ಬಿಜೆಪಿಯಿಂದ ರಾಜ್ಯಕ್ಕೆ ಬಿಡಿಗಾಸೂ ಸಿಗ್ತಿಲ್ಲ: ಡಿಕೆಶಿ

KannadaprabhaNewsNetwork |  
Published : Mar 07, 2024, 01:48 AM IST
ಅಥಣಿ ತಾಲೂಕಿನ ಕೊಟ್ಟಲಗಿಯ ಅಮ್ಮಾಜೇಶ್ವರಿ ಏತ ನೀರಾವಿ ಯೋಜನೆ ಉದ್ಘಾಟನಾಕಾರ್ಯಕ್ರಮದಲ್ಲಿ  ಡಿಸಿಎಂ ಡಿ.ಕೆ.ಶಿವಕುಮಾರ ಅವರನ್ನು ಶಾಸಕ ಲಕ್ಷ್ಮಣ ಸವದಿ ಸನ್ಮಾನಿಸಿದರು | Kannada Prabha

ಸಾರಾಂಶ

ಬಿಜೆಪಿಗೆ ಸುಳ್ಳೇ ಮನೆದೇವರು. ಯಾವುದೇ ದೊಡ್ಡ ಕಾರ್ಯಕ್ರಮವನ್ನು ತರುವಲ್ಲಿ ಅವರಿಂದ ಸಾಧ್ಯವಿಲ್ಲ ಎಂದು ಡಿಸಿಎಂ ಡಿ.ಕೆ.ಶಿವಕುಮಾರ ಆರೋಪಿಸಿದರು.

ಬೆಳಗಾವಿ: ಬಿಜೆಪಿಗೆ ಸುಳ್ಳೇ ಮನೆದೇವರು. ಯಾವುದೇ ದೊಡ್ಡ ಕಾರ್ಯಕ್ರಮವನ್ನು ತರುವಲ್ಲಿ ಅವರಿಂದ ಸಾಧ್ಯವಿಲ್ಲ. ಬಿಡಿಗಾಸು ಸಹ ಅವರಿಂದ ರಾಜ್ಯಕ್ಕೆ ದೊರೆಯುತ್ತಿಲ್ಲ. ಜನರ ಮನದಲ್ಲಿ ಉಳಿಯುವ ಕಾರ್ಯಕ್ರಮವನ್ನು ಬಿಜೆಪಿ ನೀಡಿದ್ದೆ ಆದಲ್ಲಿ ನಾನು ಅವರಿಗೆ ಶರಣಾಗಲು ಸಿದ್ಧ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಹೇಳಿದರು.

ಅಥಣಿ ತಾಲೂಕಿನ ಕೊಟ್ಟಲಗಿಯ ಅಮ್ಮಾಜೇಶ್ವರಿ ಏತ ನೀರಾವರಿ ಯೋಜನೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕಳಸಾ ಬಂಡೂರಿ ಯೋಜನೆ ಬಗ್ಗೆ ದೊಡ್ಡ ಹಬ್ಬ ಮಾಡಿದರು. ಆದರೆ ಅವರದ್ದೇ ಕೇಂದ್ರ ಸರ್ಕಾರದಿಂದ ಅನುಮತಿ ಪತ್ರ ಕೊಡಲು ಅವರಿಂದ ಸಾಧ್ಯವಾಗುತ್ತಿಲ್ಲ. 27 ಎಂಪಿಗಳು, ಬಲಿಷ್ಠ ಸರ್ಕಾರ ಇದ್ದರೂ ಇನ್ನೂ ಯೋಜನೆ ಪ್ರಾರಂಭ ಮಾಡಿಲ್ಲ. ಯಾವುದೇ ದೊಡ್ಡ ಯೋಜನೆಯನ್ನು ಜಾರಿಗೆ ತಂದಿಲ್ಲ. ಬಿಡಿಗಾಸು ಕೊಡಲು ಬಿಜೆಪಿಯವರಿಂದ ಸಾಧ್ಯವಿಲ್ಲ. ಮತ ಕೇಳಲು ಅವರಿಗೆ ಯಾವ ಹಕ್ಕು ಇಲ್ಲ ಎಂದು ದೂರಿದರು.

ಈ ಹಿಂದಿನ ಬಿಜೆಪಿ ಸರ್ಕಾರಕ್ಕೆ ಶಕ್ತಿ ಇರಲಿಲ್ಲ. 38 ಶಾಸಕರನ್ನು ದಳ, 78 ಶಾಸಕರನ್ನು ಕಾಂಗ್ರೆಸ್ ಹೊಂದಿತ್ತು. 104 ಶಾಸಕರನ್ನು ಹೊಂದಿದ್ದ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಲು ಒಂದೂವರೆ ವರ್ಷಗಳ ಕಾಲ ಸರ್ಕಾರ ಮಾಡಿದೆವು. ಆದರೆ ಬಿಜೆಪಿಯವರು ತಮಗೆ ಬಹುಮತ ಇಲ್ಲದೆ ಇದ್ದರೂ ಆಪರೇಷನ್ ಕಮಲ ಮಾಡಿದರು. ಸವದಿ ಅವರೆ ನಮ್ಮ ಕೆಲ ಶಾಸಕರನ್ನು ಹೊಡೆದುಕೊಂಡು ಹೋದರು. ಅಲ್ವೇ ಸವದಿ ಎಂದು ಪ್ರಶ್ನಿಸಿದರು.

ಕುಮಾರಸ್ವಾಮಿ ಇಂದು ತಮ್ಮ ದಳದ ಬಗ್ಗೆ ಮಾತನಾಡುತ್ತಿಲ್ಲ. ಬಿಜೆಪಿ ವಕ್ತಾರರಾಗಿದ್ದಾರೆ. ಬರೀ ಬಿಜೆಪಿಯ ಸುದ್ದಿ ಮಾತನಾಡುತ್ತಿದ್ದಾರೆ. ಅಂದರೆ ಅವರ ಸ್ಥಿತಿ ಈಗ ಏನಾಗಿರಬೇಕು? ಪಕ್ಷದಲ್ಲಿರುವ ಶಾಸಕರು ಏನಾಗಬಹುದು ಎಂಬ ಚಿಂತೆಯಲ್ಲಿ ಬಿಜೆಪಿ ತಬ್ಬಿಕೊಂಡಿದ್ದಾರೆ. ಅವರ ಮೈತ್ರಿ ಬಗ್ಗೆ ಈಗ ನಾನೇನು ಹೇಳುವುದಿಲ್ಲ. ಚುನಾವಣೆ ಮುಗಿಯಲಿ ಎಂದು ಹೇಳಿದರು.

ಲಕ್ಷ್ಮಣ ಸವದಿ ನಮ್ಮ ಮಿತ್ರರು. ಅವರು ಎಷ್ಟು ಬುದ್ಧಿವಂತರೆಂದರೆ ಈ ಏಳು ತಿಂಗಳಲ್ಲಿ ಎರಡು ಬಾರಿ ನಮ್ಮನ್ನು ತಮ್ಮ ತಾಲೂಕಿಗೆ ಕರೆಸಿಕೊಂಡು, ಅಂತದ್ದೆ ದೊಡ್ಡ ಕಾರ್ಯಕ್ರಮ ಮಾಡಿದರು. ಅದರೊಂದಿಗೆ ನುಡಿದಂತೆ ನಡೆಯಲು ಕಾರಣರಾಗಿದ್ದಾರೆ. ಸವದಿಯವರಿಗೆ ಮುಂದಿನ ದಿನಗಳಲ್ಲಿ ಉತ್ತಮ ಭವಿಷ್ಯವಿದೆ. ಆದರೆ ಸಂಸತ್ತಿಗೆ ಬೆಳಗಾವಿ ಜಿಲ್ಲೆಯ ಕಾಂಗ್ರೆಸ್ ಸಂಸದರನ್ನು ನೀವು ಕೊಡಬೇಕು. ಅಲ್ಲಿಯವರೆಗೆ ನಾನು ಏನು ಹೇಳುವುದಿಲ್ಲ ಎಂದರು.

PREV

Recommended Stories

ಧರ್ಮಸ್ಥಳ ಗ್ರಾಮದಲ್ಲಿ ಕಳೇಬರ ಸಿಗದಿದ್ರೆ ಮುಸುಕುಧಾರಿ ಲೋಪವಲ್ಲ
ಪ್ರಧಾನಿ ಆಗಮನ ಹಿನ್ನೆಲೆಯಲ್ಲಿ 35 ಬೀದಿ ನಾಯಿಗಳ ಬಂಧನ