ಕಲ್ಲು ಕದ್ದು ಸಾಗಾಣಿಕೆ: ಮೂರು ಟಿಪ್ಪರ್‌ ವಶ!

KannadaprabhaNewsNetwork | Published : Jan 25, 2025 1:00 AM

ಸಾರಾಂಶ

ಗುಂಡ್ಲುಪೇಟೆ ತಾಲೂಕಿನ ಬೇಗೂರು ಠಾಣೆಯಲ್ಲಿ ವಶಪಡಿಸಿಕೊಂಡ ಟಿಪ್ಪರ್‌ಗಳೊಂದಿಗೆ ಭೂ ವಿಜ್ಞಾನಿಗಳಾದ ನಾಗಮಧು ಗೌಡ, ಪ್ರಸನ್ನ ಕುಮಾರ್‌ ಇದ್ದಾರೆ.

ಗುಂಡ್ಲುಪೇಟೆ: ತಾಲೂಕಿನ ಹಿರೀಕಾಟಿ ಬಳಿ ಪರ್ಮಿಟ್‌ ಇಲ್ಲದೆ ಕಲ್ಲು ಸಾಗಿಸುತ್ತಿದ್ದ ಮೂರು ಟಿಪ್ಪರ್‌ಗಳನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ವಶಕ್ಕೆ ಪಡೆದಿದೆ.

ಶುಕ್ರವಾರ ಬೆಳ್ಳಂ ಬೆಳಗ್ಗೆಯೇ ಪರ್ಮಿಟ್‌ ಇಲ್ಲದೆ ಮೂರು ಟಿಪ್ಪರ್‌ಗಳು ಕಲ್ಲು ಸಾಗಿಸುತ್ತಿದ್ದಾಗ ಭೂ ವಿಜ್ಞಾನಿ ನಾಗಮಧುಗೌಡ, ಪ್ರಸನ್ನ ತಡೆದು ಪರಿಶೀಲನೆ ನಡೆಸಿದಾಗ ಪರ್ಮಿಟ್‌ ಇರಲಿಲ್ಲ. ಕೂಡಲೇ ಬೇಗೂರು ಪೊಲೀಸ್‌ ಠಾಣೆಗೆ ಒಪ್ಪಿಸಿದ್ದು, ಪರ್ಮಿಟ್‌ ಇಲ್ಲ, ಜೊತೆಗೆ ಓವರ್‌ ಲೋಡ್‌ ಕಲ್ಲಿಗೆ ದಂಡ ವಸೂಲಿ ಮಾಡಲು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ನಿರ್ಧರಿಸಿದೆ. ಹಿರೀಕಾಟಿ ಬಳಿಯ ಕ್ರಷರ್‌ಗೆ ಹತ್ತಾರು ಟಿಪ್ಪರ್‌ಗಳು ಪರ್ಮಿಟ್‌ ಇಲ್ಲದೆ ತೆರಳುತ್ತಿದ್ದಾಗ ಮಾಹಿತಿ ಅರಿತು ಪರ್ಮಿಟ್‌ ಹಾಕಿದ ಬಳಿಕ ಕ್ರಷರ್‌ಗೆ ಟಿಪ್ಪರ್‌ ತೆರಳಿವೆ ಎನ್ನಲಾಗಿದೆ. ರಾತ್ರಿ ಸದ್ದು ನಿಂತಿಲ್ಲ?

ತಾಲೂಕಿನ ಹಿರೀಕಾಟಿ ಗೇಟ್‌ ಬಳಿ ಲಕ್ಷ್ಮೀ ವೆಂಕಟೇಶ್ವರ ಕ್ರಷರ್‌ ರಾತ್ರಿ ಕ್ರಷಿಂಗ್‌ ಮಾಡುತ್ತಿದ್ದು ನಿಲ್ಲಿಸಿ ಎಂದು ಅಧಿಕಾರಿಗಳನ್ನು ಗೋಗರೆದರೂ ಮೊಬೈಲ್‌ ಕರೆ ಸ್ವೀಕರಿಸುತ್ತಿಲ್ಲ ಎಂದು ಚಂದ್ರಶೇಖರ್‌ ದೂರಿದ್ದಾರೆ. ರಾತ್ರಿ 10ರ ಬಳಿಕ ಬೆಳಗ್ಗೆ 6ರ ತನಕ ಕ್ರಷರ್‌ ಕ್ರಷಿಂಗ್‌ ಮಾಡಲು ನಿರ್ಭಂಧವಿದೆ. ಲಕ್ಷ್ಮೀ ವೆಂಕಟೇಶ್ವರ ಕ್ರಷರ್‌ ಮಾಲೀಕರ ಮೇಲೆ ರಾತ್ರಿ ಕ್ರಷರ್‌ ಓಡುವ ವಿಚಾರಕ್ಕೆ ಎಫ್‌ಐಆರ್‌ ಕೂಡ ಆಗಿದ್ದರೂ ರಾತ್ರಿ ಕ್ರಷಿಂಗ್‌ ಮಾಡುತ್ತಿದೆ ಎಂದು ದೂರಿದರು.

ಈ ಸಂಬಂಧ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಭೂ ವಿಜ್ಞಾನಿ ಮಲ್ಲೇಶ್‌ಗೆ ಕರೆ ಮಾಡಿದರೆ ಕರೆ ಸ್ವೀಕರಿಸುತ್ತಿಲ್ಲ. ಶುಕ್ರವಾರ ಮುಂಜಾನೆ ಕರೆ ಸ್ವೀಕರಿಸದೆ ಇದ್ದಾಗ ವಾಯ್ಸ್‌ ಮೆಸೇಜ್‌ ಹಾಕಿದ ಬಳಿಕ ಶುಕ್ರವಾರ ಮುಂಜಾನೆ 5.45 ರಲ್ಲಿ ಕ್ರಷರ್‌ ಕ್ರಷಿಂಗ್‌ ನಿಲ್ಲಿಸಿದ್ದಾರೆ ಎಂದು ಹೇಳಿದ್ದಾರೆ.

Share this article