ಹೆಚ್ಚುತ್ತಿದೆ ಬಿಸಿಲಿನ ಝಳ, ಹೊನ್ನಾವರದಲ್ಲಿ ಅನಾರೋಗ್ಯ ಭೀತಿ

KannadaprabhaNewsNetwork |  
Published : Mar 15, 2026, 02:30 AM IST
ಬಿಸಿಲ ಧಗೆ | Kannada Prabha

ಸಾರಾಂಶ

ಮಾರ್ಚ್ ತಿಂಗಳ ಆರಂಭದಲ್ಲಿಯೇ ಬಿಸಿಲಿನ ಝಳ ಹೆಚ್ಚುತ್ತಿದೆ. ಒಂದೆಡೆ ಜಾಗತಿಕ ತಾಪಮಾನ ಏರಿಕೆ, ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧ ಜನರ ತಲೆಬಿಸಿ ಹೆಚ್ಚಿಸಿದೆ. ಇದೀಗ ಬಿಸಿಲಿನಿಂದಾಗಿ ಜನಸಾಮಾನ್ಯರಿಗೆ ಆರೋಗ್ಯದ ಕುರಿತಾಗಿಯೂ ಭಯ ಪ್ರಾರಂಭವಾಗಿದೆ.

ಪ್ರಸಾದ್ ನಗರೆ

ಹೊನ್ನಾವರ: ಮಾರ್ಚ್ ತಿಂಗಳ ಆರಂಭದಲ್ಲಿಯೇ ಬಿಸಿಲಿನ ಝಳ ಹೆಚ್ಚುತ್ತಿದೆ. ಒಂದೆಡೆ ಜಾಗತಿಕ ತಾಪಮಾನ ಏರಿಕೆ, ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧ ಜನರ ತಲೆಬಿಸಿ ಹೆಚ್ಚಿಸಿದೆ. ಇದೀಗ ಬಿಸಿಲಿನಿಂದಾಗಿ ಜನಸಾಮಾನ್ಯರಿಗೆ ಆರೋಗ್ಯದ ಕುರಿತಾಗಿಯೂ ಭಯ ಪ್ರಾರಂಭವಾಗಿದೆ.

ಹೇಳಿಕೇಳಿ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ಕರಾವಳಿ ಪ್ರದೇಶ. ಇಲ್ಲಿ ಬೇಸಿಗೆಯಲ್ಲಿ ಸೂರ್ಯನ ತಾಪ ಹೆಚ್ಚಳ ಮತ್ತು ಸಮುದ್ರ ಸಮೀಪದಲ್ಲಿರುವುದರಿಂದ ಉಷ್ಣತೆಯ ಪರಿಣಾಮ ಅಧಿಕವಾಗಿರುತ್ತದೆ. ಈಗಲೇ ಉಷ್ಣಾಂಶ ಏರಿಕೆ ಆಗುತ್ತಿದ್ದು, ಜನರ ಬಾಯಲ್ಲಿ ಸೆಕೆ ಎನ್ನುವ ಶಬ್ದ ಮಾಮೂಲಿಯಾಗಿದೆ. ಈಗ ದಿನದ ಗರಿಷ್ಠ ಉಷ್ಣಾಂಶ 32°–35° ಸೆಲ್ಸಿಯಸ್ ನಡುವೆಯೇ ದಾಖಲಾಗುತ್ತಿದೆ. ಮುಂದಿನ ದಿನಗಳಲ್ಲಿ ಉಷ್ಣಾಂಶ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ.

ಅತ್ಯಧಿಕ ಉಷ್ಣಾಂಶ: ಇನ್ನು ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ಗರಿಷ್ಠ ತಾಪಮಾನ ದಾಖಲಾಗಲಿದೆ. ಪರಿಸರದ ವಿನಾಶ, ಅಗತ್ಯವಿಲ್ಲದ ಯೋಜನೆಗಳ ಜಾರಿ ಪರಿಣಾಮ ಬೇಸಿಗೆಯಲ್ಲಿ ತಾಪಮಾನ ಹೆಚ್ಚಳಕ್ಕೆ ಕಾರಣವಾಗಲಿದೆ ಎಂದು ಪರಿಸರ ತಜ್ಞರು ಹೇಳುತ್ತಾರೆ.

ತಾಲೂಕಿನ ಕೆಲವು ಭಾಗದಲ್ಲಿ ಕುಡಿಯುವ ನೀರಿಗೆ ಸಮಸ್ಯೆಗಳು ಉಲ್ಬಣವಾಗಲಿದೆ. ಮಂಕಿಯ ಕಡೆಯಲ್ಲಿ, ಗ್ರಾಮೀಣ ಭಾಗದ ಮುಗ್ವಾ ಮೊದಲಾದ ಕಡೆಯಲ್ಲಿ ನೀರಿನ‌ ಅಭಾವ ಕಾಣಿಸಿಕೊಳ್ಳುತ್ತದೆ. ತೋಟಗಳಿಗೆ ನೀರನ್ನು ಹಾಕಲು ಮೇ ತಿಂಗಳಲ್ಲಿ ತೀರಾ ಕಷ್ಟ ಅನ್ನುವ ಪರಿಸ್ಥಿತಿ ತಲೆದೋರಿದ ನಿದರ್ಶನಗಳು ಸಾಕಷ್ಟಿದೆ. ಅಲ್ಲದೆ ಮನೆ ಮನೆಗೆ ನಳವನ್ನು ಸರ್ಕಾರ ಹಾಕಿದ್ದರೂ ಅದರಲ್ಲಿ ನೀರು ಬರುವುದಕ್ಕಿಂತ ಗಾಳಿ ಬರುವುದೇ‌ ಹೆಚ್ಚಾಗಿರುತ್ತಿದೆ. ಅಲ್ಲದೆ ಬೇಸಿಗೆಯಲ್ಲಿ ಲೋಡ್ ಶೆಡ್ಡಿಂಗ್ ಸಹ ಆಗುವ ಸಾಧ್ಯತೆಗಳು ಹೆಚ್ಚಿರುವುದರಿಂದ ಆರಾಮವಾಗಿ ಫ್ಯಾನ್ ಹಾಕಿಕೊಂಡು ಕೂರುತ್ತೇವೆ ಅನ್ನಲು ಆಗದ ಸ್ಥಿತಿಯೂ ಇರುತ್ತದೆ.

ಇನ್ನು ಬಿಸಿಲಿನ ಝಳ ಹೆಚ್ಚಿದಂತೆ ಜನರು ತಂಪು‌ಪಾನೀಯದ ಮೊರೆ ಹೋಗುವುದು ಸಾಮಾನ್ಯ. ಪಟ್ಟಣ ಮತ್ತು ಗ್ರಾಮೀಣ ಭಾಗದಲ್ಲಿರುವ ಜ್ಯೂಸ್ ಸೆಂಟರ್, ಕಬ್ಬಿನ ಹಾಲು ಅಂಗಡಿಗಳಲ್ಲಿ ವ್ಯಾಪಾರ ಜೋರಾಗಿ ಇರುತ್ತದೆ. ರಸ್ತೆಯ ಪಕ್ಕದಲ್ಲಿ ಕಲ್ಲಂಗಡಿ ಹಣ್ಣಿನ ವ್ಯಾಪಾರವೂ ತಾಲೂಕಿನಲ್ಲಿ ಜೋರಾಗಿರುತ್ತದೆ.

ಜನರಿಗೆ ಸಲಹೆಗಳು: ಮಕ್ಕಳಿಗೆ ಇನ್ನೇನು ರಜಾ ಬರುವುದರಿಂದ ಅವರು ಬಿಸಿಲಿನಲ್ಲಿ ಹೆಚ್ಚು‌ ಸಮಯ ಇರದಂತೆ‌ ನೋಡಿಕೊಳ್ಳುವುದು.

ಧೂಳು ಹೆಚ್ಚಾಗುವುದರಿಂದ ಆದಷ್ಟು ಮಾಸ್ಕ್‌ ಧರಿಸುವುದು. ಮಧ್ಯಾಹ್ನ 11ರಿಂದ 3 ಗಂಟೆ ನಡುವೆ ಹೊರಗೆ ಹೋಗುವುದನ್ನು ಕಡಿಮೆ ಮಾಡುವುದು. ಹೆಚ್ಚು ನೀರು ಕುಡಿಯುವುದು. ಟೋಪಿ ಅಥವಾ ಛತ್ರಿ ಬಳಸುವುದು. ಬಿಸಿಲಿನಲ್ಲಿ ಹೆಚ್ಚು ಸಮಯ ಕೆಲಸ ಮಾಡದಿರುವುದು.

ನಮ್ಮ ತೋಟಗಳಿಗೆ ಪ್ರತಿ ವರ್ಷವೂ ಮೇ ತಿಂಗಳಲ್ಲಿ ನೀರಿರುವುದಿಲ್ಲ. ಆದರೆ ಈ ವರ್ಷ ಸೆಕೆ ಈಗಲೇ ಹೆಚ್ಚು ಆಗುತ್ತಿರುವುದರಿಂದ ಏಪ್ರಿಲ್ ಅಂತ್ಯದ ಒಳಗೆ ನೀರಿನ‌ ಸಮಸ್ಯೆ ಜೋರಾಗುವಂತೆ ಅನಿಸುತ್ತದೆ ಎಂದು ರೈತ ಗಣೇಶ ಹೇಳುತ್ತಾರೆ.

ತಾಲೂಕಿನಲ್ಲಿ ಬಿಸಿಲು ಇನ್ನು ಹೆಚ್ಚಳವಾಗಲಿದೆ. ಜನರು ಬಿಸಿಲಿನ ಏಟನ್ನು ತಿನ್ನಲು ಸಿದ್ಧವಾಗಲೇಬೇಕಿದೆ. ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ 38 ಡಿಗ್ರಿ ಸೆಲ್ಸಿಯಸ್ ವರೆಗೂ ಹೋಗುವಂತೆ ತೋರುತ್ತಿದೆ. ಅಲ್ಲದೆ ಈಗಾಗಲೇ 35 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗುತ್ತಿದೆ. ಮೇ 15ರ ಆನಂತರ ಮಳೆ ಬರುವ ಸಾಧ್ಯತೆಗಳಿವೆ. ಅಕಸ್ಮಾತ್ ವಾಯುಭಾರ ಕುಸಿತ ಏನಾದರೂ ಆದಲ್ಲಿ ಮಳೆ ಬರಬಹುದು ಎಂದು ತಾಲೂಕು ಹವಾಮಾನಾಧಿಕಾರಿ ರಮೇಶ್ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಇಂದು ಕಾರವಾರದಲ್ಲಿ ‘ಯುನಿಟಿ ರನ್ ಆ್ಯಂಡ್ ರೈಡ್’
ಧಾರ್ಮಿಕ ಆಚರಣೆಗಳಲ್ಲಿ ಆರೋಗ್ಯ, ಏಕತೆ ಸಂದೇಶ ಅಡಗಿದೆ: ಸಂಗನಗೌಡ ಜಿ. ಪಾಟೀಲ್