ಸ್ಟೋನ್ ಕ್ರಷರ್‌ ಕಾರ್ಪೋರೇಟ್ ವಲಯಕ್ಕೆ ನೀಡಲು ಹುನ್ನಾರ

KannadaprabhaNewsNetwork | Published : Dec 13, 2024 12:46 AM

ಸಾರಾಂಶ

ಚಿತ್ರದುರ್ಗ: ಸ್ಟೋನ್ ಕ್ರಷರ್‌ಗಳನ್ನು ಕಾರ್ಪೋರೇಟ್ ವಲಯಕ್ಕೆ ನೀಡಲು ರಾಜ್ಯ ಸರ್ಕಾರ ಹುನ್ನಾರ ನಡೆಸಿದೆ. ಹಾಲಿ ಜಾರಿಗೊಳಿಸಿರುವ ಅವೈಜ್ಞಾನಿಕ ಕಾಯಿದೆಗಳನ್ನು ಹಿಂದಕ್ಕೆ ಪಡೆಯದಿದ್ದರೆ ಮುಂಬರುವ ಜನವರಿ 5ರ ನಂತರ ಸ್ಟೋನ್ ಕ್ರಷರ್‌ಗಳನ್ನು ಬಂದ್ ಮಾಡಿ ರಾಜ್ಯವ್ಯಾಪಿ ಹೋರಾಟ ನಡೆಸುವುದಾಗಿ ಜಿಲ್ಲಾ ಕ್ವಾರಿ ಮತ್ತು ಸ್ಟೋನ್ ಕ್ರಷರ್ ಓನರ್ಸ್ ಅಸೋಸಿಯೇಷನ್ ಎಚ್ಚರಿಕೆ ನೀಡಿದೆ.

ಚಿತ್ರದುರ್ಗ: ಸ್ಟೋನ್ ಕ್ರಷರ್‌ಗಳನ್ನು ಕಾರ್ಪೋರೇಟ್ ವಲಯಕ್ಕೆ ನೀಡಲು ರಾಜ್ಯ ಸರ್ಕಾರ ಹುನ್ನಾರ ನಡೆಸಿದೆ. ಹಾಲಿ ಜಾರಿಗೊಳಿಸಿರುವ ಅವೈಜ್ಞಾನಿಕ ಕಾಯಿದೆಗಳನ್ನು ಹಿಂದಕ್ಕೆ ಪಡೆಯದಿದ್ದರೆ ಮುಂಬರುವ ಜನವರಿ 5ರ ನಂತರ ಸ್ಟೋನ್ ಕ್ರಷರ್‌ಗಳನ್ನು ಬಂದ್ ಮಾಡಿ ರಾಜ್ಯವ್ಯಾಪಿ ಹೋರಾಟ ನಡೆಸುವುದಾಗಿ ಜಿಲ್ಲಾ ಕ್ವಾರಿ ಮತ್ತು ಸ್ಟೋನ್ ಕ್ರಷರ್ ಓನರ್ಸ್ ಅಸೋಸಿಯೇಷನ್ ಎಚ್ಚರಿಕೆ ನೀಡಿದೆ.

ಈ ಕುರಿತು ಪತ್ರಕರ್ತರ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಸೋಸಿಯೇಷನ್ ಅಧ್ಯಕ್ಷ ಅಬ್ದುಲ್ ಮಜೀದ್, ಸ್ಟೋನ್ ಕ್ರಷರ್ ಮಾಲೀಕರು ಎದುರುಸುತ್ತಿರುವ ಸಮಸ್ಯೆಗಳ ನಿವಾರಣೆ ಮಾಡುವಂತೆ ಆಗ್ರಹಿಸಿ ನಾಲ್ಕೈದು ವರ್ಷಗಳಿಂದಲೂ ಸರ್ಕಾರಕ್ಕೆ ಬೇಡಿಕೆ ಸಲ್ಲಿಸಿದ್ದು, ನೆನೆಗುದ್ದಿಗೆ ಬಿದ್ದಿದೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಒಂದೆರಡು ಬೇಡಿಕೆಗಳನ್ನು ಈಡೇರಿಸಿದ್ದನ್ನು ಬಿಟ್ಟರೆ ಪ್ರಮುಖ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕಳೆದ ವರ್ಷ ಬೆಳಗಾವಿ ಸುವರ್ಣ ಸೌಧದಲ್ಲಿ ನಡೆದ ಚಳಿಗಾಲದ ಅಧಿವೇಶನದಲ್ಲಿ ಹೋರಾಟ ನಡೆಸಿದ್ದೆವು. ಸರ್ಕಾರ ಕಿವಿಗೊಡದೆ ಗುತ್ತಿಗೆದಾರರು ಮತ್ತು ಕ್ರಷರ್‌ಗಳಿಂದಲೂ ರಾಜಧನ ವಸೂಲು ಮಾಡುತ್ತಿದೆ. ಕ್ರಷರ್‌ಗಳ ಮುಚ್ಚಿಸಿ ಕಾರ್ಪೊರೇಟ್‍ ವಲಯಗಳಿಗೆ ಅವಕಾಶ ಮಾಡಿಕೊಡಲು ಬಿಡುವುದಿಲ್ಲ ಎಂದರು. ರಾಜ್ಯ ಸರ್ಕಾರ ಅವೈಜ್ಞಾನಿಕ ಕಾಯಿದೆಗಳನ್ನು ಜಾರಿಗೊಳಿಸಿರುವುದು ನಮಗೆ ಹೊರೆಯಾಗಿದೆ. ಗಣಿ ಮತ್ತು ಭೂವಿಜ್ಞಾನ ಇಲಾಖೆಯಿಂದ ಪರ್ಮಿಟ್ ತೆಗೆದುಕೊಂಡಿದ್ದೇವೆ. ಕ್ರಷರ್‌ಗಳಿಗೆ ನಾವುಗಳು ಕರೆಂಟ್ ಉಪಯೋಗಿಸುತ್ತಿಲ್ಲ. ಒಂದು ಕ್ರಷರ್ ಜಾಮ್ ಆದರೆ ಅದನ್ನು ತೆಗೆಯಲು ಒಂದೆರಡು ಗಂಟೆಗಳ ಸಮಯ ಬೇಕು. ಆಗ ಕರೆಂಟ್ ಬಳಕೆಯಾಗುತ್ತದೆ. ಒಂದು ಕ್ರಷರ್‌ನಿಂದ ಐದೂನೂರರಿಂದ ಆರು ನೂರು ಕುಟುಂಬಗಳು ಜೀವಿಸುತ್ತಿವೆ. ವಾಹನಗಳಿಗೆ ಜಿಪಿಎಸ್ ಅಳವಡಿಸಲಾಗಿದೆ. ಎಲ್ಲಿಯೂ ಕೂಡಾ ಅಕ್ರಮಕ್ಕೆ ಅವಕಾಶವಿಲ್ಲ ಎಂದು ತಿಳಿಸಿದರು. ವರ್ಷಕ್ಕೊಂದು ಬಾರಿ ನವೀಕರಣಕ್ಕೆ ಹತ್ತು ಸಾವಿರ ರು.ಗಳನ್ನು ಪಾವತಿಸಬೇಕು. ಚಾಮರಾಜನಗರದಲ್ಲಿ ಲಾರಿ ಮಾಲೀಕರೊಬ್ಬರಿಗೆ ಹದಿನೈದು ಲಕ್ಷ ರು.ಗಳ ದಂಡ ವಿಧಿಸಿದ್ದರಿಂದ ಹಾಡು ಹಗಲೆ ನೇಣಿಗೆ ಶರಣಗಾಗಿದ್ದಾರೆ. ಸರ್ಕಾರ ನಮ್ಮ ಪ್ರಮುಖ ಬೇಡಿಕೆಗಳನ್ನು ಈಡೇರಿಸಿ ಸಮಸ್ಯೆಗಳಿಗೆ ಪರಿಹಾರ ಒದಗಿಸಬೇಕು. ಇಲ್ಲವಾದಲ್ಲಿ ರಾಜ್ಯಾದ್ಯಂತ ಪ್ರತಿಭಟನೆಗೆ ಮುಂದಾಗುತ್ತೇವೆ. ಒಂದು ಜಲ್ಲಿ ಕಲ್ಲು ಕೂಡ ಹೊರಗಿನಿಂದ ಬರಲು ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು. ಅಸೋಸಿಯೇಷನ್ ಪದಾಧಿಕಾರಿ ಜಿ.ಸಿ.ಸುರೇಶ್‍ಬಾಬು ಮಾತನಾಡಿ, ಕಲ್ಲು ಗಣಿಗಾರಿಕೆ ಮಾಡುವ ಪ್ರದೇಶಗಳಿಗೆ ಹೆಕ್ಟೇರ್‌ಗೆ ಐದು ಲಕ್ಷ ರು.ಗಳನ್ನು ನಿಗದಿಪಡಿಸಬೇಕು. ಹೊಸ ಕಾನೂನುಗಳನ್ನು ರದ್ದುಪಡಿಸಿ, ಹಳೆ ಕಾನೂನು ಜಾರಿಗೆ ತರಬೇಕು. ಟ್ರಾಕ್ಟರ್‌ಗಳಿಗೆ ಜಿ.ಪಿ.ಎಸ್.ಅಳವಡಿಸಿರುವುದನ್ನು ಸರ್ಕಾರ ಕೂಡಲೇ ಹಿಂದಕ್ಕೆ ಪಡೆಯಬೇಕೆಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕ್ವಾರಿ ಮತ್ತು ಸ್ಟೋನ್ ಕ್ರಷರ್ಸ್ ಅಸೋಸಿಯೇಷನ್ ಕಾರ್ಯದರ್ಶಿ ಜಿ.ಬಿ.ಶೇಖರ್, ಉಪಾಧ್ಯಕ್ಷ ವೀರಭದ್ರಣ್ಣ, ಪದಾಧಿಕಾರಿಗಳಾದ ವೆಂಕಟೇಶ್, ಮಲ್ಲಿಕಾರ್ಜುನ್, ಅಭಿಷೇಕ್ ಇದ್ದರು.

Share this article