ಚನ್ನಪಟ್ಟಣ: ವಿದ್ಯಾರ್ಥಿಗಳು ಏಕಾಗ್ರತೆಗೆ ಮಾರಕವಾಗಿರುವ ಮೊಬೈಲ್ ಬಳಕೆಯಿಂದ ದೂರವಿದ್ದು, ಶಿಕ್ಷಕರ ಮಾರ್ಗದರ್ಶನದಲ್ಲಿ ವಿದ್ಯೆ ಕಲಿತು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಚನ್ನಪಟ್ಟಣ ವಕೀಲರ ಸಂಘದ ಅಧ್ಯಕ್ಷ ಟಿ.ವಿ.ಗಿರೀಶ್ ತಿಳಿಸಿದರು.
ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಶಿಕ್ಷಕರನ್ನು ಗೌರವಿಸಲು ಶಿಕ್ಷಕರ ದಿನಾಚರಣೆ ಹಮ್ಮಿಕೊಂಡಿರುವುದು ಉತ್ತಮ ಸಂಪ್ರದಾಯ. ಸರ್ವಪಲ್ಲಿ ರಾಧಾಕೃಷ್ಣರವರ ಜನ್ಮದಿನದ ಸ್ಮರಣಾರ್ಥ ಆಯೋಜಿಸುವ ಈ ಕಾರ್ಯಕ್ರಮದ ಮಹತ್ವವನ್ನು ವಿದ್ಯಾರ್ಥಿಗಳು ತಿಳಿದುಕೊಳ್ಳಬೇಕು. ಉತ್ತಮ ಪ್ರಜೆಗಳಾಗಿ ಕಲಿತು ಶಾಲೆಗೆ ಹಾಗೂ ಪೋಷಕರಿಗೆ ಉತ್ತಮ ಹೆಸರು ತರಬೇಕು ಎಂದು ಹೇಳಿದರು.
ಶ್ರೀ ಸಿದ್ದರಾಮೇಶ್ವರ ವಿದ್ಯಾಸಂಸ್ಥೆಯ ಅಧ್ಯಕ್ಷ ಬಿ.ಡಿ.ಅರುಣಾಚಲ ಮಾತನಾಡಿ, ಶಿಕ್ಷಕ ವೃತ್ತಿಯಲ್ಲಿ ವಿದ್ಯಾರ್ಥಿಗಳಿಗೆ ಶಿಸ್ತು, ಸಂಸ್ಕಾರ, ಉತ್ತಮ ನಡವಳಿಕೆ ಮತ್ತು ಮಾನವೀಯ ಮೌಲ್ಯಗಳನ್ನು ಕಲಿಸಿ, ವಿದ್ಯಾರ್ಥಿಗಳ ಬದುಕಿಗೆ ದಾರಿದೀಪವಾದ ಶಿಕ್ಷಕರನ್ನು ನೆನೆದು ಗೌರವಿಸುವುದು ನಮ್ಮೆಲ್ಲರ ಕರ್ತವ್ಯ ಎಂದರು.ಆಡಳಿತ ಮಂಡಳಿನಿರ್ದೇಶಕ ಎಸ್.ರೇವಣಸಿದ್ದಪ್ಪ ಮಾತನಾಡಿ, ಹಿಂದೆ ವಿದ್ಯಾರ್ಥಿಗಳು ಶಿಕ್ಷಕರಿಗೆ ಭಯಪಡುತ್ತಿದ್ದರು. ಆದರೆ ಇಂದಿನ ಪರಿಸ್ಥಿತಿ ಬೇರೆಯೇ ಇದೆ. ಶಿಕ್ಷೆಯಿಲ್ಲದ ವಿದ್ಯಾಭ್ಯಾಸ ವಿದ್ಯಾರ್ಥಿಗಳನ್ನು ದಾರಿತಪ್ಪಿಸುತ್ತಿದೆ. ವಿದ್ಯಾರ್ಥಿಗಳು ಸರಿ ಮಾರ್ಗದಲ್ಲಿ ನಡೆದು ತಂದೆ ತಾಯಿ ಮತ್ತು ಗುರುಗಳಿಗೆ ಗೌರವ ತರಬೇಕು ಎಂದು ವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಸಮಾಜ ಸೇವಕ ರಾಂಪುರ ಆರ್.ಪಿ.ಲೋಕೇಶ್, ಸಂಸ್ಥೆಯ ಕಾರ್ಯದರ್ಶಿ ಬಿ.ಎಲ್.ಗೋಕರ್ಣೆಶ್, ಖಜಾಂಚಿ ಬಿ.ಎಲ್.ಶಿವಕುಮಾರ್, ಪರಿಶೋಧಕ ಬಿ.ಎನ್.ವಿಷಕಂಠಯ್ಯ, ನಿರ್ದೇಶಕರಾದ ಟಿ.ಕಾಳೇಗೌಡ, ಬಿ.ಎನ್.ಕೆಂಪರಾಜು , ಬಿ.ಎಸ್.ಅರುಣ್ ಕುಮಾರ್, ಎಚ್.ಎಲ್.ಮೋಹನ್ ಕುಮಾರ್, ಪ್ರಾಂಶುಪಾಲ ಡಿ.ಸಿ.ಸುರೇಶ್, ಉಪ ಪ್ರಾಂಶುಪಾಲರಾದ ಎಸ್.ಜೆ.ಗೌರಮ್ಮ, ಮುಖ್ಯ ಶಿಕ್ಷಕ ಕೆ.ಚಿರಾಗ್ ಇತರರಿದ್ದರು.
ಪೊಟೋ೧೫ಸಿಪಿಟಿ೩: ಚನ್ನಪಟ್ಟಣ ತಾಲೂಕಿನ ಬೇವೂರು ಶ್ರೀ ಸಿದ್ದರಾಮೇಶ್ವರ ವಿದ್ಯಾಸಂಸ್ಥೆಯಲ್ಲಿ ಆಯೋಜಿದ್ದ ಶಿಕ್ಷಕರ ದಿನಾಚರಣೆಯಲ್ಲಿ ವಕೀಲರ ಸಂಘದ ಅಧ್ಯಕ್ಷ ಟಿ.ವಿ.ಗಿರೀಶ್ ಮಾತನಾಡಿದರು.