ಕನ್ನಡಪ್ರಭ ವಾರ್ತೆ ಮಂಡ್ಯ
ಇಲ್ಲಿನ ನಗರದ ಡ್ಯಾಪೋಡಿಲ್ಸ್ ಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ವಿಶೇಷ ತರಬೇತಿ ಕಾರ್ಯಾಗಾರದಲ್ಲಿ ಉಪನ್ಯಾಸ ನೀಡಿ ಮಾತನಾಡಿದರು.
ಆಯಾ ದಿನದ ಪಠ್ಯ ವಿಷಯಗಳನ್ನು ಅಂದೇ ಓದಿ ಅರ್ಥೈಸಿಕೊಂಡರೆ ಕಲಿಕೆ ಸುಲಭವಾಗುತ್ತದೆ. ಕಲಿಕೆಯನ್ನು ಮುಂದೂಡುತ್ತಾ ಬಂದರೆ ಕೊನೆಯಲ್ಲಿ ಒತ್ತಡಕ್ಕೆ ಸಿಲುಕಬೇಕಾಗುತ್ತದೆ. ಅದಕ್ಕೆ ಅವಕಾಶ ನೀಡದೆ ಪಠ್ಯ ವಿಷಯಗಳನ್ನು ಅಂದಂದೇ ಮನನ ಮಾಡಿಕೊಳ್ಳಬೇಕು. ಅರ್ಥವಾಗದಿದ್ದರೆ ಶಿಕ್ಷಕರನ್ನು ಕೇಳಿ ಅರ್ಥೈಸಿಕೊಳ್ಳಬೇಕು ಎಂದು ಸಲಹೆ ನೀಡಿದರು.ಪರೀಕ್ಷೆ ಎದುರಾಗುವ ವೇಳೆಗೆ ವಿಷಯಗಳನ್ನು ಅರ್ಥೈಸಿಕೊಂಡಿದ್ದರೆ ಕಲಿಕೆ ಸರಳವಾಗುತ್ತದೆ. ಪರೀಕ್ಷೆ ಬರೆಯುವುದಕ್ಕೂ ಸುಲಭವಾಗುವುದು. ವಿದ್ಯಾರ್ಥಿಗಳೇ ಸೇರಿ ಗುಂಪು ಚರ್ಚೆ ನಡೆಸುವುದರಿಂದ ಹಲವು ಪಠ್ಯ ಸಮಸ್ಯೆಗಳಿಗೆ ಪರಿಹಾರ ದೊರಕಲಿದೆ. ನಿದ್ರೆಗೆಟ್ಟು ಓದದೆ ನೆಮ್ಮದಿಯಿಂದ ನಿದ್ರಿಸಿ ಆರೋಗ್ಯವನ್ನೂ ಕಾಪಾಡಿಕೊಳ್ಳಬೇಕು ಎಂದರು.
ಕಷ್ಟವೆನಿಸುವ ಪಠ್ಯ ವಿಷಯಗಳ ಕಡೆಗೆ ಹೆಚ್ಚಿನ ಆಸಕ್ತಿ ಬೆಳೆಸಿಕೊಳ್ಳಬೇಕು. ಗೊಂದಲಗಳು, ಸಮಸ್ಯೆಗಳಿಗೆ ಸಿಲುಕಬಾರದು. ಓದಿ ಅರ್ಥೈಸಿಕೊಂಡಿದ್ದನ್ನು ಪುನರ್ ಮನನ ಮಾಡಿಕೊಳ್ಳುವುದರಿಂದ ದೀರ್ಘಕಾಲ ಮನಸ್ಸಿನಲ್ಲಿ ಉಳಿಯುತ್ತದೆ. ಬರವಣಿಗೆಯಿಂದಲೂ ವಿಷಯಗಳು ಮನನವಾಗುತ್ತವೆ ಎಂದು ನುಡಿದರು.
ಪೋಷಕರು ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು. ಪೋಷಕರ ಶ್ರಮ ವ್ಯರ್ಥವಾಗದಂತೆ ಓದಿನಲ್ಲಿ ಪ್ರಗತಿ ಸಾಧಿಸಬೇಕು ಎಂದು ತಿಳಿಸಿದರಲ್ಲದೇ, ಆರೋಗ್ಯ ಪೂರ್ಣವಾದ ತರಕಾರಿ, ಸೊಪ್ಪು, ಮೊಟ್ಟೆ, ಹಣ್ಣುಗಳನ್ನು ಸೇವಿಸಿ. ನೆನಪಿನಶಕ್ತಿ ಹೆಚ್ಚಿಸಿಕೊಳ್ಳುವಂತಹ ಆಹಾರ ಸೇವಿಸುವುದು ಉತ್ತಮ. ಪತ್ರಿಕೆಗಳನ್ನು ಓದುವುದರಿಂದ ಸಾಮಾನ್ಯ ಜ್ಞಾನದ ಜೊತೆಗೆ ಲೋಕಜ್ಞಾನ ಬೆಳವಣಿಗೆಯಾಗುತ್ತದೆ. ಒಳ್ಳೆಯ ಪುಸ್ತಕಗಳನ್ನು ಓದಿದಾಗ ವ್ಯಕ್ತಿತ್ವ ವಿಕಸನಗೊಳ್ಳುತ್ತದೆ ಎಂದು ನುಡಿದರು.ವಿದ್ಯಾರ್ಥಿಗಳು ಓದಲು ಮನೆಯಲ್ಲೇ ವೇಳಾಪಟ್ಟಿ ತಯಾರಿಸಿಕೊಳ್ಳಬೇಕು. ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸಬೇಕು. ಪರೀಕ್ಷೆಯಲ್ಲಿ ಸರಳವಾಗಿ ಉತ್ತರಿಸುವ ರೀತಿ ಸೇರಿದಂತೆ ವ್ಯಕ್ತಿತ್ವ ವಿಕಸನ, ಮೌಲ್ಯಗಳ ಸಂಪಾದನೆ ಕುರಿತು ಸಲಹೆ ನೀಡಿದರು.
ಸಂಸ್ಥಾಪಕ ಕಾರ್ಯದರ್ಶಿ ಸುಜಾತ ಕೃಷ್ಣ, ಮುಖ್ಯ ಶಿಕ್ಷಕರು, ಶಾಲಾ ಶಿಕ್ಷಕರು, ಸಿಬ್ಬಂದಿ ಇದ್ದರು.