ಕನ್ನಡಪ್ರಭ ವಾರ್ತೆ ಕುಂದಾಪುರ
ಆಧುನಿಕ ಜಗತ್ತಿನಲ್ಲಿ ಯಶಸ್ಸಿನ ಮೆಟ್ಟಿಲೇರಲು ಶಿಕ್ಷಣದ ಜೊತೆಗೆ ನಾಯಕತ್ವ, ಸೃಜನಶೀಲತೆ ಮತ್ತು ನಾವಿನ್ಯತೆ, ರಿಸ್ಕ್ ನಿರ್ವಹಣೆ, ಸೋಲನ್ನು ಸ್ವೀಕರಿಸುವಿಕೆಯ ಕಲೆ ವಿದ್ಯಾರ್ಥಿಗಳು ಕಲಿಯಬೇಕಾಗುತ್ತದೆ ಎಂದು ಉಡುಪಿಯ ನೀವಿಯಸ್ ಸೊಲ್ಯೂಷನ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ನಿರ್ದೇಶಕ ಸುಯೋಗ್ ಶೆಟ್ಟಿ ಹೇಳಿದರು.ಅವರು ಇಲ್ಲಿನ ಮೂಡ್ಲಕಟ್ಟೆ ಪದವಿ ಕಾಲೇಜಿನಲ್ಲಿ ರಾಜ್ಯಮಟ್ಟದ ಅಂತರ್ ಕಾಲೇಜು ಫೆಸ್ಟ್ -ನಾವೊಂನ್ಮೇಶ್ ಉದ್ಘಾಟನಾ ಸಮಾರಂಭದಲ್ಲಿ ಅತಿಥಿಯಾಗಿ ಮಾತನಾಡಿದರು.ಇನ್ನೊರ್ವ ಅತಿಥಿ ಚಿತ್ರನಟಿ ಮತ್ತು ಭರತನಾಟ್ಯ ಕಲಾವಿದೆ ವಿದುಷಿ ಮಾನಸಿ ಸುಧೀರ್ ಮಾತನಾಡಿ, ವಿದ್ಯಾರ್ಥಿಗಳ ಶೈಕ್ಷಣಿಕ ಜೀವನವು ಕೇವಲ ಮಾಹಿತಿ ಸಂಗ್ರಹಿಸುವ ಕಾಲವಾಗಬಾರದು. ಈ ಹಂತದಲ್ಲಿಯೇ ಜೀವನದಲ್ಲಿ ಕಲೆಗೂ ಅವಕಾಶ ನೀಡಬೇಕು, ಕಲೆ ಕೂಡ ಶಿಕ್ಷಣದ ಒಂದು ಭಾಗವಾಗಬೇಕು. ಕಲೆಯು ಉತ್ತಮ ಮನುಷ್ಯತ್ವದಿಂದ ದೊರಕುತ್ತದೆ ಎಂದರು.ಈ ಸಂದರ್ಭ ಸುಯೋಗ್ ಶೆಟ್ಟಿ ಮತ್ತು ಮಾನಸಿ ಸುಧೀರ್ ಅವರನ್ನು ಸನ್ಮಾನಿಸಲಾಯಿತು.ಸಂಸ್ಥೆಯ ಬ್ರಾಂಡ್ ಬಿಲ್ಡಿಂಗ್ ನಿರ್ದೇಶಕ ಡಾ. ರಾಮಕೃಷ್ಣ ಹೆಗಡೆ ಅವರು ಕಾಲೇಜು ಹಾಗೂ ಫೆಸ್ಟ್ ನ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾಲೇಜಿನ ಪ್ರಿನ್ಸಿಪಾಲ್ ಡಾ. ಪ್ರತಿಭಾ ಎಂ. ಪಟೇಲ್ ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಭಾಗವಹಿಸುತ್ತಿರುವ ವಿವಿಧ ಕಾಲೇಜಿನ ಎಲ್ಲಾ ಸ್ಪರ್ಧಿಗಳಿಗೆ ಶುಭ ಹಾರೈಸಿದರು.
ಉಪ ಪ್ರಂಶುಪಾಲ ಜಯಶೀಲ್ ಕುಮಾರ್, ಕಾಮರ್ಸ್ ವಿಭಾಗದ ಮುಖ್ಯಸ್ಥೆ, ಕಾರ್ಯಕ್ರಮದ ಸಂಘಟಕಿ ಅರ್ಚನಾ ಗದ್ದೆ, ಕಾರ್ಯಕ್ರಮದ ವಿದ್ಯಾರ್ಥಿ ಸಂಘಟಕ ಅಂತಿಮ ಬಿಸಿಎ ವಿದ್ಯಾರ್ಥಿ ಸಿಂಚನ್, ನಿತಿನ್ ಮತ್ತು ಅಂತಿಮ ಬಿಕಾಂ ವಿದ್ಯಾರ್ಥಿ ಕುಮಾರಿ, ಹನ ಶೇಖ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.ವಿದ್ಯಾರ್ಥಿ ರಷಿತಾ ಸ್ವಾಗತಿಸಿದರು. ಸಿಂಚನ ಮತ್ತು ಸಂತೃಪ್ತಿ ಕಾರ್ಯಕ್ರಮ ನಿರ್ವಹಿಸಿದರು. ರಾಜ್ಯದ ನಾನಾ ಜಿಲ್ಲೆಗಳ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ದೊಡ್ಡ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.