ಹಗರಿಬೊಮ್ಮನಹಳ್ಳಿ: ಅಪೂರ್ಣಗೊಂಡಿರುವ ಗಂಗಾದೇವಿಯ ದೇಗುಲ ಹಾಗೂ ಪುತ್ಥಳಿ ಸಹಿತ ಅಂಬಿಗರ ಚೌಡಯ್ಯ ವೃತ್ತ ನಿರ್ಮಾಣ ಮತ್ತು ಸಮುದಾಯ ಭವನದ ಕಾಮಗಾರಿಗಳನ್ನು ಪೂರಕ ಅನುದಾನ ಒದಗಿಸಿ ೨೦೨೭ರೊಳಗೆ ಪೂರ್ಣಗೊಳಿಸಲಾಗುವುದು. ಜೊತೆಗೆ ಗಂಗಾ ಮತಸ್ಥ ಸಮಾಜದ ಅಭಿವೃದ್ಧಿಗೆ ಬದ್ಧ ಎಂದು ಶಾಸಕ ನೇಮರಾಜ್ ನಾಯ್ಕ ಭರವಸೆ ನೀಡಿದರು.
ಪೋಷಕರು, ತಮ್ಮ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಅಹರ್ನಿಶಿ ಶ್ರಮಿಸುತ್ತಾರೆ. ಮಕ್ಕಳು, ಪೋಷಕರ ನಂಬಿಕೆಯನ್ನು ಹುಸಿಗೊಳಿಸದೇ ಶಿಕ್ಷಣದಲ್ಲಿ ಗಮನಾರ್ಹ ಸಾಧನೆಗೈಯಬೇಕು. ಶಿಕ್ಷಣದಿಂದ ಬರೀ ಕುಟುಂಬದ ಅಭಿವೃದ್ಧಿಯಾಗುವುದಿಲ್ಲ. ದೇಶದ ಅಭಿವೃದ್ಧಿಗೂ ಶಿಕ್ಷಣ ಪೂರಕವಾಗಿದೆ ಎಂಬ ಕಿವಿಮಾತು ಹೇಳಿದರು.
ವಿಧಾನಪರಿಷತ್ತಿನ ಮುಖ್ಯ ಸಚೇತಕ ಎನ್.ರವಿಕುಮಾರ್ ಮಾತನಾಡಿ, ವಿದ್ಯಾರ್ಥಿಗಳು ಏಕಾಗ್ರತೆ ಸಾಧಿಸುವ ಮೂಲಕ ಶಿಕ್ಷಣದ ಗುರಿ ಮುಟ್ಟಬೇಕು. ಪಕ್ಷಾತೀತವಾಗಿ ಸಮಾಜವನ್ನು ಸಂಘಟಿಸಬೇಕು ಎಂದು ಕಿವಿಮಾತು ಹೇಳಿದರು. ಗಂಗಾವತಿಯ ರಾಷ್ಟ್ರೀಯ ಸಂಪನ್ಮೂಲ ವ್ಯಕ್ತಿ ಈ.ಧನಂಜಯ ಮಾರ್ಗದರ್ಶಿ ಉಪನ್ಯಾಸ ನೀಡಿದರು.ಸಮಾಜದ ಜಿಲ್ಲಾಧ್ಯಕ್ಷ ಅಂಬಾಡಿ ನಾಗರಾಜ ಮಾತನಾಡಿ, ಜಿಲ್ಲೆಯಲ್ಲಿ ಸಮಾಜ ಬಲಿಷ್ಠವಾಗಿದೆ. ಆದರೂ ಪಕ್ಷಾತೀತವಾಗಿ ಪರಸ್ಪರ ಸಮನ್ವಯದೊಂದಿಗೆ ರಾಜಕೀಯ ಪ್ರಾತಿನಿಧ್ಯ ಪಡೆಯಬೇಕು ಎಂದು ಆಶಿಸಿದರು. ಇದಕ್ಕೂ ಮುನ್ನ ಸುಕ್ಷೇತ್ರ ನರಸೀಪುರ ಶಾಂತ ಭೀಷ್ಮ ಚೌಡಯ್ಯ ಶ್ರೀಗಳು ಪಟ್ಟಣದ ಬಂಡಿಹಳ್ಳಿ ಮತ್ತು ಚಿಂತ್ರಪಳ್ಳಿ ಕೂಡು ರಸ್ತೆಯಲ್ಲಿ ನಿಜಶರಣ ಅಂಬಿಗರ ಚೌಡಯ್ಯ ವೃತ್ತದ ನಾಮಫಲಕ ಅನಾವರಣಗೊಳಿಸಿದರು.
ನಂದೀಪುರ ಡಾ.ಮಹೇಶ್ವರ ಶ್ರೀಗಳು, ಕಡಲಬಾಳು ಶಾಖಾ ಗವಿಮಠದ ಪ್ರಶಾಂತ ಶ್ರೀಗಳು, ಹಾಲಶಿದ್ದೇಶ್ವರ ಶ್ರೀಗಳು ಮತ್ತು ಹಂಪಸಾಗರ ನವಲಿ ಮಠದ ರುದ್ರಮುನಿ ಶಿವಾಚಾರ್ಯ ಶ್ರೀಗಳು ಸಾನಿಧ್ಯ ವಹಿಸಿದ್ದರು.