-ತಾ.ಪಂ ಅಧಿಕಾರಿ ವೀರಣ್ಣ ಕೌಲಗಿ, ತಹಸೀಲ್ದಾರ ಸಂಜೀವಕುಮಾರಗೆ ಸಂಘಟನೆಗಳಿಂದ ಮನವಿ
ಕನ್ನಡಪ್ರಭ ವಾರ್ತೆ ಅಫಜಲ್ಪುರ
ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿ ಖಂಡಿಸಿ ಶಾಂತಿಯುತ ಪ್ರತಿಭಟನೆ ನಡೆಯಿತು.ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ರೈತ ವಿರೋಧಿ, ಕಾರ್ಮಿಕ ವಿರೋಧಿ ನೀತಿಗಳನ್ನು ಪ್ರತಿಭಟನಕಾರರು ತೀವ್ರವಾಗಿ ಖಂಡಿಸಿದರು.
ರೈತ ಸಂಘದ ತಾಲೂಕು ಅಧ್ಯಕ್ಷ ಶ್ರೀಮಂತ ಬಿರಾದಾರ, ಕಾರ್ಯದರ್ಶಿ ಗುರು ಚಾಂದಕೋಟೆ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತ ವಿರೋಧಿ ನೀತಿಯನ್ನು ಜಾರಿಗೊಳಿಸಿವೆ. ಕೇಂದ್ರದ ಬಿಜೆಪಿ ಸರ್ಕಾರ ಸಂಪೂರ್ಣವಾಗಿ ರೈತ ವಿರೋಧಿಯಾಗಿದ್ದು ಕೇವಲ ಬಂಡವಾಳಶಾಹಿಗಳ ಪರವಾಗಿ ಕೆಲಸ ಮಾಡುತ್ತಿದೆ. ಕಾರ್ಮಿಕರ ಕೆಲಸದ ಅವಧಿಯನ್ನು 12 ಮತ್ತು 14 ಗಂಟೆಗೆ ಏರಿಕೆ ಮಾಡಲು ಮುಂದಾಗಿರುವ ಕ್ರಮದಿಂದ ಹಿಂದೆ ಸರಿಯಬೇಕು ಎಂದು ಹೇಳಿದರು
ಅಂಬೇಡ್ಕರ್ ವೃತ್ತದಿಂದ ಬಸವೇಶ್ವರ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಿತು. ಬಳಿಕ ತಾ.ಪಂ ಕಾರ್ಯ ನಿರ್ವಾಹಕ ಅಧಿಕಾರಿ ವೀರಣ್ಣ ಕೌಲಗಿ ಮತ್ತು ತಹಸಿಲ್ದಾರ್ ಸಂಜೀವಕುಮಾರ ದಾಸರ ಅವರಿಗೆ ಸಂಘಟನೆಗಳ ಮುಖಂಡರು ಮನವಿ ಪತ್ರ ಸಲ್ಲಿಸಿದರು.ಸುಮಾರು ಒಂದು ಗಂಟೆಗಳ ಕಾಲ ಅಂಬೇಡ್ಕರ್ ವೃತ್ತದಲ್ಲಿ ಸಂಚಾರ ತಡೆದು ಪ್ರತಿಭಟಿಸಿದ್ದರಿಂದ ಕೆಲಕಾಲ ಸಾರ್ವಜನಿಕರಿಗೆ ತೊಂದರೆ ಆಯಿತು.
ಪ್ರತಿಭಟನೆಯಲ್ಲಿ ಬಿಸ್ಮಿಲ್ಲಾ ಖೇಡಗಿ, ಕಲಾವತಿ ಯಳಸಂಗಿ, ಸಿದ್ದಮ್ಮ ನಾಗೋಜಿ, ಕಾಂಚನ ಕಾಂಬಳೆ, ಭೋಜರಾಜ ಪಾಟೀಲ, ಮಹಾದೇವ ಜಮಾದಾರ, ಸುರೇಶ ತಾವರಕೇಡ, ಮೋಸಿನ್ ಖುರೇಶಿ, ಯಶವಂತ ಪಟ್ಟೆದಾರ, ಅರ್ಜುನ, ಶಾಂತಮಲ್ಲಪ್ಪ, ರಜಿಯಾಬೇಗಂ, ಅಪ್ಪಸಾಬ್ ಪಾಟೀಲ ಇತರರಿದ್ದರು. .