ಹಾವೇರಿ: ಜಿಲ್ಲೆಯಲ್ಲಿ ಮೂರು ಸಕ್ಕರೆ ಕಾರ್ಖಾನೆಗಳಿದ್ದು, ಪ್ರತಿವರ್ಷ ಕಬ್ಬು ನುರಿಸುತ್ತ ಬಂದಿದ್ದು, ಇದೀಗ ಕಳೆದ 10-12 ವರ್ಷಗಳಿಂದ ಕಬ್ಬು ಕಾರ್ಖಾನೆಯವರು ಕಬ್ಬು ಬೆಳೆಗಾರರಿಗೆ ಎಫ್ಆರ್ಪಿ ದರದಲ್ಲಿ ಮೋಸ ಮಾಡುತ್ತಿದ್ದಾರೆ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ಭುವನೇಶ್ವರ ಶಿಡ್ಲಾಪುರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರತಿ ಸಕ್ಕರೆ ಕಾರ್ಖಾನೆಯಿಂದಲೇ ತೂಕದ ಯಂತ್ರ ಹಾಗೂ ರಿಕವರಿ ಲ್ಯಾಬ್ನ್ನು ತೆರೆಯಲು ಜಿಲ್ಲಾಡಳಿತ ಮುಂದೆ ಬಂದಿಲ್ಲ, ಇದು ರೈತರಿಗೆ ನೋವುಂಟು ಮಾಡಿದೆ. ಈ ಹಿಂದೆ ಸಂಗೂರ ಸಕ್ಕರೆ ಕಾರ್ಖಾನೆ 1983ರಿಂದ 2013ರ ವರೆಗೂ ಆಡಳಿತ ಮಂಡಳಿಯವರು ನಡೆಸುತ್ತಿರುವಾಗ 10.25ಕ್ಕಿಂತ ಅಧಿಕ ಅಂದರೆ 11.30ರ ವರೆಗೆ ಸಕ್ಕರೆ ರಿಕವರಿ ಬಂದಿದೆ. ಈಗ ಕಾರ್ಖಾನೆಯವರೇ ಸುಧಾರಿತ ತಳಿಯ ಕಬ್ಬಿನ ಬೀಜ ಕೊಟ್ಟಿದ್ದರೂ, ಸಕ್ಕರೆ ಅಂಶ ಹೆಚ್ಚಿರುವ ಕಬ್ಬನ್ನು ರೈತರು ಬೆಳೆದರೂ ರಿಕವರಿ ಕಡಿಮೆ ತೋರಿಸುತ್ತಿರುವುದು ಅನ್ಯಾಯ. ಕಾರಣ ಸಕ್ಕರೆ ಕಾರ್ಖಾನೆಯವರೇ ಕಬ್ಬು ಕಟಾವು ಸಾಗಾಣಿಕೆ ವೆಚ್ಚ ಭರಿಸಿಕೊಂಡು ರೈತರಿಗೆ ಟನ್ಗೆ ₹3550 ನೀಡುವಂತಾಗಲಿ ಎಂದು ಮನವಿ ಮಾಡಿದ್ದಾರೆ.
ನೆರೆಯ ಧಾರವಾಡ ಜಿಲ್ಲೆ ಕಲಘಟಗಿ ತಾಲೂಕಿನಲ್ಲಿ ಬೆಳೆದ ಕಬ್ಬನ್ನು ಜಿಲ್ಲೆಯ ಸಕ್ಕರೆ ಕಾರ್ಖಾನೆಗಳು ತಂದು ಉತ್ತಮ ದರ ನೀಡುತ್ತಿವೆ. ಆದರೆ ಜಿಲ್ಲೆಯಲ್ಲಿ ಬೆಳೆದಂತಹ ಕಬ್ಬಿಗೆ ಅದೇ ದರ ನೀಡಲು ಹಿಂದೇಟು ಹಾಕುತ್ತಿರುವುದು ಅನ್ಯಾಯದ ಪರಮಾವಧಿ. ಜಿಲ್ಲಾ ಉಸ್ತುವಾರಿ ಸಚಿವರೂ ಹಾಗೂ ಸಕ್ಕರೆ ಮಂತ್ರಿಗಳು ಹಾಗೂ ಜಿಲ್ಲಾಧಿಕಾರಿ ರೈತರ ಹಾಗೂ ಕಾರ್ಖಾನೆಯ ಮಾಲೀಕರ ಸಭೆಯನ್ನು ಕರೆದು ಕಬ್ಬು ಬೆಳೆದ ರೈತರಿಗೆ ಆಗುತ್ತಿರುವ ಅನ್ಯಾಯ ಸರಿಪಡಿಸಬೇಕು ಎಂದು ಭುವನೇಶ್ವರ ಶಿಡ್ಲಾಪುರ ಒತ್ತಾಯಿಸಿದ್ದಾರೆ.