ಸಾಯುವ ಮುನ್ನ ತಮ್ಮ ಕುಟುಂಬದ ಭವಿಷ್ಯವನ್ನು ನೋಡಬೇಕು. ಮನೆ ಜವಾಬ್ದಾರಿ ಹೊತ್ತವರು ಸಾಲದಿಂದ ಆತ್ಮಹತ್ಯೆ ಮಾಡಿಕೊಂಡರೆ ನಿಮ್ಮ ಕುಟುಂಬದ ಮುಂದಿನ ಪರಿಸ್ಥಿತಿ ಏನು?. ಸಾವು ಒಂದೇ ಪರಿಹಾರವಲ್ಲ. ನಿಮ್ಮ ಸಾವಿನಿಂದ ಮುಂದೆ ಇಡೀ ಕುಟುಂಬ ಬೀದಿ ಪಾಲಗುತ್ತದೆ ಎಂಬುದನ್ನು ಅರಿಯಬೇಕು.
ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ
ಸಾಲಕ್ಕೆ ಹೆದರಿ ಆತ್ಮಹತ್ಯೆ ಮಾಡಿಕೊಳ್ಳುವುದು ಸಮಸ್ಯೆಗಳು ಪರಿಹಾರವಾಗುವುದಿಲ್ಲ. ಕುಟುಂಬದೊಂದಿಗೆ ಇದ್ದು ಸಮಸ್ಯೆಗಳನ್ನು ಧೈರ್ಯದಿಂದ ಎದುರಿಸಬೇಕು ಎಂದು ಶಾಸಕ ಕೆ.ಎಂ.ಉದಯ್ ಸಲಹೆ ನೀಡಿದರು.ಸಮೀಪದ ಕಾರ್ಕಹಳ್ಳಿಯಲ್ಲಿ ಇತ್ತೀಚೆಗೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ರೈತ ರಾಜೇಶ್ ಕುಟುಂಬಕ್ಕೆ ತಮ್ಮ ಚಾರಿಟಬಲ್ ಟ್ರಸ್ಟ್ನಿಂದ ಧನ ಸಹಾಯ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ಮಾತನಾಡಿದರು.
ಈಗಿನ ಯುವಕರು ಸಾಲದ ಸುಳಿಗೆ ಸಿಕ್ಕಿ ವಿಷ ಸೇವನೆ ಮಾಡುವುದು, ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದನ್ನು ನೋಡಿದ್ದೇನೆ. ಸಾವು ಸಾಲ ಮತ್ತು ಸಮಸ್ಯೆಗಳಿಗೆ ಪರಿಹಾರವಾಗುವುದಿಲ್ಲ ಎಂದರು.
ಸಾಯುವ ಮುನ್ನ ತಮ್ಮ ಕುಟುಂಬದ ಭವಿಷ್ಯವನ್ನು ನೋಡಬೇಕು. ಮನೆ ಜವಾಬ್ದಾರಿ ಹೊತ್ತವರು ಸಾಲದಿಂದ ಆತ್ಮಹತ್ಯೆ ಮಾಡಿಕೊಂಡರೆ ನಿಮ್ಮ ಕುಟುಂಬದ ಮುಂದಿನ ಪರಿಸ್ಥಿತಿ ಏನು?. ಸಾವು ಒಂದೇ ಪರಿಹಾರವಲ್ಲ. ನಿಮ್ಮ ಸಾವಿನಿಂದ ಮುಂದೆ ಇಡೀ ಕುಟುಂಬ ಬೀದಿ ಪಾಲಗುತ್ತದೆ ಎಂಬುದನ್ನು ಅರಿಯಬೇಕು ಎಂದರು.
ಮೃತ ರೈತ ರಾಜೇಶ್ ಪತ್ನಿಯೊಂದಿಗೆ ಮಾತನಾಡಿದ ಶಾಸಕರು, ಕುಟುಂಬದ ಪರಿಸ್ಥಿತಿ ಹಾಗೂ ರೈತ ಆತ್ಮಹತ್ಯೆಗೆ ಕಾರಣಗಳ ಕುರಿತು ಮಾಹಿತಿ ಪಡೆದರು. ಸಂಕಷ್ಟದಲ್ಲಿ ಕುಟುಂಬದ ಜೊತೆ ನಾನು ಹಾಗೂ ಸರ್ಕಾರ ನಿಲ್ಲಲಿದೆ ಎಂದು ಧೈರ್ಯ ತುಂಬಿದರು.
ಕುಟುಂಬಕ್ಕೆ ಸರ್ಕಾರದಿಂದ ದೊರೆಯಬೇಕಾದ ಪರಿಹಾರವನ್ನು ಶೀಘ್ರ ತಲುಪಿಸಲಾಗುವುದು. ರೈತರು ಯಾವುದೇ ಕಾರಣಕ್ಕೂ ಆತ್ಮಹತ್ಯೆಯಂತಹ ದೃಢ ನಿರ್ಧಾರ ಕೈಗೊಳ್ಳದೇ ಸಂಕಷ್ಟದಲ್ಲಿದ್ದಾಗ ರ್ಕಾರದ ವಿವಿಧ ಇಲಾಖೆಗಳು ಹಾಗೂ ಅಧಿಕಾರಿಗಳನ್ನು ಸಂಪರ್ಕಿಸಿ ಪರಿಹಾರ ಕಂಡುಕೊಳ್ಳಬೇಕು. ನಿಮ್ಮ ಜೊತೆ ಸದಾ ನಾನಿರುತ್ತೇನೆ ಎಂದರು.
ಈ ವೇಳೆ ಸಚಿನ್, ರಾಜೇಶ್, ಪ್ರದೀಪ, ಮಾದೇಗೌಡ, ನಂದೀಶ, ಮಿಣಕೇಗೌಡ ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.