700 ಯೋಗ ತರಬೇತಿ ನೀಡಿರುವ ಸುಂದರ ಕುಲಕರ್ಣಿ

KannadaprabhaNewsNetwork | Published : Jun 21, 2025 12:49 AM

ಸುಂದರ ಕುಲಕರ್ಣಿ ಅವರು ಶಾಲಾ- ಕಾಲೇಜುಗಳಿಗೆ ತೆರಳಿ ಮಕ್ಕಳಿಗೂ ಯೋಗ ತರಬೇತಿ ನೀಡಿದ್ದಾರೆ. ಯಾವುದೇ ಫಲಾಪೇಕ್ಷೆ ಇಲ್ಲದೇ ಕಳೆದ 11 ವರ್ಷಗಳಿಂದ ನಿರಂತರವಾಗಿ ಯೋಗ ತರಬೇತಿ ನೀಡುವ ಮೂಲಕ ಜನಮನ್ನಣೆ ಗಳಿಸಿದ್ದಾರೆ.

ಹಾವೇರಿ: ಕಳೆದ ಎರಡು ದಶಕಗಳಿಂದ ಯೋಗಾಭ್ಯಾಸದಲ್ಲಿ ತೊಡಗಿಕೊಂಡಿರುವ ಸುಂದರ ಕುಲಕರ್ಣಿ (61) ಅವರು ಯೋಗದಲ್ಲಿ ಪರಿಣಿತಿ ಸಾಧಿಸಿದ್ದು, ತಾವು ಕಲಿತ ಯೋಗವನ್ನು ಇತರರಿಗೆ ಹೇಳಿಕೊಟ್ಟು ಜಾಗೃತಿ ಮೂಡಿಸುತ್ತಿದ್ದಾರೆ. ಕಳೆದ 11 ವರ್ಷಗಳಿಂದ ನಗರದಲ್ಲಿ ಯೋಗ ತರಬೇತಿ ನೀಡುತ್ತಿದ್ದು, ಮಕ್ಕಳಿಂದ ಹಿಡಿದು ಇಳಿವಯಸ್ಸಿನವರು ಇವರಲ್ಲಿ ಯೋಗ ತರಬೇತಿ ಪಡೆಯುತ್ತಿದ್ದಾರೆ. ಸ್ವತಃ ಸುಂದರ ಕುಲಕರ್ಣಿ ಅವರು ಬ್ಯಾಕ್ ಪೇನ್, ಕಿಡ್ನಿಯಲ್ಲಿ ಹರಳು ಸೇರಿದಂತೆ ಆರೋಗ್ಯದಲ್ಲಿ ಸಮಸ್ಯೆ ಎದುರಿಸುತ್ತಿದ್ದರು.

ಈ ಸಮಯದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಯೋಗ ಮಾಡುವಂತೆ ಸಲಹೆ ನೀಡಿದ್ದರಿಂದ ಯೋಗಾಭ್ಯಾಸದಲ್ಲಿ ತೊಡಗಿಕೊಂಡರು. ನಂತರದ ದಿನಗಳಲ್ಲಿ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದ್ದರಿಂದ ಪ್ರೇರಣೆಗೊಂಡು ನಿರಂತರವಾಗಿ ಯೋಗಾಭ್ಯಾಸದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು. ದಿನ ಕಳೆದಂತೆ ತಾವು ಕಲಿತ ಯೋಗವನ್ನು ಇತರರಿಗೆ ಉಚಿತವಾಗಿ ಹೇಳಿ ಕೊಡುವ ಮೂಲಕ ಯೋಗದ ಕುರಿತು ಜಾಗೃತಿ ಮೂಡಿಸುವಲ್ಲಿ ತೊಡಗಿಕೊಂಡರು. ಇದುವರೆಗೂ ಸುಮಾರು 700ಕ್ಕೂ ಹೆಚ್ಚು ಶಿಬಿರಗಳನ್ನು ಆಯೋಜಿಸಿ ಯೋಗ ತರಬೇತಿ ನೀಡಿದ್ದಾರೆ. ಶಾಲಾ- ಕಾಲೇಜುಗಳಿಗೆ ತೆರಳಿ ಮಕ್ಕಳಿಗೂ ಸಹ ಯೋಗ ತರಬೇತಿ ನೀಡಿದ್ದಾರೆ. ಯಾವುದೇ ಫಲಾಪೇಕ್ಷೆ ಇಲ್ಲದೇ ಕಳೆದ 11 ವರ್ಷಗಳಿಂದ ನಿರಂತರವಾಗಿ ಯೋಗ ತರಬೇತಿ ನೀಡುವ ಮೂಲಕ ಜನಮನ್ನಣೆ ಗಳಿಸಿದ್ದಾರೆ. ಆರೋಗ್ಯದಲ್ಲಿ ಚೇತರಿಕೆ: ಸ್ವತಃ ಬ್ಯಾಕ್ ಪೇನ್, ಕಿಡ್ನಿಯಲ್ಲಿ ಹರಳು ಸೇರಿದಂತೆ ಆರೋಗ್ಯದಲ್ಲಿ ಸಮಸ್ಯೆ ಎದುರಿಸುತ್ತಿದ್ದೆ. ಯೋಗ ಮಾಡುವಂತೆ ಸಲಹೆ ನೀಡಿದ್ದರಿಂದ ಯೋಗಾಭ್ಯಾಸದಲ್ಲಿ ನಿರಂತರವಾಗಿ ತೊಡಗಿಸಿಕೊಂಡು ಆರೋಗ್ಯದಲ್ಲಿ ಚೇತರಿಕೆ ಕಂಡುಕೊಂಡೆ. ಇದುವರೆಗೂ ಸುಮಾರು 700ಕ್ಕೂ ಹೆಚ್ಚು ಶಿಬಿರಗಳನ್ನು ಆಯೋಜಿಸಿ ಯೋಗ ತರಬೇತಿ ನೀಡಲಾಗಿದೆ ಎಂದು ಯೋಗಪಟು ಸುಂದರ ಕುಲಕರ್ಣಿ ತಿಳಿಸಿದರು.22ರಂದು ಯೋಗವೇ ಪರಮೌಷಧ ಕುರಿತು ಉಪನ್ಯಾಸ

ಕನ್ನಡಪ್ರಭ ವಾರ್ತೆ ರಾಣಿಬೆನ್ನೂರುಸ್ಥಳೀಯ ರಾಮಕೃಷ್ಣ ವಿವೇಕಾನಂದ ಆಶ್ರಮ ಹಾಗೂ ಭಾರತೀಯ ವೈದ್ಯಕೀಯ ಸಂಸ್ಥೆ ಸ್ಥಳೀಯ ಘಟಕದ ಸಹಯೋಗದಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ನಗರದ ಮೆಡ್ಲೇರಿ ರಸ್ತೆ ಆದಿಶಕ್ತಿ ದೇವಸ್ಥಾನದ ಆವರಣದಲ್ಲಿ ಜೂ. 22ರಂದು ಬೆಳಗ್ಗೆ 6ಕ್ಕೆ ಯೋಗವೇ ಪರಮೌಷಧ ಕುರಿತು ಉಪನ್ಯಾಸ ಕಾರ್ಯಕ್ರಮ ಏರ್ಪಡಿಸಲಾಗಿದೆ.

ಮುಂಬೈ ರಾಮಕೃಷ್ಣ ಮಿಷನ್ ಸ್ವಾಮಿ ದಯಾನಂದಜಿ ಮಹಾರಾಜ್, ಸ್ಥಳೀಯ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಪ್ರಕಾಶಾನಂದಜಿ ಮಹಾರಾಜ್, ಸ್ವಾಮಿ ಆತ್ಮ ದೀಪಾನಂದಜಿ ಮಹಾರಾಜ್ ಸಾನ್ನಿಧ್ಯ ವಹಿಸಿ ಮಾರ್ಗದರ್ಶನ ನೀಡುವರು.

ಭಾರತೀಯ ವೈದ್ಯಕೀಯ ಸಂಸ್ಥೆ ಸ್ಥಳೀಯ ಘಟಕದ ಅಧ್ಯಕ್ಷ ಡಾ. ಅಭಿನಂದನ ಸಾವುಕಾರ, ಕಾರ್ಯದರ್ಶಿ ಡಾ. ಪುಟ್ಟರಾಜ ಉಪಸ್ಥಿತರಿರುವರು ಎಂದು ಪ್ರಕಟಣೆ ತಿಳಿಸಿದೆ.