ಕನ್ನಡಪ್ರಭ ವಾರ್ತೆ ಮುಂಡರಗಿ
ವಿದ್ಯಾರ್ಥಿಗಳು ತಮ್ಮ ನಿತ್ಯದ ವಿದ್ಯಾಭ್ಯಾಸಕ್ಕೆ ಎಷ್ಟು ಮಹತ್ವ ನೀಡುತ್ತಿರೋ ಕ್ರೀಡೆಗೂ ಅಷ್ಟೇ ಮಹತ್ವ ನೀಡಬೇಕು. ಕ್ರೀಡೆಗಳು ನಮ್ಮನ್ನು ಸದಾ ಕ್ರಿಯಾಶೀಲರನ್ನಾಗಿಸುತ್ತವೆ ಎಂದು ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು.ಸೋಮವಾರ ಪಟ್ಟಣದ ಜಗದ್ಗುರು ತೋಂಟದಾರ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜರುಗಿದ ಕರ್ನಾಟಕ ವಿಶ್ವವಿದ್ಯಾಲಯ 2023-24ನೇ ಸಾಲಿನ ಅಂತರ್ ಮಹಾವಿದ್ಯಾಲಯಗಳ ಏಕವಲಯ ಮಟ್ಟದ ಪುರುಷರ ಖೋಖೋ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದರು.
ಹೆಚ್ಚಿನ ವಿದ್ಯಾರ್ಥಿಗಳನ್ನು ಹೊಂದಿರುವ ಈ ಕಾಲೇಜಿನ ಅಭಿವೃದ್ಧಿಗೆ ಸಂಬಂಧ ಪಟ್ಟಂತೆ ಎಲ್ಲ ರೀತಿಯ ಮೂಲಭೂತ ಸೌಕರ್ಯ ಕಲ್ಪಿಸುವುದಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುವುದು. ಕಾಲೇಜಿಗೆ ತಡೆಗೋಡೆ ನಿರ್ಮಾಣ, ವಿದ್ಯಾರ್ಥಿಗಳಿಗಾಗಿ ಬಸ್ ನಿಲ್ದಾಣ ಸೇರಿದಂತೆ ಕಾಲೇಜಿನ ಅಭಿವೃದ್ಧಿಗಾಗಿ ಶ್ರಮ ವಹಿಸಲಾಗುವುದು ಎಂದರು.ಕಾರ್ಯಕ್ರಮದಲ್ಲಿ ಕಾಲೇಜಿನ ವಿದ್ಯಾರ್ಥಿನಿ ಸ್ವಪ್ನಾ ಕೌಲಿ ಅವರು ವಿಶ್ವವಿದ್ಯಾಲಯ ಮಟ್ಟದಲ್ಲಿ ನಡೆದ ಮಹಿಳಾ ಖೋಖೋದಲ್ಲಿ ಪಾಲ್ಗೊಂಡು ಯೂನಿವರ್ಸಿಟಿ ಬ್ಲೂ ಆಗಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಅವರನ್ನು ಸನ್ಮಾನಿಸಲಾಯಿತು. ಪಂದ್ಯಾವಳಿಯಲ್ಲಿ ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ ಕೆವಿವಿ ವ್ಯಾಪ್ತಿಗೆ ಒಳಪಡುವ ಒಟ್ಟು 10 ಮಹಾವಿದ್ಯಾಲಯದ ಕ್ರೀಡಾ ತಂಡಗಳು ಪಾಲ್ಗೊಂಡಿದ್ದವು.
ಈ ಸಂದರ್ಭದಲ್ಲಿ ಕಾಲೇಜು ಅಭಿವೃದ್ಧಿ ಸಮಿತಿಯ ಕಾರ್ಯಾಧ್ಯಕ್ಷ ಮಂಜುನಾಥಗೌಡ ಪಾಟೀಲ, ಹೇಮಗಿರೀಶ ಹಾವಿನಾಳ, ರವೀಂದ್ರಗೌಡ ಪಾಟೀಲ, ಆನಂದ ನಾಡಗೌಡ್ರ, ಕಾಶೀನಾಥ ಶಿರಬಡಗಿ, ಹೇಮಂತಗೌಡ ಪಾಟೀಲ, ಎಸ್.ಎಸ್. ಗಡ್ಡದ, ಎಸ್.ಡಿ. ಮಕಾಂದಾರ, ರುದ್ರಗೌಡ ಪಾಟೀಲ, ಎಚ್. ವಿರೂಪಾಕ್ಷಗೌಡ್ರ, ಸುರೇಶ ಜೈನ್, ರಾಮಚಂದ್ರ ಕಲಾಲ, ಶ್ರೀನಿವಾಸ ಕಟ್ಟಿಮನಿ, ದೇವಪ್ಪ ರಾಮೇನಹಳ್ಳಿ, ಅರುಣಾ ಪಾಟೀಲ, ಶಿವಯೋಗಿ ಎಲಿ, ಡಾ. ನಾಗರಾಜ ಹಾವಿನಾಳ, ಎಸ್.ಆರ್. ಚಿಗರಿ, ಪ್ರಕಾಶ ಪೂಜಾರ, ಕಾವೇರಿ ಬೋಲಾ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.ಹರ್ಷಿತಾ ಮತ್ತು ಸಂಗಡಿಗರು ಪ್ರಾರ್ಥಸಿದರು. ಡಾ. ಎಂ.ಡಿ. ನಾಯಕ ಸ್ವಾಗತಿಸಿದರು. ಅಕ್ಕಮಹಾದೇವಿ ಹಿರೇಮಠ ನಿರೂಪಿಸಿದರು. ಉಮಾ ಕೊಳ್ಳಿ ವಂದಿಸಿದರು.