ಉಚಿತ ಬೇಸಿಗೆ ಶಿಬಿರವನ್ನು ಉದ್ಘಾಟಿಸಿದ ಹಿರಿಯ ಸಿವಿಲ್ ನ್ಯಾಯಾಧೀಶೆ
ವ್ಯಕ್ತಿತ್ವ ವಿಕಸನ, ಕೌಶಲ್ಯ ಅಭಿವೃದ್ಧಿಗೆ ಮಕ್ಕಳಿಗೆ ಪಾಠದ ಜೊತೆಯಲ್ಲಿ ಆಟಗಳು ಪ್ರಮುಖವಾಗಿದ್ದು, ಮಕ್ಕಳಲ್ಲಿ ಅಡಗಿರುವ ಕಲೆ, ಸಂಸ್ಕೃತಿ ಇತರೆ ಬೌದ್ಧಿಕ ಮತ್ತು ಕ್ರಿಯಾಶೀಲ ಚಟುವಟಿಕೆಗಳನ್ನು ವೃದ್ಧಿಸಿಕೊಳ್ಳಲು ಬೇಸಿಗೆ ಶಿಬಿರವು ಸಹಕಾರಿಯಾಗಲಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ದಿವ್ಯಶ್ರೀ ಸಿ.ಎಂ. ಹೇಳಿದರು.
ಗುರುವಾರ ರಾಜ್ಯ ಬಾಲಭವನ ಸೊಸೈಟಿ ಬೆಂಗಳೂರು, ಜಿಪಂ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಬಾಲಭವನ ಸಮಿತಿ, ಕಾರವಾರ ಇವರ ಸಹಯೋಗದಲ್ಲಿ 2026-27ನೇ ಸಾಲಿನ ಉಚಿತ ಬೇಸಿಗೆ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.ದೇಹಕ್ಕೆ ಒಳ್ಳೆಯ ಆಹಾರ ಎಷ್ಟು ಮುಖ್ಯವೋ ಹಾಗೇ ನಮ್ಮ ಮೆದುಳಿಗೆ ಒಳ್ಳೆಯ ಚಟುವಟಿಕೆ, ಒಳ್ಳೆಯ ನಡೆ-ನುಡಿ ಆಚಾರ ವಿಚಾರಗಳು ಅಷ್ಟೇ ಮುಖ್ಯವಾಗಿದೆ. 15 ದಿನ ನಡೆಯುವ ಈ ಬೇಸಿಗೆ ಶಿಬಿರದಲ್ಲಿ ಚಿತ್ರಕಲೆ, ಕ್ರಾಪ್ಟ್, ನೃತ್ಯ, ಸಂಗೀತ, ಕರಾಟೆ ಸೇರಿದಂತೆ ವಿವಿಧ ಚಟುವಟಿಕೆಗಳ ತರಬೇತಿ ನೀಡಲಿದ್ದು, ಮಕ್ಕಳು ಈ ಶಿಬಿರದ ಅವಕಾಶವನ್ನು ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಡಿಡಿಪಿಐ ಲತಾ ನಾಯ್ಕ ಮಾತನಾಡಿ, ಮಕ್ಕಳಲ್ಲಿ ಅಡಗಿರುವ ಕಲೆ ಪ್ರತಿಭೆ ಸೃಜನಾತ್ಮಕ ಚಟುವಟಿಕೆಗಳನ್ನು ಬೇಸಿಗೆ ಶಿಬಿರದ ಮೂಲಕ ಹೊರತರಲು ಸಹಕಾರಿಯಾಗಿದೆ ಎಂದರು.
ಕಲ್ಪನಾ ರಶ್ಮಿ ಕಲಾಲೋಕದ ಅಧ್ಯಕ್ಷ ಬಿ.ಎಂ. ಸೂರ್ಯಪ್ರಕಾಶ ನಿರೂಪಿಸಿ, ವಂದಿಸಿದರು.