ಮುತ್ತಿನಕೊಪ್ಪ ಸರ್ಕಾರಿ ಪ್ರೌಢ ಶಾಲೆಯಲ್ಲಿ ಕನ್ನಡಪ್ರಭ ಯುವ ಆವೃತ್ತಿ ಬಿಡುಗಡೆ ಸಮಾರಂಭ
ವಿದ್ಯಾರ್ಥಿಗಳು ದಿನ ಪತ್ರಿಕೆ, ಪುಸ್ತಕಗಳನ್ನು ಓದುವ ಅಭ್ಯಾಸ ಬೆಳೆಸಿಕೊಳ್ಳಬೇಕು ಎಂದು ದಾನಿ ಹಾಗೂ ಕಣಿವೆಯ ನಾಗ ಚಂದ್ರ ಪ್ರತಿಷ್ಠಾನ ಅಧ್ಯಕ್ಷ ಕಣಿವೆ ವಿನಯ್ ಸಲಹೆ ನೀಡಿದರು.
ಮಂಗಳವಾರ ಮುತ್ತಿನಕೊಪ್ಪ ಸರ್ಕಾರಿ ಪ್ರೌಢ ಶಾಲೆಯಲ್ಲಿ ಕಣಿವೆ ನಾಗಚಂದ್ರ ಪ್ರತಿಷ್ಠಾನದ ಪ್ರಾಯೋಜಕತ್ವದಲ್ಲಿ ನಡೆದ ಕನ್ನಡಪ್ರಭ ಯುವ ಆವೃತ್ತಿ ಬಿಡುಗಡೆ ಮಾಡಿ ಮಾತನಾಡಿದರು. ಕನ್ನಡಪ್ರಭದ ಯುವ ಆವೃತ್ತಿಯನ್ನು ಎಸ್.ಎಸ್.ಎಲ್.ಸಿ. ಪ್ರತಿ ವಿದ್ಯಾರ್ಥಿಗಳು ಓದಬೇಕು. ಕನ್ನಡಪ್ರಭ ದಿನ ಪತ್ರಿಕೆ ಹಲವಾರು ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಂಡಿದೆ. ಖಾದ್ರಿ ಶಾಮಣ್ಣ ಸಂಪಾದಕರಾಗಿದ್ದಾಗ ಬರೆದ ಸಂಪಾದಕೀಯವನ್ನು ಮುಖ್ಯಮಂತ್ರಿಗಳು ಪ್ರತಿ ದಿನ ಓದಿ ಆ ವಿಚಾರ ಅನುಷ್ಠಾನಕ್ಕೆ ತರುತ್ತಿದ್ದರು ಎಂಬುದು ಕನ್ನಡಪ್ರಭ ದಿನ ಪತ್ರಿಕೆ ಹೆಗ್ಗಳಿಕೆ.ಇಂದಿನ ಶಿಕ್ಷಣದಲ್ಲಿ ಸಂಸ್ಕಾರದ ಕೊರತೆ ಇದೆ. ಹಿಂದೆ ಶಿಕ್ಷಣದಲ್ಲಿ ಶೇ.80 ರಷ್ಟು ಸಂಸ್ಕಾರವೇ ಇರುತ್ತಿತ್ತು. ಈಗಿನ ಶಿಕ್ಷಣ ಕೇವಲ ಅಂಕಗಳಿಕೆಗೆ ಮಾತ್ರ ಇದೆ.ಸಂಸ್ಕಾರದ ಕೊರತೆ ಇದೆ. ಸಂಸ್ಕಾರಯುತ ಶಿಕ್ಷಣ ಅಗತ್ಯ. ಮಕ್ಕಳಿಗೆ ಸರ್ಕಾರಿ ಶಾಲೆ ಯಲ್ಲಿ ಓದುತ್ತಿದ್ದೇವೆ ಎಂಬ ಕೀಳಿರಿಮೆ ಬೇಡ. ಸರ್ಕಾರಿ ಶಾಲೆಯಲ್ಲಿ ಕಲಿತವರು ಇಂದು ದೊಡ್ಡ ಹುದ್ದೆಯಲ್ಲಿದ್ದಾರೆ. ದೊಡ್ಡ, ದೊಡ್ಡ ಇಂಗ್ಲೀಷ್ ಶಾಲೆಯಲ್ಲಿ ಕಲಿತವರು ಇಂದು ವಿದೇಶದಲ್ಲಿದ್ದಾರೆ. ಆದರೆ, ಅವರ ವೃದ್ಧ ತಂದೆ, ತಾಯಿಗಳು ಅನಾಥಾಶ್ರಮ ದಲ್ಲಿದ್ದಾರೆ ಎಂದು ವಿಷಾದಿಸಿದರು.
ಅತಿಥಿಯಾಗಿದ್ದ ಕನ್ನಡಪ್ರಭ ದಿನ ಪತ್ರಿಕೆ ತಾಲೂಕು ವರದಿಗಾರ ಯಡಗೆರೆ ಮಂಜುನಾಥ್ ಪ್ರಾಸ್ತಾವಿಕವಾಗಿ ಮಾತನಾಡಿ ಟಿ.ವಿ, ಮೊಬೈಲ್ ಬಂದಿದ್ದರೂ ಈಗಲೂ ದಿನ ಪತ್ರಿಗೆಗಳ ಸುದ್ದಿಗಳಲ್ಲಿ ಹೆಚ್ಚು ನಿಖರತೆ ಹಾಗೂ ಸತ್ಯ ವಿರುತ್ತದೆ. ಕನ್ನಡಪ್ರಭ ನೀಡುವ 8 ಪುಟಗಳ ಯುವ ಆವೃತ್ತಿ ಪ್ರತಿ ದಿನ ತಪ್ಪದೆ ಓದಿದರೆ ನಿಮ್ಮ ಭಾಷಾ ಜ್ಞಾನ ಹೆಚ್ಚಾಗಲಿದೆ. ಮುಂದಿನ ಪರೀಕ್ಷೆ ಎದುರಿಸಲು ಸಹಾಯವಾಗಲಿದೆ ಎಂದರು.