ದೇಶದ್ರೋಹ ಚಟುವಟಿಕೆ ನಡೆಯುತ್ತಿದ್ದರೂ, ವಿರೋಧಿಸದೇ, ಸಜ್ಜನಿಕೆಯ ಸೋಗು ಹಾಕಿಕೊಂಡ ಕೆಲ ಬಿಜೆಪಿಗರಿಂದ ದೇಶಕ್ಕೆ ಹಾನಿ ಹೆಚ್ಚುತ್ತಿದೆ.
ಶಿರಸಿ
ಪ್ರಧಾನಿ ನರೇಂದ್ರ ಮೋದಿಯವರ ಗ್ಯಾರಂಟಿ ದೇಶ ದೃಢಗೊಳಿಸಿದ್ದರೆ, ಸಿದ್ದರಾಮಯ್ಯ ಅವರ ಕಾಂಗ್ರೆಸ್ಸಿನ ಗ್ಯಾರಂಟಿ ರಾಜ್ಯ ದಿವಾಳಿ ಮಾಡುತ್ತಿದೆ ಎಂದು ಸಂಸದ ಅನಂತಕುಮಾರ ಹೆಗಡೆ ವಾಗ್ದಾಳಿ ನಡೆಸಿದರು.ಶನಿವಾರ ನಗರದ ಹುಲೇಕಲ್ ವ್ಯಾಸರಾಯ ಮಠದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ವರ್ಸಸ್ ಬಿಜೆಪಿ ಅಲ್ಲ. ಇದು ಧರ್ಮ ಯುದ್ಧ. ದೇಶದ್ರೋಹಿಗಳು- ದೇಶಪ್ರೇಮಿಗಳ ನಡುವಿನ ಕಾಳಗ. ಧರ್ಮಕ್ಕೆ, ದೇಶಕ್ಕೆ ಏಟಾಗುತ್ತದೆ ಎಂದರೆ ನಾವು ಗಟ್ಟಿಯಾಗಿ ನಿಲ್ಲಬೇಕು. ಸಜ್ಜನಿಕೆಯಿಂದ ಇದ್ದರೆ ಅದೇ ನಮಗೆ ಮುಳ್ಳು. ಅದೇ ದೇಶ ದ್ರೋಹವಾಗುತ್ತದೆ. ಧರ್ಮಕ್ಕೋಸ್ಕರ ಮೇಲೆದ್ದು ನಿಲ್ಲಬೇಕು ಎಂದ ಕರೆನೀಡಿದರು.ಮೋದಿ ಅವರ ಗ್ಯಾರಂಟಿನೂ ಇದೆ. ರೈತರಿಗೂ ಹಣ ಕೊಟ್ಟರು. ಎಲ್ಲ ಹಳ್ಳಿಗಳಿಗೆ ಕರೆಂಟ್ ಬಂದಿದೆ. ಗ್ರಾಮ ಪಂಚಾಯಿತಿಗಳಿಗೆ ಶೇ. ೮೦ ಹಣ ಬರುತ್ತಿದೆ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಅನಿಲ ಸಂಪರ್ಕ ಪಡೆದುಕೊಳ್ಳಬೇಕಾದರೆ ಸಂಸದರ ಮನೆಗೆ ಹೋಗಬೇಕಿತ್ತು. ಇಂದು ಹುಡುಕಿ ಹುಡುಕಿ ಗ್ಯಾಸ್ ಸಂಪರ್ಕ ನೀಡುತ್ತಿದ್ದಾರೆ. ಇದು ಮೋದಿ ಗ್ಯಾರಂಟಿ. ಆದರೆ, ಸಿದ್ದರಾಮಯ್ಯ ಅವರ ಗ್ಯಾರಂಟಿ ಏನಾಗಿದೆ? ಅವೈಜ್ಞಾನಿಕ ಕಾರಣದಿಂದ ನೌಕರರಿಗೆ ಸಂಬಳ ನೀಡಲು ಆಗುತ್ತಿಲ್ಲ. ಹಣ ಹೊಂದಿಸಲಾಗದೇ ತೆರಿಗೆ ಹೆಚ್ಚಳ ಮಾಡಿದೆ. ₹೧೦೦ ಆದಾಯದಲ್ಲಿ ₹ ೫೦ ಕೊಡಲಿ. ಆದರೆ ಕಾಂಗ್ರೆಸ್ ₹ ೨೦೦ ದಾನ ಮಾಡಿದರೆ ಸರ್ಕಾರ ಏನಾಗುತ್ತದೆ? ಎಂದು ಪ್ರಶ್ನಿಸಿದರು.ವಿಧಾನಸಭೆಯಲ್ಲಿ ಸಿದ್ದರಾಮಯ್ಯ ಅವರು, ಏನು? ಹೇಳಿದ್ದೆಲ್ಲ ಮಾಡಕಾಯ್ತದಾ? ಎಂದು ಕೇಳ್ತಾರೆ ಎಂದು ಟಾಂಗ್ ನೀಡಿದ ಅವರು, ಸಿದ್ದರಾಮುಲ್ಲಾ ಖಾನ್ ಎಂದು ಕರೆದರೆ ಹಲವರಿಗೆ ಬೇಸರ ಆಗುತ್ತದೆ. ನಾವು ಜಾತ್ಯತೀತರು. ಜಾತ್ಯತೀತ ಹೆಸರು ಇಟ್ಟರೆ ಹಲವರಿಗೆ ಬೇಸರ ಆಗುತ್ತದೆ. ಈ ಸಜ್ಜನಿಕೆಯೇ ನಮಗೆ ಮುಳ್ಳಾಗುತ್ತದೆ. ತಪ್ಪಾದಾಗ ಪ್ರತಿಭಟಿಸಬೇಕು. ಮೋದಿ ಇದ್ದರೆ ಧರ್ಮ ಹಾಗೂ ದೇಶ ಉಳಿಯುತ್ತದೆ ಎಂದ ಅವರು, ಕಾಂಗ್ರೆಸ್ ಸರ್ಕಾರ ದೇವಸ್ಥಾನದ ಕಾಣಿಕೆ ಹುಂಡಿಗೆ ಕೈ ಹಾಕಿದೆ ಎಂದು ಕಿಡಿಕಾರಿದರು.
ದೇಶದ್ರೋಹ ಚಟುವಟಿಕೆ ನಡೆಯುತ್ತಿದ್ದರೂ, ವಿರೋಧಿಸದೇ, ಸಜ್ಜನಿಕೆಯ ಸೋಗು ಹಾಕಿಕೊಂಡ ಕೆಲ ಬಿಜೆಪಿಗರಿಂದ ದೇಶಕ್ಕೆ ಹಾನಿ ಹೆಚ್ಚುತ್ತಿದೆ ಎಂದರು.ಈ ವೇಳೆ ಪಕ್ಷದ ಪ್ರಮುಖರಾದ ಚಂದ್ರು ದೇವಾಡಿಗ, ರೇಖಾ ಹೆಗಡೆ, ಶೋಭಾ ನಾಯ್ಕ, ಮಂಜುನಾಥ ಭಂಡಾರಿ ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.