ಇರಾನ್‌ ಮೇಲಿನ ದಾಳಿ ಖಂಡಿಸಿ ಎಸ್‌ಯುಸಿಐ ಪ್ರತಿಭಟನೆ

KannadaprabhaNewsNetwork |  
Published : Mar 08, 2026, 02:30 AM IST
೦೬ಕೆಪಿಎಲ್‌೦೪ ಇರಾನ್ ಮೇಲೆ ಅಮೇರಿಕಾ ಮತ್ತು ಇಸ್ರೇಲ್ ನಡೆಸುತ್ತಿರುವ ಯುದ್ಧದ ದಾಳಿಯನ್ನು ಖಂಡಿಸಿ ಎಸ್‌ಯಸಿಐ (ಕಮ್ಯುನಿಸ್ಟ್) ಪಕ್ಷದ ನೇತೃತ್ವದಲ್ಲಿ ನಗರದ ಕನಕದಾಸ ವೃತ್ತದಲ್ಲಿ ಶುಕ್ರವಾರ ಪ್ರತಿಭಟನೆ ನಡೆಯಿತು | Kannada Prabha

ಸಾರಾಂಶ

ಜನವಸತಿ ಪ್ರದೇಶ,ಶಾಲೆ, ಆಸ್ಪತ್ರೆ ಮತ್ತು ಸಾಮಾನ್ಯ ನಾಗರಿಕರ ಬದುಕಿನ ಕೇಂದ್ರಗಳ ಮೇಲೆ ಬಾಂಬ್ ದಾಳಿ ನಡೆಸುವುದು ಅತ್ಯಂತ ಅಮಾನವೀಯ

ಕೊಪ್ಪಳ: ಅಮೆರಿಕನ್ ಸಾಮ್ರಾಜ್ಯವಾದಿ ಶಕ್ತಿಗಳ ಯುದ್ಧೋನ್ಮಾದಿ ದಾಳಿಗಳು ಇಂದು ಮಾನವೀಯ ಮೌಲ್ಯಗಳನ್ನೇ ತುಳಿಯುತ್ತಿರುವಂತಿವೆ ಎಂದು ಹಿರಿಯ ಬಂಡಾಯ ಸಾಹಿತಿ ಅಲ್ಲಮಪ್ರಭು ಬೆಟ್ಟದೂರು ಹೇಳಿದರು.

ಇರಾನ್ ಮೇಲೆ ಅಮೆರಿಕಾ ಮತ್ತು ಇಸ್ರೇಲ್ ನಡೆಸುತ್ತಿರುವ ದಾಳಿ ಖಂಡಿಸಿ ಎಸ್‌ಯುಸಿಐ (ಕಮ್ಯುನಿಸ್ಟ್) ಪಕ್ಷದ ನೇತೃತ್ವದಲ್ಲಿ ನಗರದ ಕನಕದಾಸ ವೃತ್ತದಲ್ಲಿ ಶುಕ್ರವಾರ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು.

ಜನವಸತಿ ಪ್ರದೇಶ,ಶಾಲೆ, ಆಸ್ಪತ್ರೆ ಮತ್ತು ಸಾಮಾನ್ಯ ನಾಗರಿಕರ ಬದುಕಿನ ಕೇಂದ್ರಗಳ ಮೇಲೆ ಬಾಂಬ್ ದಾಳಿ ನಡೆಸುವುದು ಅತ್ಯಂತ ಅಮಾನವೀಯ ಮತ್ತು ಅನಾಗರಿಕ ಕೃತ್ಯವಾಗಿದೆ. ಯುದ್ಧಕ್ಕೂ ಅಂತಾರಾಷ್ಟ್ರೀಯ ನಿಯಮಗಳು ಮತ್ತು ಮಾನವೀಯ ಮೌಲ್ಯಗಳು ಇರುವುದಾಗಿ ಹೇಳಲಾಗುತ್ತದೆ. ಆದರೆ, ಅವುಗಳನ್ನು ಸಂಪೂರ್ಣವಾಗಿ ಕಡೆಗಣಿಸಿ ನಿರಪರಾಧಿ ನಾಗರಿಕರ ಮೇಲೆ ದಾಳಿ ನಡೆಸುವುದು ಮಾನವ ಸಮಾಜವೇ ತಲೆತಗ್ಗಿಸುವಂತಹ ಘಟನೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸೋವಿಯತ್ ಒಕ್ಕೂಟದ ಪತನದ ನಂತರ ಅಮೆರಿಕ ಸಾಮ್ರಾಜ್ಯಶಾಹಿ ಧೋರಣೆ ಮುಂದುವರಿಸಿಕೊಂಡು ಹಲವಾರು ರಾಷ್ಟ್ರಗಳ ಸಾರ್ವಭೌಮತ್ವ ಕುಂಠಿತಗೊಳಿಸುವ ಪ್ರಯತ್ನ ಮಾಡುತ್ತಿದೆ. ವಿಶ್ವದ ಶಾಂತಿ ಬಯಸುವ ಭಾರತ ಇಂತಹ ಯುದ್ಧಕೋರ ರಾಷ್ಟ್ರಗಳ ವಿರುದ್ಧ ಸ್ಪಷ್ಟ ನಿಲುವು ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.

ಎಸ್‌ಯುಸಿಐ (ಕಮ್ಯುನಿಸ್ಟ್) ಪಕ್ಷದ ಜಿಲ್ಲಾ ಮುಖಂಡ ಶರಣು ಗಡ್ಡಿ ಮಾತನಾಡಿ, ಸಾಮ್ರಾಜ್ಯಶಾಹಿ ಶಕ್ತಿಗಳು ತಮ್ಮ ಪ್ರಭುತ್ವ ಮತ್ತು ಆರ್ಥಿಕ ಸ್ವಾರ್ಥಕ್ಕಾಗಿ ಯುದ್ಧವನ್ನು ಸಾಧನವಾಗಿ ಬಳಸುತ್ತಿರುವುದು ಜಗತ್ತಿನ ಶಾಂತಿಗೆ ದೊಡ್ಡ ಧಕ್ಕೆಯಾಗಿದೆ. ಯುದ್ಧದ ದಾಳಿಗಳಿಂದ ಸಾವಿರಾರು ಜನರು ಪ್ರಾಣ ಕಳೆದುಕೊಳ್ಳುತ್ತಾರೆ. ಅನೇಕ ಮಕ್ಕಳು ಅನಾಥರಾಗುತ್ತಾರೆ. ಮನೆಗಳು ಧ್ವಂಸವಾಗುತ್ತವೆ ಮತ್ತು ಸಮಾಜವೇ ಭಯ ಹಾಗೂ ಅಶಾಂತಿಯ ವಾತಾವರಣಕ್ಕೆ ತಳ್ಳಲ್ಪಡುತ್ತದೆ. ಆದ್ದರಿಂದ ಜಗತ್ತಿನ ಶಾಂತಿಪ್ರಿಯ ಜನತೆ ಯುದ್ಧೋನ್ಮಾದಿ ರಾಜಕೀಯದ ವಿರುದ್ಧ ಎಚ್ಚೆತ್ತುಕೊಂಡು ಯುದ್ಧ ಬೇಡ–ಶಾಂತಿ ಬೇಕು ಎಂಬ ಘೋಷಣೆಯೊಂದಿಗೆ ಹೋರಾಟಕ್ಕೆ ಮುಂದಾಗಬೇಕು ಎಂದು ಹೇಳಿದರು.

ಎಸ್‌ಯುಸಿಐ ಮುಖಂಡ ಶರಣು ಪಾಟೀಲ್ ಮಾತನಾಡಿ, ಅಮೆರಿಕಾ ಮತ್ತು ಇಸ್ರೇಲ್ ನಂತಹ ಶಕ್ತಿಗಳು ತಮ್ಮ ಅಧಿಪತ್ಯ ಸ್ಥಾಪಿಸಲು ಸಣ್ಣಪುಟ್ಟ ರಾಷ್ಟ್ರಗಳ ಮೇಲೆ ಯುದ್ಧ ನಡೆಸುತ್ತಿವೆ. ಅಮೆರಿಕದ ಆರ್ಥಿಕತೆಯ ದೊಡ್ಡ ಭಾಗ ಯುದ್ಧ ಶಸ್ತ್ರಾಸ್ತ್ರ ತಯಾರಿಕಾ ಕಂಪನಿಗಳ ಮೇಲೆ ಅವಲಂಬಿತವಾಗಿದೆ. ಆದ್ದರಿಂದ ಅವುಗಳಿಗೆ ಲಾಭ ಒದಗಿಸುವ ಉದ್ದೇಶದಿಂದ ವಿವಿಧ ನೆಪಗಳನ್ನು ಹೇಳಿ ಸಣ್ಣ ರಾಷ್ಟ್ರಗಳ ಮೇಲೆ ದಾಳಿ ನಡೆಸಲಾಗುತ್ತಿದೆ. ಇಂತಹ ಯುದ್ಧಕೋರ ನೀತಿಗಳ ವಿರುದ್ಧ ಭಾರತ ಸೇರಿದಂತೆ ಜಗತ್ತಿನ ಶಾಂತಿ ಬಯಸುವ ಜನತೆ ಧ್ವನಿ ಎತ್ತಬೇಕು ಎಂದು ಕರೆ ನೀಡಿದರು.

ಎಸ್‌ಯುಸಿಐ (ಕಮ್ಯುನಿಸ್ಟ್) ಪಕ್ಷದ ಸದಸ್ಯರಾದ ಗಂಗರಾಜ ಅಳ್ಳಳ್ಳಿ, ಶಾರದ ಗಡ್ಡಿ, ನಾಗರಾಜ್ ಹುಲಿಗಿ, ಸುರೇಶ್ ದಳಪತಿ, ಯಮನೂರ ಹರಿಜನ, ಕುಮಾರ್, ಮಂಜುನಾಥ ಬೀಸರಳ್ಳಿ, ಶಬ್ಬೀರ್, ಆನಂದ್ ಸೇರಿದಂತೆ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜನಪದ ಸಾಹಿತ್ಯ ಜೀವನ ಮೌಲ್ಯ, ಶ್ರಮ ಸಂಸ್ಕೃತಿಯ ಪ್ರತೀಕ: ರಾಮು ಮೂಲಗಿ
ಸಮಾಜದ ಮೌಲ್ಯ, ಸಂಸ್ಕೃತಿಯನ್ನು ಮುಂದಿನ ತಲೆಮಾರಿಗೆ ಪಸರಿಸುವ ಶಕ್ತಿಯೇ ಮಹಿಳೆ: ಡಾ.ಬಿ.ಜಿ.ಕಲಾವತಿ