ಚನ್ನಪಟ್ಟಣ: ಸ್ಪನ್‌ಸಿಲ್ಕ್ ಮಿಲ್ ಪುನಶ್ಚೇತನಕ್ಕೆ ಕ್ರಮ ಶಾಸಕ ಸಿ.ಪಿ.ಯೋಗೇಶ್ವರ್

KannadaprabhaNewsNetwork | Updated : Jan 13 2025, 11:33 AM IST

ಚನ್ನಪಟ್ಟಣ: ಈ ಹಿಂದೆ ಸಾವಿರಾರು ಮಂದಿಗೆ ಉದ್ಯೋಗ ನೀಡಿದ್ದ ಸ್ಪನ್‌ಸಿಲ್ಕ್ ಮಿಲ್ ಇಂದು ಅವಸಾನದ ಹಂತ ತಲುಪಲು ಅಧಿಕಾರಿಗಳ ಅಸಡ್ಡೆಯೇ ಕಾರಣವಾಗಿದ್ದು ಸಂಸ್ಥೆಯನ್ನು ಪುನಶ್ಚೇತನಗೊಳಿಸಲು ಕ್ರಮ ಕೈಗೊಳ್ಳುವಂತೆ ಶಾಸಕ ಸಿ.ಪಿ.ಯೋಗೇಶ್ವರ್ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.

ಚನ್ನಪಟ್ಟಣ: ಈ ಹಿಂದೆ ಸಾವಿರಾರು ಮಂದಿಗೆ ಉದ್ಯೋಗ ನೀಡಿದ್ದ ಸ್ಪನ್‌ಸಿಲ್ಕ್ ಮಿಲ್ ಇಂದು ಅವಸಾನದ ಹಂತ ತಲುಪಲು ಅಧಿಕಾರಿಗಳ ಅಸಡ್ಡೆಯೇ ಕಾರಣವಾಗಿದ್ದು ಸಂಸ್ಥೆಯನ್ನು ಪುನಶ್ಚೇತನಗೊಳಿಸಲು ಕ್ರಮ ಕೈಗೊಳ್ಳುವಂತೆ ಶಾಸಕ ಸಿ.ಪಿ.ಯೋಗೇಶ್ವರ್ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.

ನಗರದ ಸ್ಪನ್‌ಸಿಲ್ಕ್ ಮಿಲ್ ಆವರಣದಲ್ಲಿನ ಕೆಎಸ್‌ಐಸಿ ಕಚೇರಿಯಲ್ಲಿ ಉನ್ನತಾಧಿಕಾರಿಗಳೊಂದಿಗೆ ಕೆಎಸ್‌ಐಸಿ ಸಂಸ್ಥೆಯನ್ನು ಅಪ್‌ಗ್ರೇಡ್ ಮಾಡುವ ಸಂಬಂಧ ಸಭೆ ನಡೆಸಿ ಮಾತನಾಡಿದ ಅವರು, ಇಲ್ಲಿ ಹತ್ತಾರು ಎಕರೆಯಷ್ಟು ವಿಶಾಲ ಜಾಗವಿದ್ದು, ನಿಗಮದಲ್ಲಿ ಕೋಟ್ಯಂತರ ಹಣವಿದ್ದರೂ ಅದನ್ನು ಬಳಸಿಕೊಂಡು ಉದ್ಯೋಗವಕಾಶ ಸೃಷ್ಟಿಸುವ ಜೊತಗೆ ಸಂಸ್ಥೆಯನ್ನು ಲಾಭದಾಯದತ್ತ ಕೊಂಡೊಯ್ಯುವ ಅವಕಾಶವಿದ್ದರೂ ಯಾಕೆ ಅಭಿವೃದ್ಧಿಗೆ ಮುಂದಾಗುತ್ತಿಲ್ಲ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು.

ಬೆಂಗಳೂರು-ಮೈಸೂರು ಹೆದ್ದಾರಿಗೆ ಹೊಂದಿಕೊಂಡಂತೆ ಸಾಕಷ್ಟು ವಿಶಾಲ ಭೂ ಪ್ರದೇಶವಿರುವ ಇಂತಹ ಜಾಗ ಸಿಗುವುದೇ ಅಪರೂಪ. ನೀವು ಇದನ್ನು ಸದ್ಬಳಕೆ ಮಾಡಿಕೊಳ್ಳುವಲ್ಲಿ ವಿಫಲವಾಗಿರುವುದು ವಿಪರ್ಯಾಸ ಎಂದು ಬೇಸರ ವ್ಯಕ್ತಪಡಿಸಿದ ಶಾಸಕರು, ಹಿಂದಿನ ಸರ್ಕಾರದಲ್ಲಿ ಸಚಿವನಾಗಿದ್ದ ವೇಳೆ ಸಾಫ್ಟ್‌ಸಿಲ್ಕ್ ಉತ್ಪಾದನೆಗೆಂದು ವಿಶೇಷ ಅನುದಾನ ತಂದು ಯುವಕರಿಗೆ ಉದ್ಯೋಗ ಅವಕಾಶ ಸಹ ಕಲ್ಪಿಸಲಾಗಿತ್ತು. ಸಂಸ್ಥೆ ವತಿಯಿಂದ ತಯಾರಿಸಲ್ಪಡುವ ರೇಷ್ಮೆಸೀರೆಗಳಿಗೆ ದುಪ್ಪಟ್ಟು ಬೇಡಿಕೆ ಇದ್ದರೂ ನೀವು ಈ ಬಗ್ಗೆ ಉದಾಸೀನ ತೋರುತ್ತಿರುವುದಾದರೂ ಯಾಕೆಂದು ಅರ್ಥವಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸಂಸ್ಥೆಯನ್ನು ಪುನಶ್ಚೇತನಗೊಳಿಸಲು ನಿಮಗೆ ಯಾವೆಲ್ಲಾ ಸವಲತ್ತುಗಳು ಬೇಕು ಹೇಳಿ ಅದನ್ನು ಒದಗಿಸಿಕೊಡಲು ನಾವು ಸಿದ್ದ. ನೀವು ಸಂಸ್ಥೆಯನ್ನು ಆಧುನೀಕರಣ ಹಾಗೂ ಉನ್ನತೀಕರಣಗೊಳಿಸಿ ಸ್ಥಳೀಯ ಯುವಕರಿಗೆ ಉದ್ಯೋಗವಕಾಶ ದೊರಕಿಸಿಕೊಡಬೇಕು ಎಂದು ಸೂಚಿಸಿದರು.

ಕೆಎಸ್‌ಐಸಿ ಎಂ.ಡಿ. ಜಹೀರಾ ನಾಸೀಮ್ ಮಾತನಾಡಿ, ನಿಗಮದಲ್ಲಿ ಸಾಕಷ್ಟು ಅನುದಾನವಿದ್ದು, ನುರಿತ ಕಾರ್ಮಿಕರನ್ನು ಬಳಸಿಕೊಂಡು ಉತ್ಪಾದನೆ ಹೆಚ್ಚಳ ಮಾಡುವುದಾಗಿ ಭರವಸೆ ನೀಡಿದರು. ಇನ್ನಷ್ಟು ಆಧುನಿಕ ಉಪಕರಣಗಳನ್ನು ಅಳವಡಿಸಿ ಸ್ಥಳೀಯ ನಿರುದ್ಯೋಗಿಗಳಿಗೆ ಉದ್ಯೋಗ ನೀಡಲಾಗುವುದು. ಆವರಣದಲ್ಲಿ ನೀರಿನ ಸಮಸ್ಯೆಯಿದ್ದು ಅದನ್ನು ಪರಿಹರಿಸಿಕೊಡುವಂತೆ ಶಾಸಕರಿಗೆ ಮನವಿ ಮಾಡಿದರು.

ಸಭೆಯಲ್ಲಿ ಕೆಎಸ್‌ಐಸಿ ಅಧ್ಯಕ್ಷೆ ಕನೀಜ್ ಫಾತೀಮ್, ನಿಗಮದ ನಿರ್ದೇಶಕರಾದ ಶಮಲಾ ಇಕ್ಬಾಲ್, ರಾಜೇಶ್ ಗೌಡ, ಮಹಮದ್ ಇಕ್ರಮುಲ್ಲಾ ಶರೀಪ್, ಚಂದ್ರಶೇಖರ್, ಜ್ಯೋತಿ, ಶಿವಕುಮಾರ್ ಸೇರಿದಂತೆ ಹಲವರು ಹಾಜರಿದ್ದರು.