ್ಲ

ಮಹೇಶ ಛಬ್ಬಿ ಗದಗ

ರೈತನಿಗೆ ಒಂದಲ್ಲೊಂದು ಕಾಟ ತಪ್ಪಿದ್ದಲ್ಲ, ಅಕಾಲಿಕ ಮಳೆ, ಅತಿವೃಷ್ಟಿ, ಅನಾವೃಷ್ಟಿ ಹೀಗೆ ರೈತ ಸಮುದಾಯ ಒಂದಲ್ಲ ಒಂದು ಸಂಕಟದಲ್ಲಿ ಪ್ರಸಕ್ತ ದಿನಮಾಗಳಲ್ಲಿ ಸಿಲುಕುವಂತಾಗಿದೆ.

ತಾಲೂಕಿನ ಚಿಂಚಲಿ, ಕಲ್ಲೂರ ನೀಲಗುಂದ, ಅಂತೂರ-ಬೆಂತೂರ ಭಾಗಗಳಲ್ಲಿ ಮಂಗಗಳ ಹಾವಳಿ ಹೆಚ್ಚಾಗಿದ್ದು, ಹೆಸರು ಬಿತ್ತನೆ ಮಾಡಿದ ಹೊಲಗಳ ಮೇಲೆ ಮಂಗಗಳ ಹಿಂಡು ದಾಳಿ ಮಾಡಿ ಹೆಸರನ್ನು ತಿಂದು ನಾಶ ಪಡಿಸುತ್ತಿರುವುದು ರೈತರನ್ನು ನಿದ್ದೆಗೆಡಿಸಿದೆ.

ಬೆಳೆದ ಹೆಸರನ್ನು ಮಂಗಗಳಿಂದ ರಕ್ಷಣೆ ಮಾಡಲು ಪಟಾಕಿ ಸಿಡಿಸಿ ಏನೇ ತಂತ್ರಗಾರಿಕೆ ಮಾಡಿದರೂ ಪ್ರಯೋಜನವಾಗುತ್ತಿಲ್ಲ. ಸದ್ಯ ಹೆಸರು ರಕ್ಷಿಸಿಕೊಳ್ಳುವುದು ರೈತರಿಗೆ ಸವಾಲಾಗಿದೆ. ಕಳೆದ ವರ್ಷ ಬರಗಾಲ ಬಿದ್ದು ಕುಡಿಯುವ ನೀರಿಗೂ ಪರದಾಡುವಂತಾಗಿ ರೈತರ ಬದುಕು ನಡೆಸುವುದೇ ಕಷ್ಟಕರವಾಗಿತ್ತು. ಪ್ರಸಕ್ತ ಉತ್ತಮ ಮಳೆಯಿಂದ ಉತ್ಸಾಹದಲ್ಲೇ ರೈತರು ಬಿತ್ತನೆ ಮಾಡಿ ಬೆಳೆಗಳು ಸಮೃದ್ಧವಾಗಿ ಬೆಳೆದಿರುವುದು ರೈತರ ಸಂತೋಷಕ್ಕೆ ಪಾರಾವೇ ಇಲ್ಲದಂತಾಗಿತ್ತು, ಆದರೆ ಕಳೆದೊಂದು ವಾರದಿಂದ ನಿರಂತರ ಸುರಿಯುತ್ತಿರುವ ಮಳೆ, ವನ್ಯ ಜೀವಿಗಳ ಹಾವಳಿಯಿಂದ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗುತ್ತದೆ ಎನ್ನುವ ಭೀತಿ ಕಾಡುತ್ತಿದೆ.

ಗ್ರಾಮ, ತೋಟಗಳಿಗೆ ಬರುತ್ತಿದ್ದ ಮಂಗಗಳು, ಇತ್ತೀಚಿಗೆ ಮನುಷ್ಯರ ಭಯವೇ ಇಲ್ಲದಂತೆ ಹೊಲಗಳಿಗೆ ನುಗ್ಗಿ ಬೆಳೆದ ಫಸಲನ್ನು ಹಾಳು ಮಾಡಿ ರೈತರಿಗೆ ದುಸ್ವಪ್ನದಂತೆ ಕಾಡುತ್ತಿವೆ.

ಹೆಸರು ಹೂ, ಎಳೆ ಕಾಯಿಗಳನ್ನು ಬಿಟ್ಟು ಇನ್ನೆನು ಕೆಲವೇ ದಿನಗಳಲ್ಲಿ ಕಟಾವಿಗೆ ಬರುತ್ತವೆ ಆದರೆ ಅವುಗಳನ್ನು ಬಿಡದೆ ತಿಂದು ಹಾಳು ಮಾಡುತ್ತಿವೆ. ನಾಯಿ, ಏರ್‌ಗನ್‌, ಪಟಾಕಿಗಳ ಸದ್ದಿಗೆ ಕ್ಯಾರೇ ಎನ್ನದ ಮಂಗಗಳ ಉಪಟಳ ರೈತರನ್ನು ಸಂಕಷ್ಟಕ್ಕೆ ದೂಡಿದೆ.

ಕ್ರಮಕ್ಕೆ ಒತ್ತಾಯ: ರೈತರು ಮಂಗಗಳ ಉಪಟಳಕ್ಕೆ ಕಡಿವಾಣ ಹಾಕಲು ಯಾವುದೇ ತಂತ್ರಗಾರಿಕೆ ಮಾಡಿದರೂ ಫಲ ನೀಡುತ್ತಿಲ್ಲ. ಮಂಗಗಳ ಹಾವಳಿಯಿಂದ ಬೇಸತ್ತ ರೈತರು ಮಂಗಗಳ ಉಪಟಳಕ್ಕೆ ಕಡಿವಾಣ ಹಾಕಲು ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಬೆಳೆ ಹಾನಿಗೆ ಪರಿಹಾರವಿಲ್ಲ: ಪ್ರತಿ ವರ್ಷ ಜಿಂಕೆ ಹಾವಳಿ, ಮಂಗಗಳ ಹಾವಳಿಯಿಂದ ತೋಟಗಾರಿಕೆ, ಮಳೆ ಆಶ್ರಿತ ಹೊಲಗಳಲ್ಲಿ ಬೆಳೆದ ಬೆಳೆಗಳು ಅಪಾರ ಪ್ರಮಾಣದಲ್ಲಿ ನಾಶವಾಗುತ್ತಿವೆ. ಆದರೆ ಇವುಗಳ ಹಾವಳಿ ತಡೆಯಲು ಇಲಾಖೆಗಳು ಕ್ರಮ ವಹಿಸುವುದಿಲ್ಲ. ಬೆಳೆ ನಷ್ಟ ಪರಿಹಾರವೂ ದೊರೆಯದಿರುವುದು ರೈತರ ಪಾಲಿಗೆ ಶಾಪವಾಗಿ ಪರಿಣಮಿಸಿದೆ.

ಮತ್ತೆ ಆತಂಕ: ಕಳೆದ ವರ್ಷ ಬರಗಾಲ ಬಿದ್ದು, ಸಂಕಷ್ಟದಲ್ಲಿದ್ದ ರೈತರಿಗೆ ಪ್ರಸಕ್ತ ವರ್ಷ ಉತ್ತಮ ಮಳೆ ಆಗಿ ಉತ್ತಮ ಆದಾಯದ ನೀರಿಕ್ಷೆಯಲ್ಲಿದ್ದರು, ಆದರೆ ಕಳೆದೊಂದು ವಾರದಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ತೇವಾಂಶ ಹೆಚ್ಚಾಗಿ ಬೆಳೆಗಳಲ್ಲಿ ಹಳದಿ ರೋಗ ಕಾಣಿಸುತ್ತಿದೆ. ಇದೇ ರೀತಿ ಮಳೆ ಮುಂದುವರೆದರೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗುತ್ತದೆ, ಇದರ ಜತೆ ಒಂದು ಕಡೆ ಮಂಗಗಳ ಕಾಟ, ಇನ್ನೊಂದು ಕಡೆ ಜಿಂಕೆ ಹಾವಳಿ ಇದೆಲ್ಲ ರೈತರನ್ನು ಮತ್ತೇ ಆತಂಕಕ್ಕೆ ದೂಡಿದೆ.

ಈ ಭಾಗದಲ್ಲಿ ಮಂಗಗಳ ಹಾವಳಿ ಹೆಚ್ಚಾಗಿದೆ. ಹೆಸರು ಎಳೆ ಕಾಯಿ, ಹೂ,ತಪ್ಪಲು (ಎಲೆ) ಬಿಡದೆ ತಿನ್ನುತ್ತಿವೆ. ಹಿಂಡು, ಹಿಂಡಾಗಿ ಬರುವ ಮಂಗಗಳು ಅರ್ಧ ಮರ್ಧ ಹೆಸರನ್ನು ತಿಂದು ನೆಲದ ಪಾಲು ಮಾಡುತ್ತಿವೆ. ಹೆಸರನ್ನು ರಕ್ಷಣೆ ಮಾಡಲು ಸದ್ಯ ಹೊಲದಲ್ಲಿ ಒಂದು ಗುಡಿಸಲು ಹಾಕಿ ಮಂಗಗಳನ್ನು ಕಾಯಲು ಒಂದು ಆಳು ಇಡಬೇಕಾದಂತಹ ಸ್ಥಿತಿ ಬಂದಿದೆ. ಸಂಬಂಧಪಟ್ಟ ಇಲಾಖೆಯವರು ಜಿಂಕೆ, ಮಂಗಗಳ ಹಾವಳಿಗೆ ಕಡಿವಾಣ ಹಾಕಲು ಕ್ರಮ ಕೈಗೊಳ್ಳಬೇಕು ಎಂದು ರೈತರಾದ ಮುತ್ತಣ್ಣ ಕತ್ತಿ ಹೇಳಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಸಿಲಿನ ಹೊಡೆತಕ್ಕೆ ಸಾವಿರಾರು ಮೀನುಗಳ ಮಾರಣಹೋಮ
ನಿರಾಶ್ರಿತರ ಕಣ್ಣೀರು ಒರೆಸುವ ಕೆಲಸ