ಅಮ್ಮತ್ತಿ ನೇತಾಜಿ ಶಾಲೆಯಲ್ಲಿ ಪುಟ್ಬಾಲ್ ತರಬೇತಿ ಶಿಬಿರ
ಕ್ರೀಡೆಯಿಂದ ಮಕ್ಕಳ ಮಾನಸಿಕ ಮತ್ತು ದೈಹಿಕ ಶಕ್ತಿ ಹೆಚ್ಚಾಗುವುದಲ್ಲದೆ ದುಶ್ಚಟಗಳನ್ನು ದೂರ ಮಾಡಬಹುದೆಂದು ನೇತಾಜಿ ಶಾಲೆಯ ಪುಟ್ಬಾಲ್ ತರಬೇತುದಾರ ವಿಜೇಶ್ ಹೇಳಿದರು.ಅಮ್ಮತ್ತಿ ನೇತಾಜಿ ಶಾಲೆಯಲ್ಲಿ ನೇತಾಜಿ ಸ್ಪೋರ್ಟ್ಸ್ ಅಕಾಡೆಮಿ ಏರ್ಪಡಿಸಿರುವ ಪುಟ್ಬಾಲ್ ತರಬೇತಿ ಶಿಬಿರದಲ್ಲಿ ಪಾಲ್ಗೊಂಡು ಮಾತನಾಡಿದರು.
45 ದಿನ ನಡೆಯುವ ಈ ಶಿಬಿರದಲ್ಲಿ ಭಾಗವಹಿಸುವ ಎಲ್ಲ ಮಕ್ಕಳಿಗೂ ಕ್ರೀಡೆಯಲ್ಲಿ ಉತ್ತಮ ತರಬೇತಿ ನೀಡಲಾಗುತ್ತದೆ. ಶಿಬಿರದಲ್ಲಿ ಉತ್ತಮ ಪ್ರದರ್ಶನ ನೀಡುವ ಮಕ್ಕಳನ್ನು ಬೆಂಗಳೂರಿನಲ್ಲಿ ಕರ್ನಾಟಕ ಸ್ಟೇಟ್ ಪುಟ್ಬಾಲ್ ಅಸೋಸಿಯೇಷನ್ ವತಿಯಿಂದ ನಡೆಯುವ ಯೂತ್ ಲೀಗ್ ಪಂದ್ಯಾಟಕ್ಕೆ ಕೊಡಗಿನ ತಂಡದಲ್ಲಿ ಭಾಗವಹಿಸಲು ಆಯ್ಕೆ ಮಾಡಲಾಗುವುದು ಎಂದರು.ಮಕ್ಕಳಿಗೆ ಉತ್ತಮ ಪುಟ್ಬಾಲ್ ತರಬೇತಿ ನೀಡಿ ಮುಂದೆ ಉತ್ತಮ ಕ್ರೀಡಾಪಟುಗಳನ್ನಾಗಿ ರೂಪಿಸಲಾಗುವುದು. ಈ ಹಿಂದೆ ನಡೆದ ಶಿಬಿರದಲ್ಲಿ ತರಬೇತಿ ಪಡೆದ ಮೂವರು ಮಕ್ಕಳು ಬೆಂಗಳೂರಿನಲ್ಲಿ ನಡೆಯುವ ಪಂದ್ಯಾಟಕ್ಕೆ ಈಗಾಗಲೇ ಆಯ್ಕೆಯಾಗಿರುವುದಾಗಿ ಅವರು ತಿಳಿಸಿದರು.
ಈ ಸಂದರ್ಭ ಕೊಡಗು ಪುಟ್ಬಾಲ್ ಅಸೋಸಿಯೇಶನ್ ಕಾರ್ಯದರ್ಶಿ ನಾಗೇಶ್, ಸದಸ್ಯರಾದ ಲಿಜೇಶ್ ಸೇರಿದಂತೆ ಶಾಲಾ ಮುಖ್ಯಸ್ಥ ಹರ್ಷಾದ್ ತರಬೇತಿ ಪಡೆಯುತಿರುವ ಮಕ್ಕಳು ಇದ್ದರು.