ಸ್ವಾಭಿಮಾನಿ ಪಡೆಯ ಬೆಂಬಲಿಗರಿಂದ ಸುದ್ದಿಗೋಷ್ಠಿ । ಪಕ್ಷವೋ, ಪಕ್ಷೇತರವೋ ನಂತರದಲ್ಲಿ ತೀರ್ಮಾನ । ಸ್ವಾಭಿಮಾನಿ ಕಾರ್ಯಕರ್ತರು ಗೊಂದಲಕ್ಕೆ ಒಳಗಾಗಬೇಡಿ
ಕನ್ನಡಪ್ರಭ ವಾರ್ತೆ ಮಂಡ್ಯಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಸುಮಲತಾ ಅಂಬರೀಶ್ ಸ್ಪರ್ಧಿಸುವುದು ಖಚಿತ. ರಾಜಕೀಯ ಪಕ್ಷದಿಂದ ಸ್ಪರ್ಧಿಸುತ್ತಾರೋ ಅಥವಾ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಾರೋ ಎನ್ನುವುದನ್ನು ಸುಮಲತಾ ಅವರೇ ನಿರ್ಧರಿಸಲಿದ್ದಾರೆ ಎಂದು ಸ್ವಾಭಿಮಾನಿ ಪಡೆ ಬೆಂಬಲಿಗ ಎಚ್.ಪಿ.ಶಶಿಕುಮಾರ್ ಹೇಳಿದರು.
ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದು, ಮಂಡ್ಯ ಕ್ಷೇತ್ರ ಜೆಡಿಎಸ್ ಪಾಲಾಗುವುದರಿಂದ ಸುಮಲತಾ ಸ್ಪರ್ಧೆಗೆ ಅವಕಾಶವಿಲ್ಲವೆಂಬ ವದಂತಿಗಳು ಹರಡಿವೆ. ಇದಕ್ಕೆ ಸ್ವಾಭಿಮಾನಿ ಪಡೆಯ ಕಾರ್ಯಕರ್ತರು ಕಿವಿಗೊಡಬಾರದು. ಮೈತ್ರಿ ನಡುವೆಯೂ ಸಂಸದೆ ಸುಮಲತಾ ಅಂಬರೀಶ್ ಸ್ಪರ್ಧೆ ಇದ್ದೇ ಇರುತ್ತದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಭರವಸೆ ನೀಡಿದರು.ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸುಮಲತಾ ಅಂಬರೀಶ್ ಅವರು ಬಿಜೆಪಿ ಪಕ್ಷಕ್ಕೆ ಅಧಿಕೃತ ಬೆಂಬಲ ಘೋಷಿಸಿ ಪಕ್ಷದ ಅಭ್ಯರ್ಥಿಗಳ ಪರವಾಗಿ ಪ್ರಚಾರ ನಡೆಸಿದ್ದರು. ಹಾಗಾಗಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸುಮಲತಾ ಅಂಬರೀಶ್ ಅವರಿಗೆ ಟಿಕೆಟ್ ಕೊಡುವುದು ಸೂಕ್ತ. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿಯಾಗಿ ಜೆಡಿಎಸ್ ಅಭ್ಯರ್ಥಿಗೆ ಟಿಕೆಟ್ ನೀಡಲಾಗಿತ್ತು. ಅದರಂತೆ ಈ ಬಾರಿ ಸುಮಲತಾರಿಗೆ ಬಿಜೆಪಿ ಟಿಕೆಟ್ ನೀಡಬೇಕು ಎಂದು ಆಗ್ರಹಪಡಿಸಿದರು.
ಸಂಸದೆ ಸುಮಲತಾ ಅವರು ಬಿಜೆಪಿಗೆ ಬೆಂಬಲ ಘೋಷಿಸಿದ್ದಾರಷ್ಟೇ. ಅವರಿನ್ನೂ ಪಕ್ಷದ ಸಹ ಸದಸ್ಯತ್ವವನ್ನಾಗಲೀ, ಸದಸ್ಯತ್ವವನ್ನಾಗಲೀ ಪಡೆದಿಲ್ಲ. ಅವರು ಯಾವುದೇ ತೀರ್ಮಾನ ಕೈಗೊಳ್ಳುವುದಕ್ಕೆ ಈಗಲೂ ಸ್ವತಂತ್ರರಿದ್ದಾರೆ. ಹಳೆಯ ಮೈಸೂರು ಭಾಗದಲ್ಲಿ ಬಿಜೆಪಿ ಬಲಿಷ್ಠವಾಗಿ ಬೆಳೆಯಬೇಕಾದರೆ ಬಿಜೆಪಿ ಸುಮಲತಾ ಅವರಿಗೆ ಟಿಕೆಟ್ ಕೊಡಬೇಕು. ಪ್ರಸ್ತುತ ಸಂದರ್ಭದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಯಾಗಿದೆಯೇ ವಿನಃ ಇನ್ನೂ ಕ್ಷೇತ್ರ ಹಂಚಿಕೆಯಾಗಿಲ್ಲ. ಬಿಜೆಪಿ ವರಿಷ್ಠರು ಮಂಡ್ಯ ಕ್ಷೇತ್ರವನ್ನು ತಮ್ಮಲ್ಲೇ ಉಳಿಸಿಕೊಂಡು ಸುಮಲತಾ ಅವರನ್ನು ಅಖಾಡಕ್ಕಿಳಿಸಬಹುದೆಂಬ ವಿಶ್ವಾಸದಲ್ಲಿದ್ದೇವೆ. ಇದಕ್ಕೆ ವಿರುದ್ಧ ತೀರ್ಮಾನವಾದರೆ ನಾವೂ ನಮ್ಮದೇ ನಡೆಯನ್ನು ಅನುಸರಿಸುತ್ತೇವೆ ಎಂದು ಪಕ್ಷೇತರ ಅಭ್ಯರ್ಥಿಯಾಗಿ ಸುಮಲತಾ ಕಣಕ್ಕಿಳಿಯಲಿದ್ದಾರೆಂಬ ಸುಳಿವು ನೀಡಿದರು.ಸುಮಲತಾ ಕಾಂಗ್ರೆಸ್ ಪಕ್ಷದಿಂದ ಆಹ್ವಾನ ಬಂದಿದೆಯೇ ಎಂಬ ಪ್ರಶ್ನೆಗೆ, ಆಹ್ವಾನ ಬಂದಿದ್ದರೂ ಬಂದಿರಬಹುದು. ನಮಗೆ ಗೊತ್ತಿಲ್ಲ. ಮುಂದಿನ ದಿನಗಳಲ್ಲಿ ರಾಜಕೀಯ ಸ್ಥಿತ್ಯಂತರಗಳಾಗಬಹುದು. ಅದನ್ನು ಈಗಲೇ ಹೇಳಲಾಗುವುದಿಲ್ಲ. ಒಟ್ಟಿನಲ್ಲಿ ಬಿಜೆಪಿ-ಜೆಡಿಎಸ್ಗೆ ಕ್ಷೇತ್ರ ಬಿಟ್ಟುಕೊಟ್ಟಲ್ಲಿ ಸುಮಲತಾ ಸ್ಪರ್ಧೆ ಇದ್ದೇ ಇರುತ್ತದೆ ಎಂದು ಖಚಿತಪಡಿಸಿದರು.
ಸುಮಲತಾ ಆಪ್ತ ಇಂಡುವಾಳು ಸಚ್ಚಿದಾನಂದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿಯಾಗಿರುವುದು ಅವರ ವೈಯಕ್ತಿಕ ವಿಚಾರ. ಅವರು ಶ್ರೀರಂಗಪಟ್ಟಣ ಕ್ಷೇತ್ರದ ಬಿಜೆಪಿ ಮುಖಂಡರಾಗಿದ್ದು, ಮೈತ್ರಿ ಹಿನ್ನೆಲೆ ಭೇಟಿಯಾಗಿದ್ದಾರೆ. ಅವರು ಸದಾ ನಮ್ಮೊಂದಿಗಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.ಸ್ವಾಭಿಮಾನಿ ಪಡೆಯಲ್ಲಿ ಯಾವ ಒಡಕೂ ಇಲ್ಲ. ಎಲ್ಲರೂ ಒಗ್ಗಟ್ಟಾಗಿದ್ದೇವೆ. ನಾವು ಹೇಳುತ್ತಿರುವ ಮಾತುಗಳೆಲ್ಲವೂ ಸುಮಲತಾ ಅವರ ಮಾತುಗಳೇ ಆಗಿವೆ. ಸ್ವಾಭಿಮಾನಿ ಪಡೆಯ ಕಾರ್ಯಕರ್ತರೆಲ್ಲರೂ ಸುಮಲತಾ ಅವರೊಂದಿಗೇ ಹೆಜ್ಜೆ ಹಾಕುತ್ತೇವೆ ಎಂದು ನುಡಿದರು.
ಸಂಸದೆ ಸುಮಲತಾ ಅವರು ಮಂಡ್ಯದಲ್ಲಿ ಮನೆ ಮಾಡಿ ವಾಸ್ತವ್ಯವಿಲ್ಲದಿದ್ದರೂ ಜನರ ಕಷ್ಟ-ಸುಖಗಳಿಗೆ ನಿರಂತರವಾಗಿ ಸ್ಪಂದಿಸುತ್ತಿದ್ದಾರೆ. ಅವರು ಪ್ರವಾಸದ ಸಮಯದಲ್ಲೂ ಜನರಿಂದ ಅಹವಾಲುಗಳನ್ನು ಸ್ವೀಕರಿಸಿ ಪರಿಹಾರ ಸೂಚಿಸಿದ್ದಾರೆ. ಸಂಸದರ ಅನುದಾನವನ್ನು ಸಮರ್ಥವಾಗಿ ಬಳಸಿಕೊಂಡಿರುವ ಸಂಸದರಲ್ಲಿ ಮುಂಚೂಣಿಯಲ್ಲಿದ್ದು, ದಿಶಾ ಸಭೆಗಳನ್ನು ನಡೆಸುವುದರಲ್ಲಿ ನಂ.೧ ಸ್ಥಾನಕ್ಕೇರಿದ್ದಾರೆ. ಜಿಲ್ಲೆಗೆ ಇನ್ನಷ್ಟು ಅಭಿವೃದ್ಧಿ ಮಾಡುವ ಆಸೆಯನ್ನು ಹೊತ್ತಿರುವ ಅವರಿಗೆ ಜಿಲ್ಲೆಯ ಜನರು ಮತ್ತೊಮ್ಮೆ ಸಂಸದರಾಗಲು ಅವಕಾಶ ಮಾಡಿಕೊಡಬೇಕು. ಅಂಬರೀಶ್ ಅಭಿಮಾನಿಗಳು, ಸ್ವಾಭಿಮಾನಿ ಪಡೆ ಕಾರ್ಯಕರ್ತರು ಸುಮಲತಾ ಅವರಿಗೆ ಶಕ್ತಿ ತುಂಬುವಂತೆ ಮನವಿ ಮಾಡಿದರು.ಗೋಷ್ಠಿಯಲ್ಲಿ ಎಚ್.ಬಿ.ಅರವಿಂದಕುಮಾರ್, ಮುಟ್ಟನಹಳ್ಳಿ ಮಹೇಂದ್ರ, ಕೋಣಸಾಲೆ ಜಯರಾಂ, ಹಾಗಲಹಳ್ಳಿ ಬಸವರಾಜು ಇದ್ದರು.
----