ಬೆಂಬಲ ಬೆಲೆಯಡಿ ಸೂರ್ಯಕಾಂತಿ ಖರೀದಿ ಕೇಂದ್ರ ಪ್ರಾರಂಭಿಸಿ

KannadaprabhaNewsNetwork |  
Published : Apr 17, 2026, 02:30 AM IST
ನರಗುಂದದಲ್ಲಿ ರೈತರು ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು. | Kannada Prabha

ಸಾರಾಂಶ

ಸರ್ಕಾರ ಸೂರ್ಯಕಾಂತಿಯನ್ನು ₹7771ರಂತೆ ಬೆಂಬಲ ಬೆಲೆಯಲ್ಲಿ ಖರೀದಿ ಮಾಡಲು ಆದೇಶ ಮಾಡಿದೆ. ಶೀಘ್ರವೇ ಸರ್ಕಾರ ತಾಲೂಕಿನಲ್ಲಿ ಸೂರ್ಯಕಾಂತಿ ಖರೀದಿ ಕೇಂದ್ರ ಪ್ರಾರಂಭಿಸಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ರೈತರು ಎಚ್ಚರಿಸಿದರು.

ನರಗುಂದ: ಮಾರುಕಟ್ಟೆಯಲ್ಲಿ ಸೂರ್ಯಕಾಂತಿ ಬೆಲೆ ದಿಢೀರ್‌ ಕುಸಿದಿದೆ. ಸರ್ಕಾರ ಶೀಘ್ರವೇ ಬೆಂಬಲ ಬೆಲೆಯಡಿ ಸೂರ್ಯಕಾಂತಿ ಖರೀದಿ ಕೇಂದ್ರ ಪ್ರಾರಂಭಿಸಬೇಕೆಂದು ರೈತ ಸಂಘ ಹಾಗೂ ಹಸಿರುಸೇನೆ ತಾಲೂಕಾಧ್ಯಕ್ಷ ಉಮೇಶ ಮರ್ಚಪ್ಪನವರ ಆಗ್ರಹಿಸಿದರು.

ಗುರುವಾರ ಪಟ್ಟಣ ಮಿನಿ ವಿಧಾನಸೌಧದಲ್ಲಿ ತಹಸೀಲ್ದಾರರಿಗೆ ಮನವಿ ಸಲ್ಲಿಸಿ ಮಾತನಾಡಿ, ತಾಲೂಕಿನ ಮಲಪ್ರಭಾ ಜಲಾಶಯ ನೀರಾವರಿ ಕಾಲುವೆಗಳಿಗೆ ಹೊಂದಿರುವ ಜಮೀನುಗಳಲ್ಲಿ ರೈತರು ಹಿಂಗಾರು ಹಂಗಾಮಿನಲ್ಲಿ ವಾಣಿಜ್ಯ ಬೆಳೆಯಾದ ಸೂರ್ಯಕಾಂತಿ ಬಿತ್ತನೆ ಮಾಡಿದ್ದರು. ಪ್ರತಿ 1 ಎಕರೆಗೆ ₹20ರಿಂದ ₹30 ಸಾವಿರ ಖರ್ಚು ಮಾಡಿದ್ದರು.

ಪ್ರತಿ 1 ಎಕರೆಗೆ 8ರಿಂದ 10 ಕ್ವಿಂಟಲ್ ಇಳುವರಿಯನ್ನು ರೈತರು ಪಡೆದಿದ್ದಾರೆ. ಆದರೆ ಸೂರ್ಯಕಾಂತಿ ಬೆಳೆ ಕಟಾವು ಮಾಡುವ ಮೊದಲು ಮಾರುಕಟ್ಟೆಯಲ್ಲಿ ಪ್ರತಿ 1ಕ್ವಿಂಟಲ್‌ಗೆ ₹7 ಸಾವಿರದಿಂದ ₹7500ರ ವರೆಗೆ ಬೆಲೆಯಿತ್ತು. ರೈತರು ಸೂರ್ಯಕಾಂತಿ ಬೆಳೆಯನ್ನು ಕಟಾವು ಮಾಡಿ ಮಾರುಕಟ್ಟೆಗೆ ಮಾರಾಟ ಮಾಡಲು ತಂದಾಗ ದಿಢೀರ್ ಬೆಲೆ ಕುಸಿದಿದೆ. ಸದ್ಯ ಮಾರುಕಟ್ಟೆಯಲ್ಲಿ ಸೂರ್ಯಕಾಂತಿ ಬೆಲೆ ಕ್ವಿಂಟಲ್‌ಗೆ ₹6 ಸಾವಿರದಿಂದ ₹6300ರ ವರೆಗೆ ಇದೆ. ಇದರಿಂದ ರೈತರಿಗೆ ಭಾರೀ ಹಾನಿಯಾಗುತ್ತಿದೆ.

ಸರ್ಕಾರ ಸೂರ್ಯಕಾಂತಿಯನ್ನು ₹7771ರಂತೆ ಬೆಂಬಲ ಬೆಲೆಯಲ್ಲಿ ಖರೀದಿ ಮಾಡಲು ಆದೇಶ ಮಾಡಿದೆ. ಶೀಘ್ರವೇ ಸರ್ಕಾರ ತಾಲೂಕಿನಲ್ಲಿ ಸೂರ್ಯಕಾಂತಿ ಖರೀದಿ ಕೇಂದ್ರ ಪ್ರಾರಂಭಿಸಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

ತಹಸೀಲ್ದಾರ್ ಶ್ರೀಶೈಲ ತಳವಾರ ಮನವಿ ಸ್ವೀಕರಿಸಿದರು. ಮನವಿ ಸಲ್ಲಿಸುವ ವೇಳೆ ವೆಂಕಪ್ಪ ಹೂಲಿ, ಜಮಲಾಸಾಬ ಕೆರೂರ, ಸಂತೋಷ ಖಾನಾಪುರ, ಸುರೇಶ ಐನಾಪೂರ, ಗುರುಶಾಂತ ನರಸಾಪೂರ, ಮುತ್ತಪ್ಪ ಬದಾಮಿ ಇತರರು ಇದ್ದರು. ನಾಳೆ ಪ್ರವಚನ ಮಹಾಮಂಗಲ

ನರಗುಂದ: ಪಟ್ಟಣದ ಸುಕ್ಷೇತ್ರ ವಿರಕ್ತಮಠದ ಕರ್ತೃ ಚನ್ನಬಸವ ಶಿವಯೋಗಿಗಳ 157ನೇ ಸ್ಮರಣೋತ್ಸವ ಅಂಗವಾಗಿ ಏ. 18ರಂದು ಸಂಜೆ 6.30ಕ್ಕೆ ಚನ್ನಬಸವ ಶಿವಯೋಗಿಗಳ ಜೀವನ ದರ್ಶನ ಪ್ರವಚನ ಮಹಾಮಂಗಲ ಕಾರ್ಯಕ್ರಮ ಚನ್ನಬಸವೇಶ್ವರ ವೇದಿಕೆಯಲ್ಲಿ ಜರುಗಲಿದೆ.ಸಾನ್ನಿಧ್ಯವನ್ನು ಹುಬ್ಬಳ್ಳಿ ಮೂರುಸಾವಿರಮಠದ ಡಾ. ಗುರುಸಿದ್ದ ರಾಜಯೋಗಿಂದ್ರ ಶ್ರೀಗಳು, ಮುನವಳ್ಳಿ ಸೋಮಶೇಖರಮಠದ ಮುರುಘೇಂದ್ರ ಶ್ರೀಗಳು, ಹುಕ್ಕೇರಿ ವಿರಕ್ತಮಠದ ಶಿವಬಸವ ಶ್ರೀಗಳು, ಮೂಲೇಗದ್ದಿ ಸದಾನಂದ ಶಿವಯೋಗಾಶ್ರಮ ಅಭಿನವ ಚನ್ನಬಸವ ಶ್ರೀಗಳು, ಅರಳಿಕಟ್ಟಿ ತೋಂಟದಾರ್ಯ ವಿರಕ್ತಮಠದ ಶಿವಮೂರ್ತಿ ಶ್ರೀಗಳು, ಕೂಡಲ ಗುರುನಂದೇಶ್ವರ ಮಠದ ಮಹೇಶ್ವರ ಶಿವಾಚಾರ್ಯ ಶ್ರೀಗಳು, ಬಂಗರಗ ಹಿರೇಮಠದ ವಾಮದೇವ ಶಿವಾನಂದ ಶಿವಾಚಾರ್ಯ ಶ್ರೀಗಳು, ಕೊಣ್ಣೂರು ವಿರಕ್ತಮಠದ ಡಾ. ಚನ್ನವಿರೇಶ್ವರ ಶ್ರೀಗಳು, ಮುಖ್ಯ ಅತಿಥಿಗಳಾಗಿ ಶಾಸಕ ಸಿ.ಸಿ. ಪಾಟೀಲ, ಆರ್.ಬಿ. ಪಾಟೀಲ ಇತರರು ಭಾಗವಹಿಸಲಿದ್ದಾರೆಂದು ಶ್ರೀಮಠದ ಭಕ್ತರು ಪತ್ರಿಕಾ ಪ್ರಕಟಣಿಯ ಮೂಲಕ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪುಸ್ತಕ ಸಂಸ್ಕೃತಿ ಬೆಳೆಸುವಲ್ಲಿ ಕನ್ನಡ ವಿವಿ ಪಾತ್ರ ಅನನ್ಯ: ಕುಲಪತಿ ಡಾ. ಡಿ.ವಿ. ಪರಮಶಿವಮೂರ್ತಿ
ನಾರಿ ಶಕ್ತಿ ಎಂದರೆ ದೇಶದ ಶಕ್ತಿ: ಹಂಪಿ ರಮಣ