ಶಾಲಾ ಪ್ರಾರಂಭೋತ್ಸವ, ಮಕ್ಕಳಿಗೆ ಪುಸ್ತಕ, ಸಮವಸ್ತ್ರ ವಿತರಣೆ
ಕನ್ನಡಪ್ರಭ ವಾರ್ತೆ ಹೂವಿನಹಡಗಲಿರಾಜ್ಯದ ಎಲ್ಲ ಸರ್ಕಾರಿ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ ಯೋಜನೆ ನಡೆಯುತ್ತಿದೆ. ಆದರೆ ಮಕ್ಕಳು ತಟ್ಟೆ, ಲೋಟ ಮನೆಯಿಂದಲೇ ತರುವಂತಹ ವ್ಯವಸ್ಥೆ ಇತ್ತು. ಇಂತಹ ವ್ಯವಸ್ಥೆ ನಮ್ಮಲ್ಲಿ ಇರಬಾರದೆಂಬ ಕಾರಣಕ್ಕಾಗಿ ಸರ್ಕಾರದ ಇಲಾಖೆ ಕಾರ್ಯದರ್ಶಿ ಬಳಿ ಚರ್ಚಿಸಿ, ಸಾಮಾನು ಖರೀದಿಗೆ ಸರ್ಕಾರದಿಂದ ಆದೇಶ ಹೊರಡಿಸಿ, ಮೊಟ್ಟ ಮೊದಲ ಬಾರಿಗೆ ಗುಣಮಟ್ಟದ ತಟ್ಟೆ, ಲೋಟ ಖರೀದಿ ಮಾಡಿ ಇಂದು ವಿತರಿಸುತ್ತಿದ್ದೇವೆ ಎಂದು ಶಾಸಕ ಕೃಷ್ಣನಾಯ್ಕ ಹೇಳಿದರು.
ತಾಲೂಕಿನ ಮಾಗಳ ಗ್ರಾಮದ ಪಿಎಂಶ್ರೀ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವ ಮತ್ತು ಮಕ್ಕಳಿಗೆ ಪುಸ್ತಕ, ಸಮವಸ್ತ್ರ ವಿತರಿಸಿ ಮಾತನಾಡಿದ ಅವರು, ರಾಜ್ಯ ಯಾವ ವಿಧಾನಸಭಾ ಕ್ಷೇತ್ರದ ಶಾಸಕರು, ಸಚಿವರು ಮಕ್ಕಳಿಗೆ ತಟ್ಟೆ, ಲೋಟ ಖರೀದಿಗೆ ಅವಕಾಶ ಮಾಡಿ ಎಂದಾಗ ಇಲ್ಲಿ ಅವಕಾಶವಿಲ್ಲ ಎಂದು ಹೇಳುತ್ತಿದ್ದರು. ಆದರೆ ಇದಕ್ಕೆ ಸಂಬಂಧಪಟ್ಟ ಇಲಾಖೆಯ ಕಾರ್ಯದರ್ಶಿ ಬಳಿ ಹಳ್ಳಿ ಸರ್ಕಾರಿ ಶಾಲೆಯ ಮಕ್ಕಳ ಪರಿಸ್ಥಿತಿ ವಿವರಿಸಿದ ಬಳಿಕ, ಸರ್ಕಾರ ಕ್ರಮಕೈಗೊಂಡು ಸಾಮಾನು ಖರೀದಿಗೆ ಅವಕಾಶ ನೀಡಿರುವ ಫಲವಾಗಿ, ಇಂದು ಎಲ್ಲ ಸರ್ಕಾರಿ ಶಾಲೆಗಳಲ್ಲಿ ತಟ್ಟೆ, ಲೋಟಗಳನ್ನು ಖರೀದಿ ಮಾಡಲು ಜಿಪಂ, ತಾಪಂ ಅನುದಾನದಲ್ಲಿ ಅವಕಾಶ ಕಲ್ಪಿಸಲಾಗಿದೆ. ಇಂತಹದೊಂದು ಸಣ್ಣ ಕೆಲಸ ರಾಜ್ಯದ ತುಂಬೆಲ್ಲಾ ಸಂಚಲನ ಮೂಡಿಸಿದೆ ಎಂದರು.ಸರ್ಕಾರಿ ಶಾಲೆಗಳನ್ನು ಸಮಗ್ರ ರೀತಿಯಲ್ಲಿ ಅಭಿವೃದ್ಧಿ ಮಾಡಿ ಎಲ್ಲರಿಗೂ, ಗುಣಮಟ್ಟದ ಶಿಕ್ಷಣ ನೀಡಬೇಕೆಂಬ ಉದ್ದೇಶವಿದೆ. ಈ ಕಾರಣಕ್ಕಾಗಿ ಸಾಕಷ್ಟು ಅನುದಾನವನ್ನು ಜಿಲ್ಲಾ ಖನಿಜ ನಿಧಿಯಿಂದ ಬಳಕೆ ಮಾಡಿಕೊಳ್ಳಲಾಗಿದೆ.
ಶೈಕ್ಷಣಿಕವಾಗಿ ಅನುಷ್ಠಾನ ಮಾಡಿರುವ ಎಲ್ಲ ಸೌಲಭ್ಯಗಳನ್ನು ಸದ್ಭಳಕೆ ಮಾಡಿಕೊಂಡಿರುವ ಹಿನ್ನೆಲೆ ಮಾಗಳ ಸರ್ಕಾರಿ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ ನೀಡುತ್ತಿದ್ದಾರೆ. ಆ ಕಾರಣಕ್ಕಾಗಿ ಇಲ್ಲಿ ಪಾಲಕರು ತಮ್ಮ ಮಕ್ಕಳನ್ನು ಇದೇ ಶಾಲೆಯಲ್ಲಿ ದಾಖಲು ಮಾಡಲು ಸರದಿ ಸಾಲಿನಲ್ಲಿ ನಿಂತಿದ್ದಾರೆ. ಇದೊಂದು ಉತ್ತಮ ಬೆಳವಣಿಗೆ ಎಂದ ಅವರು, ನನಗೆ ಇದು ಮತ್ತಷ್ಟು ಸರ್ಕಾರಿ ಶಾಲೆ ಅಭಿವೃದ್ಧಿ ಮಾಡಲು ಹುಮ್ಮಸ್ಸು ತಂದಿದೆ ಎಂದರು.ಕಲ್ಯಾಣ ಕರ್ನಾಟಕ ಪ್ರದೇಶದಲ್ಲೇ ಹೂವಿನಹಡಗಲಿ ಶೈಕ್ಷಣಿಕವಾಗಿ ಮೊದಲ ಸ್ಥಾನದಲ್ಲಿದೆ. ಇದು ಬಹಳ ಹೆಮ್ಮೆಯ ವಿಚಾರವಾಗಿದ್ದು, ಮುಂಬರುವ ದಿನಗಳಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ ಗುಣಮಟ್ಟ ಹೆಚ್ಚಿಸಲು ಸಿಸಿ ಕ್ಯಾಮೆರಾ ಹಾಗೂ ಬಯೋ ಮೆಟ್ರಿಕ್ ವ್ಯವಸ್ಥೆ ಮಾಡುತ್ತೇನೆಂದು ಭರವಸೆ ನೀಡಿದರು.
ಮಾಗಳ-ಕಲ್ಲಗನೂರು ಸೇತುವೆ ಸ್ಥಳಾಂತರಕ್ಕಾಗಿ ಕೆಲವರು ಪತ್ರ ಚಳವಳಿ ಮಾಡಿದ್ದರು. ಆದರೆ ಮತ್ತೆ ಅದೇ ಸ್ಥಳದಲ್ಲೇ ಮಾಡಬೇಕೆಂಬ ಉದ್ದೇಶದಿಂದ ಜಲ ಸಂಪನ್ಮೂಲ ಸಚಿವರೊಂದಿಗೆ ಮಾತನಾಡಿ ಬಗೆಹರಿಸಿದ್ದೇವೆ. ಈಗಾಗಲೇ ಕ್ರಿಯಾ ಯೋಜನೆ ಮಂಜೂರಾಗಿ ಸೇತುವೆ ನಿರ್ಮಾಣಕ್ಕೆ ತಳಪಾಯದ ಮಣ್ಣು ಪರೀಕ್ಷೆ ಕಾರ್ಯ ನಡೆಯುತ್ತಿದೆ. ಇದಕ್ಕಾಗಿ 100 ಕೋಟಿ ಹೆಚ್ಚು ಅನುದಾನ ಬಿಡುಗಡೆಯಾಗುತ್ತದೆ. ಶೀಘ್ರದಲ್ಲೇ ಕಾಮಗಾರಿ ಆರಂಭವಾಗಲಿದೆ. ಇದರಿಂದ ಉತ್ತರ ಕರ್ನಾಟಕಕ್ಕೆ ಹೆಚ್ಚು ಸಂಪರ್ಕ ಹೊಂದಿ ಅಭಿವೃದ್ಧಿಗೆ ನಾಂದಿಯಾಗಲಿದೆ ಎಂದರು.ಗ್ರಾಪಂ ಅಧ್ಯಕ್ಷೆ ಎಲ್.ಬಸಮ್ಮ ಅಧ್ಯಕ್ಷತೆ ವಹಿಸಿದ್ದರು. ತಹಸೀಲ್ದಾರ್ ಸಂತೋಷಕುಮಾರ್, ಬಿಇಒ ಮಹೇಶ ಪೂಜಾರ, ಬಿಆರ್ಸಿ ಎ.ಕೋಟೆಪ್ಪ, ಎಸ್ಡಿಎಂಸಿ ಅಧ್ಯಕ್ಷೆ ಕೆ.ಮಮತಾ, ಬಿಜೆಪಿ ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ ಪೂಜಾರ, ತೋಟರ ಮಲ್ಲಿಕಾರ್ಜುನಪ್ಪ, ಕೆ.ಸತ್ಯನಾರಾಯಣ ರೆಡ್ಡಿ, ಆರ್.ಟಿ. ನಾಗರಾಜ, ಗುಡಿ ಭೂಪಾಲಪ್ಪ, ಎಂ.ತವನಪ್ಪ, ಎಲ್.ಮಂಜುನಾಥ, ಸುಭಾಷಗೌಡ ಪಾಟೀಲ್, ಎಂ.ಶಾಂತರಾಜ, ಅಮೀರ್, ಕೆಂಚಪ್ಪ, ಕೊಟ್ರೇಶ ನಾಯ್ಕ, ಬಿ.ಎಂ. ಅಭಿಷೇಕ ಉಪಸ್ಥಿತರಿದ್ದರು. ಶಾಲಾ ಮುಖ್ಯ ಶಿಕ್ಷಕ ಡಿ.ವಿರೂಪಣ್ಣ ಸ್ವಾಗತಿಸಿ, ಮಾದೇಶ್ವರ ನಿರೂಪಿಸಿದರು.