ಅಕ್ಷರ ಜ್ಯೋತಿ ಯಾತ್ರೆ-೨೦೨೪
ವಿದ್ಯಾರ್ಥಿಗಳಲ್ಲಿ ಅತ್ಮಸ್ಥೈರ್ಯ ಹಾಗೂ ಸದೃಢವಾದ ವ್ಯಕ್ತಿತ್ವವನ್ನು ರೂಪಿಸಿ, ಅವರಲ್ಲಿ ಕಲಿಕೆಯ ಅಸಕ್ತಿಯನ್ನು ಮೂಡಿಸುವುದು ಅಕ್ಷರಯಾತ್ರೆಯ ಮುಖ್ಯ ಉದ್ದೇಶವಾಗಿದೆ ಎಂದು ಬೀದರನ ಕಲ್ಯಾಣ ಕರ್ನಾಟಕ ಪ್ರತಿಷ್ಠಾನದ ಅಧ್ಯಕ್ಷ ಬಸವಕುಮಾರ್ ಪಾಟೀಲ್ ತಿಳಿಸಿದರು.
ನಗರದ ಜೆಎಸ್ಎಸ್ ಮಹಿಳಾ ಕಾಲೇಜಿನ ಸೆಮಿನಾರ್ ಹಾಲ್ನಲ್ಲಿ ಜೆಎಸ್ಎಸ್ ಮಹಾವಿದ್ಯಾ ಪೀಠ, ಜೆಎಸ್ಎಸ್ ಮಹಿಳಾ ಪದವಿ ಪೂರ್ವ ಕಾಲೇಜು ಹಾಗೂ ಬೀದರ್ ಕಲ್ಯಾಣ ಕರ್ನಾಟಕ ಪ್ರತಿಷ್ಠಾನದ ವತಿಯಿಂದ ನಡೆದ ಅಕ್ಷರ ಜ್ಯೋತಿ ಯಾತ್ರೆ -೨೦೨೪ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪಿಯುಸಿ ಹಾಗು ಎಸ್ಎಸ್ಎಲ್ಸಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಅಕ್ಷರ ಯಾತ್ರೆಯ ಮುಖಾಂತರ ವ್ಯಕ್ತಿತ್ವ ವಿಕಸನದ ಬಗ್ಗೆ ಮಾರ್ಗದರ್ಶನ ನೀಡುವ ಜೊತೆಗ ಫಲಿತಾಂಶ ಸುಧಾರಣೆಯ ಮಾರ್ಗೋಪಾಯಗಳನ್ನು ಮನವರಿಕೆ ಮಾಡಿಕೊಟ್ಟು ಸುಸಂಸ್ಕೃತಿ ನಾಗರಿಕರನ್ನಾಗಿ ರೂಪಿಸುವ ಆಶಯ ನಮ್ಮದಾಗಿದೆ ಎಂದರು.ಬದಲಾವಣೆ ಇಲ್ಲದೇ ಬೆಳವಣಿಗೆ ಸಾಧ್ಯವಿಲ್ಲ. ವಿದ್ಯಾರ್ಥಿಗಳಲ್ಲಿರುವ ಕೀಳಿರಿಮೆ ಕಿತ್ತು ಹಾಕಿ ಸಕರಾತ್ಮಕ ಚಿಂತನೆಯನ್ನು ಮೈಗೂಡಿಸಿಕೊಳ್ಳಬೇಕು. ಶಿಕ್ಷಣ ಎಂದರೆ, ಕೇವಲ ಪುಸ್ತಕದ ಕಲಿಕೆ ಮಾತ್ರವಲ್ಲ. ಸಂಸ್ಕೃತಿ, ಮೌಲ್ಯಗಳು, ಸಂಸ್ಕಾರಗಳ ಸಮ್ಮಿಲನ ಹಾಗೂ ಸಂಸ್ಕಾರಯುತ ಶಿಕ್ಷಣವನ್ನು ಪಡೆದುಕೊಳ್ಳುವ ಮೂಲಕ ವಿದ್ಯಾರ್ಥಿಗಳು ಪ್ರಬುದ್ದ ಭಾರತವನ್ನು ನಿರ್ಮಾಣ ಮಾಡಲು ಶ್ರಮಿಸಬೇಕು ಎಂದರು.
ರೋಟರಿ ಸಿಲ್ಕ್ಸಿಟಿ ಸಹಾಯಕ ಗೌರ್ನರ್ ದೊಡ್ಡರಾಯಪೇಟೆ ಗಿರೀಶ್ ಮಾತನಾಡಿ, ವಿದ್ಯಾರ್ಥಿಗಳು ವ್ಯಾಸಂಗ ಜತೆಗೆ ಶಿಸ್ತು ರೂಡಿಸಿಕೊಳ್ಳಬೇಕು. ದೊಡ್ಡ ಚಿಂತನೆ ಮತ್ತು ಆಲೋಚನೆಯೊಂದಿಗೆ ಭವಿಷ್ಯವನ್ನು ರೂಪಿಸಿಕೊಳ್ಳಬೇಕು. ಉನ್ನತ ಸಾಧನೆ ಮಾಡಿರುವವರು ನಮಗೆ ರೋಡ್ಮಾಡಲ್ ಆಗಬೇಕು. ಇಂಥ ಚಿಂತನೆಯನ್ನು ತಮ್ಮೆಲ್ಲರಿಗೂ ಹೇಳುವ ಜತೆಗೆ ಅಕ್ಷರ ಯಾತ್ರೆಯ ಮೂಲಕ ಜಾಗೃತಿ ಮೂಡಿಸಲು ಬೀದರ್ನಿಂದ ಆಗಮಿಸಿರುವ ಬಸವಕುಮಾರ್ ಪಾಟೀಲ್ ತಂಡವರಿಗೆ ಅಭಿನಂದನೆಗಳನ್ನು ಸಲ್ಲಿಸೋಣ ಎಂದರು.