ಬ್ಯಾಡಗಿ: ಅಸಂಘಟಿತ ವಲಯದಲ್ಲಿ ಗುರ್ತಿಸಿರುವ ಬೀದಿ ಬದಿ ವ್ಯಾಪಾರಸ್ಥರಿಗೆ ಸರ್ಕಾರದಿಂದ ನೀಡಿರುವ ಸೌಲಭ್ಯಗಳನ್ನು ಪಡೆದುಕೊಂಡು ತಮ್ಮ ಆರ್ಥಿಕ ಜೀವನ ಅಭಿವೃದ್ಧಿಪಡಿಸಿಕೊಳ್ಳುವಂತೆ ಪುರಸಭೆ ಮುಖ್ಯಾಧಿಕಾರಿ ವಿನಯಕುಮಾರ ಹೊಳೆಯಪ್ಪಗೋಳ ತಿಳಿಸಿದರು. ಪಟ್ಟಣದ ಪುರಸಭೆ ಆವರಣದಲ್ಲಿ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಹಾಗೂ ಪುರಸಭೆ ಇವರ ಆಶ್ರಯದಲ್ಲಿ ಪಿ.ಎಂ.ಸ್ವನಿಧಿ ಯೋಜನೆಯಲ್ಲಿ ಏರ್ಪಡಿಸಿದ ಬೀದಿಬದಿ ವ್ಯಾಪಾರಸ್ಥರ ಸರ್ವತೋಮುಖ ಅಭಿವೃದ್ಧಿಗೆ ಪಖ್ವಾಡ್ ಅಭಿಯಾನ ಕಾರ್ಯಕ್ರಮದಲ್ಲಿ ಉದ್ದೇಶಿಸಿ ಶುಕ್ರವಾರ ಮಾತನಾಡಿದರು.
ಜಿಲ್ಲಾ ಕೌಶಲ್ಯಾಭಿವೃದ್ದಿ ಯೋಜನಾಧಿಕಾರಿ ವಿನಾಯಕ ಬಾಬು ಮಾತನಾಡಿ, ಜಿಲ್ಲೆಯಾದ್ಯಂತ ಎಲ್ಲ ತಾಲೂಕುಗಳಲ್ಲಿ ಯೋಜನೆ ಯಶಸ್ವಿಯಾಗಿ ನಡೆದಿದೆ. ನ.೧೮ ರಿಂದ ಡಿ.೨ ರವೆಗೆ ೧೫ ದಿನಗಳ ಕಾಲ ಅಭಿಯಾನ ಗುರಿ ನಡೆದಿದೆ. ಸ್ಥಳೀಯ ವ್ಯಾಪಾರಸ್ಥರಿಗೆ ಪಿಎಂ.ಸ್ವನಿಧಿ ಯೋಜನೆಯ ಮಾಹಿತಿ, ಶಿಕ್ಷಣ ಮತ್ತು ಸಂವಹನ ಕಾರ್ಯಕ್ರಮ ಕೈಗೊಂಡು ಸಾಲ ಸೌಲಭ್ಯ ಒದಗಿಸಲಾಗುತ್ತಿದೆ. ಬ್ಯಾಂಕಗಳಿಗೆ ಅನುಮೋದನೆಗೊಂಡ ಸಾಲಗಳನ್ನು ತ್ವರಿತಗತಿಯಲ್ಲಿ ವಿತರಿಸಲು ಸೂಚಿಸಲಾಗಿದೆ.ಪುರಸಭೆಯಲ್ಲಿ ಒಟ್ಟು ೫೩೭ ಕ್ಕೂ ಹೆಚ್ಚು ಜನ ಅರ್ಜಿದಾರರಿದ್ದು, ಈ ಪೈಕಿ ೪೦೧ ಜನರು ಗುರ್ತಿನ ಚೀಟಿ ಪಡೆದಿದ್ದಾರೆ. ೪೯೦ ಜನ ೧೦ ಸಾವಿರದಂತೆ ವಿವಿಧ ಬ್ಯಾಂಕಗಳಲ್ಲಿ ಒಟ್ಟು ೪೯ ಲ.ರು. ಪಡೆದಿದ್ದಾರೆ. ೧೦ ಸಾವಿರ ಮರುಪಾವತಿ ಮಾಡಿದಲ್ಲಿ ಪುನ: ೨೦ ಸಾವಿರ ಹಾಗೂ ೫೦ ಸಾ.ರು.ವಿತರಿಸಲಾಗುತ್ತಿದೆ. ೮೭ ಫಲಾನುಭವಿಗಳಿಗೆ ೫೦ ಸಾವಿರದಂತೆ ೪೩ ಲ.ರು. ಸಾಲ ವಿತರಣೆಯಾಗಿದೆ. ಸಕಾಲಕ್ಕೆ ಸಾಲ ಮರುಪಾವತಿ ಮಾಡಿದಲ್ಲಿ ಶೇ.೭ ರಷ್ಟು ಬಡ್ಡಿ ಸಬ್ಸಿಡಿ ದೊರೆಯುತ್ತದೆ ಎಂದರು. ಹೊಸದಾಗಿ ಬೀದಿ ಬದಿ ವ್ಯಾಪಾರಸ್ಥರು ಗುರ್ತಿನ ಚೀಟಿ ಪಡೆಯಲು ಅರ್ಜಿ ಸಲ್ಲಿಸಬಹುದಾಗಿದೆ ಎಂದರು. ಅಲ್ಲದೆ ಈ ಯೋಜನೆ ಫಲಾಭವಿಗಳಿಗೆ ಸಾಮಾಜಿಕ ಭದ್ರತಾ ಸೌಲಭ್ಯಗಳು ಸಿಗಲಿವೆ ಎಂದರು.ಸಭೆಯಲ್ಲಿ ೩೦೦ಕ್ಕೂ ಹೆಚ್ಚು ಬೀದಿ ಬದಿ ವ್ಯಾಪಾರಸ್ಥರು ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ಪುರಸಭೆ ಚೇರಮನ್ ಚನ್ನವೀರಪ್ಪ ಶೆಟ್ಟರ, ಉಪಾಧ್ಯಕ್ಷ ಸುಭಾಸ ಮಾಳಗಿ, ಸದಸ್ಯರಾದ ಕಲಾವತಿ ಬಡಿಗೇರ, ಶಿವಯೋಗಿ ಅಂಗಡಿ, ಮಂಗಳಾ ಗೆಜ್ಜೆಹಳ್ಳಿ, ಗಾಯತ್ರಿ ರಾಯ್ಕರ, ರಾಮಣ್ಣ ಕೋಡಿಹಳ್ಳಿ, ಕವಿತಾ ಸೊಪ್ಪಿನಮಠ, ವಿನಯಕುಮಾರ ಹಿರೇಮಠ, ಶಂಕರ ಕುಸಗೂರ, ಸರೋಜ ಉಳ್ಳಾಗಡ್ಡಿ, ಮಹಮದ್ರಫೀ ಮುದಗಲ್, ಪಕ್ಕೀರವ್ವ ಚಲವಾದಿ, ಮಲ್ಲವ್ವ ಪಾಟೀಲ, ಕಮಲವ್ವ ಕುರಕುಂದಿ, ಹಾಗೂ ನಾಮನಿರ್ಧೆಶಿತ ಸದಸ್ಯರಾದ ರಾಜೇಸಾಬ ಕಳ್ಳಿಹಾಳ, ಸುಮಂಗಲಾ ರಾರಾವಿ, ಪಕ್ಕೀರಪ್ಪ ಕರಡೇರ, ಸೋಮಣ್ಣ ಕರ್ಚಡ, ಸೋಮಶೇಖರ ಸಂಕಣ್ಣನವರ, ಪುರಸಭೆ ವ್ಯವಸ್ಥಾಪಕಿ ನಾಗರತ್ನ ಹೊಸಮನಿ, ಸಮುದಾಯ ಸಂಘಟನಾಧಿಕಾರಿ ವಿಜಯಲಕ್ಷ್ಮೀ ಸಣ್ಣಮನಿ, ಗುತ್ತೆಮ್ಮ ಬೊಗಳೇರ ಇದ್ದರು.