ಕನ್ನಡಪ್ರಭ ವಾರ್ತೆ ನಾಗಮಂಗಲಪರೀಕ್ಷಾ ಕೇಂದ್ರಗಳಲ್ಲಿ ಮೌಲ್ಯಗಳನ್ನು ಕಾಪಾಡಿಕೊಂಡು ಅತ್ಯಂತ ಪಾವಿತ್ರತೆಯಿಂದ ಪರೀಕ್ಷೆಗಳನ್ನು ನಡೆಸುವ ಮೂಲಕ ಎಸ್ಸೆಸ್ಸೆಲ್ಸಿ ಪರೀಕ್ಷೆ ಸುಗಮವಾಗಿ ನಡೆಯುವಂತಾಗಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ. ಯೋಗೇಶ್ ತಿಳಿಸಿದರು.
ತಾಲೂಕಿನಲ್ಲಿ 52 ಪ್ರೌಢಶಾಲೆಗಳ ಪೈಕಿ ನಾಗಮಂಗಲ ಪಟ್ಟಣ, ಬಿ.ಜಿ.ನಗರ, ಆದಿಚುಂಚನಗಿರಿ, ದೇವಲಾಪುರ, ಬಿಂಡಿಗನವಿಲೆ, ಚಿಣ್ಯ ಸೇರಿ 6 ಪರೀಕ್ಷಾ ಕೇಂದ್ರಗಳಿವೆ, 2366 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ. 2311 ೧ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. 55 ಮಕ್ಕಳಿಗೆ ಹಾಜರಾತಿ ಕೊರತೆ ಇದೆ. ಆದ್ದರಿಂದ ಅವರಿಗೆ ಪರೀಕ್ಷೆ ಬರೆಯುವ ಅವಕಾಶವಿಲ್ಲ. ಪರೀಕ್ಷಾ ಕೇಂದ್ರಗಳನ್ನು ಎಲ್ಲಾ ದೃಷ್ಟಿಯನ್ನು ನದಲ್ಲಿಟ್ಟುಕೊಂಡು ಸರ್ವಸನ್ನದ್ಧಗೊಳಿಸಿರುವುದಾಗಿ ತಿಳಿಸಿದರು.
ಪರೀಕ್ಷೆಯನ್ನು ಹೇಗೆ ನಿರ್ವಹಣೆ ಮಾಡಬೇಕು ಎಂದು ಪರೀಕ್ಷಾ ಕೇಂದ್ರದ ಅಧಿಕಾರಿಗಳಿಗೆ ತರಬೇತಿ ನೀಡಲಾಗಿದೆ. ಅವರುಗಳು ಪರೀಕ್ಷಾ ಕೊಠಡಿಗಳ ಪರಿಶೀಲನೆ ಹಾಗೂ ಅಲ್ಲಿರುವ ಮೂಲ ಸೌಕರ್ಯಗಳ ಬಗ್ಗೆ ಮಾಹಿತಿ ಪಡೆದುಕೊಳ್ಳಬೇಕು. ಶೌಚಾಲಯ ಸ್ವಚ್ಛತೆ, ಕುಡಿಯುವ ನೀರು, ಕೊಠಡಿಗಳಲ್ಲಿ ಬೆಂಚು, ಸಿಸಿ ಟಿ.ವಿ ಸಮರ್ಪಕವಾಗಿದಿಯೇ ಎಂದು ಪರಿಶೀಲನೆ ಮಾಡಬೇಕು ಎಂದರು.ಪರೀಕ್ಷಾ ಕೇಂದ್ರಗಳಿಗೆ ಬೇಕಾಗಿರುವ ಪೋಲಿಸರು, ಆರೋಗ್ಯ ಇಲಾಖೆ ಸಿಬ್ಬಂದಿ ಸೇರಿದಂತೆ ಎಲ್ಲರಿಗೂ ಪತ್ರ ಬರೆದು ಪರೀಕ್ಷಾ ಸುರಕ್ಷತೆ ಹಾಗೂ ವಿದ್ಯಾರ್ಥಿಗಳ ಆರೋಗ್ಯ ಕಾಪಾಡಿಕೊಳ್ಳಬೇಕು. ಬೇಸಿಗೆ ಹೆಚ್ಚಿರುವುದರಿಂದ ಕೊಠಡಿಗಳಲ್ಲಿ ನೀರಿನ ವ್ಯವಸ್ಥೆ ಕಡ್ಡಾಯವಾಗಿರಬೇಕು ಎಂದರು.
ತಾಪಂ ಇಒ ಚಂದ್ರಮೌಳಿ ಮಾತನಾಡಿ, ಪರೀಕ್ಷೆಗಳಲ್ಲಿ ಯಾವುದೇ ಅವ್ಯವಹಾರಗಳು ನಡೆಯದಂತೆ ಎಚ್ಚರ ವಹಿಸಬೇಕು. ಪರೀಕ್ಷಾ ಕೇಂದ್ರಗಳಿಗೆ ಅಗತ್ಯವಿರುವ ಮೂಲ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು.
ಸಭೆಯಲ್ಲಿ ತಾಲೂಕು ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ರಾಮಕೃಷ್ಣಯ್ಯ, ಪರೀಕ್ಷಾ ಕೇಂದ್ರಗಳ ಮುಖ್ಯಅಧೀಕ್ಷಕರು, ಉಪ ಮುಖ್ಯ ಅಧೀಕ್ಷಕರು ಸೇರಿದಂತೆ ಹಲವರು ಹಾಜರಿದ್ದರು.