ಸಾಗರಪೇಟೆ ಗುಡ್ಡದಲ್ಲಿ ಮಣ್ಣು ಗಣಿಗಾರಿಕೆ ನಿಲ್ಲಿಸಿ

KannadaprabhaNewsNetwork |  
Published : Jun 26, 2026, 01:30 AM IST
ಮಣ್ಣು ಗಣಿಗಾರಿಕೆಯನ್ನು ವಿರೋಧಿಸಿ ನಡೆಸಿದ ಪ್ರತಿಭಟನಾ ಸಭೆಯಲ್ಲಿ ಮಾತನಾಡುತ್ತೀರುವ ಮಾಯಕೊಂಡ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಬಸವರಾಜನಾಯ್ಕ್ | Kannada Prabha

ಸಾರಾಂಶ

ಚನ್ನಗಿರಿ ತಾಲೂಕಿನ ಸಾಗರಪೇಟೆ ಗುಡ್ಡದಲ್ಲಿ ಅಕ್ರಮವಾಗಿ ಮಣ್ಣು ಸಾಗಾಣಿಕೆ ಮಾಡುತ್ತಿದ್ದು, ಇದರಿಂದ ಪ್ರಕೃತಿ ಸಂಪತ್ತು ನಾಶವಾಗುತ್ತಿದೆ ಎಂದು ಬಿಜೆಪಿ ಕಾರ್ಯಕರ್ತರು ಬಸವಾಪಟ್ಟಣ ಗ್ರಾಮದ ನಾಡ ಕಚೇರಿ ಎದುರು ಪ್ರತಿಭಟನೆ ನಡೆಸಿ ಉಪ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದ್ದಾರೆ.

- ಕಂದಾಯ ಅಧಿಕಾರಿಗಳೇ ಶಾಮೀಲು: ಪ್ರತಿಭಟನೆಯಲ್ಲಿ ಬಸವರಾಜ ನಾಯ್ಕ್‌ ಆರೋಪ

- - -

ಕನ್ನಡಪ್ರಭ ವಾರ್ತೆ ಚನ್ನಗಿರಿ

ತಾಲೂಕಿನ ಸಾಗರಪೇಟೆ ಗುಡ್ಡದಲ್ಲಿ ಅಕ್ರಮವಾಗಿ ಮಣ್ಣು ಸಾಗಾಣಿಕೆ ಮಾಡುತ್ತಿದ್ದು, ಇದರಿಂದ ಪ್ರಕೃತಿ ಸಂಪತ್ತು ನಾಶವಾಗುತ್ತಿದೆ ಎಂದು ಬಿಜೆಪಿ ಕಾರ್ಯಕರ್ತರು ಬಸವಾಪಟ್ಟಣ ಗ್ರಾಮದ ನಾಡ ಕಚೇರಿ ಎದುರು ಪ್ರತಿಭಟನೆ ನಡೆಸಿ ಉಪ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು.

ಮಾಜಿ ಶಾಸಕ ಬಸವರಾಜ ನಾಯ್ಕ್ ಈ ಸಂದರ್ಭ ಮಾತನಾಡಿ, ಗುಡ್ಡದ ಮಣ್ಣು ಲೂಟಿಯಾಗುತ್ತಿದ್ದರೂ ಕಂದಾಯ ಇಲಾಖೆ ಅಧಿಕಾರಿಗಳು ಸುಮ್ಮನೆ ಇದ್ಧಾರೆ. ಕಂದಾಯ ಇಲಾಖೆ ಅಧಿಕೃತ ಆದೇಶ ನೀಡಿರುವುದು ಕೋಟ್ಯಂತರ ರು. ಭ್ರಷ್ಟಾಚಾರಕ್ಕೆ ಕಾರಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಳೆದ ಕೆಲವು ತಿಂಗಳ ಹಿಂದೆ ಬಸವಾಪಟ್ಟಣ ಹೋಬಳಿಯ ಸಿದ್ದೇಶ್ವರ ನಗರ, ಕಣಿವೆ ಬಿಳಚಿ, ಹರೋಸಾಗರ ಈ ಗುಡ್ಡ ಪ್ರದೇಶಗಳಲ್ಲಿ ಅಕ್ರಮವಾಗಿ ಮಣ್ಣು ಸಾಗಾಣಿಕೆ ಮಾಡಲಾಗಿದೆ. ಈಗ ಸಾಗರಪೇಟೆ ಮತ್ತು ಮರಬನಹಳ್ಳಿ ಬಸವೇಶ್ವರ ಗುಡ್ಡ ಸೇರಿದಂತೆ ಹತ್ತಾರು ಪ್ರದೇಶಗಳಲ್ಲಿ ಕಂದಾಯ ಇಲಾಖೆಯ ಅಧಿಕಾರಿಗಳೇ ಶಾಮೀಲಾಗಿ ಅಕ್ರಮವಾಗಿ ಮಣ್ಣು ತೆಗೆಯಲು ಅಧಿಕೃತ ಆದೇಶ ನೀಡಿದ್ದಾರೆ ಎಂದು ದೂರಿದರು.

ಮಾಯಕೊಂಡ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಬಿ.ಜಿ.ಸಚೀನ್ ಮಾತನಾಡಿ, ನೈಸರ್ಗಿಕ ಸಂಪನ್ಮೂಲ ಮಣ್ಣು ಸಕಲ ಜೀವರಾಶಿಗಳ ಸ್ವತ್ತಾಗಿದೆ. ಇದರ ದುರ್ಬಳಕೆಯ ಕಾರ್ಯ ನಡೆಯುತ್ತಿದೆ. ಮಣ್ಣಿನ ಸಾಗಾಣಿಕೆಗಾಗಿ ನೂರಾರು ಮರ-ಗಿಡಗಳನ್ನು ಕಡಿದು ಹಾಕಿ, ಗುಡ್ಡಗಳನ್ನು ಸವರಿ ನಾಶ ಮಾಡುವ ಕೃತ್ಯದ ವಿರುದ್ಧ ಕಂದಾಯ ಇಲಾಖೆ ಕ್ರಮ ಕೈಗೊಳ್ಳಬೇಕು. ಆದರೆ, ಇಲಾಖೆಯೇ ಈ ಅಕ್ರಮ ಮಾಡಿಸುತ್ತಿರುವುದು ಎಷ್ಟು ಸರಿ?. ಈ ಬಗ್ಗೆ ಜಿಲ್ಲಾಡಳಿತ ಶೀಘ್ರ ಸೂಕ್ತ ಕ್ರಮ ಕೈಗೊಳ್ಳಬೇಕು. ಅಕ್ರಮವಾಗಿ ಮಣ್ಣು ಸಾಗಾಣಿಕೆ ಮಾಡಿ ಕೋಟ್ಯಂತರ ರು. ಲೂಟಿ ಮಾಡಿದವರನ್ನು ಪತ್ತೆ ಹಚ್ಚಬೇಕು ಎಂದು ಆಗ್ರಹಿಸಿದರು.

ಅಕ್ರಮ ಮಣ್ಣು ಗಣಿಗಾರಿಕೆಯಿಂದ ಗುಡ್ಡದಲ್ಲಿ ಮಣ್ಣು ಕುಸಿದರೆ ಗುಡ್ಡದ ಪಕ್ಕದಲ್ಲಿಯೇ ಇರುವ ಸಾಗರಪೇಟೆ ಕ್ಯಾಂಪಿನ 20ಕ್ಕೂ ಹೆಚ್ಚು ಮನೆಗಳಿಗೆ ಅಪಾಯ ಉಂಟಾಗಲಿದೆ. ಪರಿಶಿಷ್ಠ ಜಾತಿ- ಪಂಗಡದವರು ಸ್ಮಶಾನಕ್ಕೆ ತೆರಳುವ ರಸ್ತೆಯನ್ನು ಹಾಳು ಮಾಡಿದ್ದಾರೆ. ಗುಡ್ಡದಲ್ಲಿ ಮಣ್ಣು ಕುಸಿದರೆ ಗುಡ್ಡದ ಪಕ್ಕದಲ್ಲಿಯೇ ಇರುವ 66/11 ಕೆ.ವಿ. ಸಾಮರ್ಥ್ಯದ ಎಂ.ಯು.ಎಸ್.ಎಸ್. ವಿತರಣಾ ಕೇಂದ್ರವೇ ಮುಚ್ಚಿಕೊಳ್ಳಲಿದೆ. ಈ ಬಗ್ಗೆ ಕಂದಾಯ ಇಲಾಖೆ ಹೆಚ್ಚಿನ ಗಮನ ಹರಿಸಬೇಕು ಎಂದು ಹೇಳಿದರು.

ಪ್ರತಿಭಟನೆಯಲ್ಲಿ ಬಿಜೆಪಿ ಮುಖಂಡರಾದ ಹಾಲೇಶ್ ನಾಯ್ಕ್, ಗಣೇಶ್ ನಾಯ್ಕ್, ಕಾರ್ಯಕರ್ತರು, ಗ್ರಾಮಸ್ಥರು ಭಾಗವಹಿಸಿದ್ದರು.

- - -

-25ಕೆಸಿಎನ್ಜಿ2:

ಮಣ್ಣು ಗಣಿಗಾರಿಕೆ ವಿರೋಧಿಸಿ ನಡೆಸಿದ ಪ್ರತಿಭಟನಾ ಸಭೆಯಲ್ಲಿ ಮಾಯಕೊಂಡ ಕ್ಷೇತ್ರದ ಮಾಜಿ ಶಾಸಕ ಬಸವರಾಜ ನಾಯ್ಕ್ ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಿರೀಕಾಟಿ: ಒತ್ತುವರಿದಾರರಿಗೆ ಜಾಗ ತೆರವು ಮಾಡಲು ಖಡಕ್‌ ಆದೇಶ, 7 ದಿನದ ಗಡುವು
ಚಾ.ನಗರದಲ್ಲಿಯೂ ರಂಗಾಯಣ ಸ್ಥಾಪನೆ ಅಗತ್ಯ: ಅಸ್ಗರ್‌