ಕನ್ನಡಪ್ರಭ ವಾರ್ತೆ ಮಂಗಳೂರು
ತುಳುಕೂಟದ ಅಧ್ಯಕ್ಷರಾಗಿ, ಸಾಮಾಜಿಕ, ರಾಜಕೀಯ ಕಾರ್ಯಕರ್ತರಾಗಿ ಸೇವೆ ಸಲ್ಲಿಸಿದ ಸುಂದರರಾಜ್ ರೈ ಅವರು ರಾಜಧಾನಿಯಲ್ಲಿ ತುಳುವರ ಗಟ್ಟಿ ಧ್ವನಿಯಾಗಿ ಕಾರ್ಯ ನಿರ್ವಹಿಸುವ ಮೂಲಕ ಸಮಾಜಕ್ಕಾಗಿ ಅನನ್ಯ ಸೇವೆ ಸಲ್ಲಿಸಿದ ಸಮಾಜಮುಖಿ ವ್ಯಕ್ತಿಯಾಗಿದ್ದರು ಎಂದು ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.ಇತ್ತೀಚಿಗೆ ನಿಧನರಾದ ಕೆ.ಸುಂದರರಾಜ್ ರೈ ಅವರಿಗೆ ಮಂಗಳೂರಿನ ತುಳುಭವನದಲ್ಲಿ ಆಯೋಜಿಸಲಾದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಅವರು ನುಡಿ ನಮನ ಸಲ್ಲಿಸಿದರು.ಸುಂದರರಾಜ್ ರೈ ಅವರ ಆಶಯಗಳನ್ನು ಮುಂದುವರಿಸುವ ಮೂಲಕ ಅವರಿಗೆ ಗೌರವ ಅರ್ಪಣೆ ಮಾಡಬೇಕಾಗಿದೆ ಎಂದು ಅವರು ಹೇಳಿದರು. ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಮಾತನಾಡಿ, ಸುಂದರರಾಜ್ ರೈ ಅವರು ಬೆಂಗಳೂರಿನಲ್ಲಿ ತುಳು ಸಂಘಟನೆ, ರಾಜಕೀಯ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಅನನ್ಯ ಸೇವೆ ಸಲ್ಲಿಸಿ ಜನಪ್ರಿಯತೆ ಪಡೆದಿದ್ದರೂ, ತನ್ನ ವೈಯುಕ್ತಿಕ ಲಾಭ ಉದ್ದೇಶಕ್ಕಾಗಿ ಏನನ್ನೂ ಮಾಡದೆ ಸೇವೆ ಸಲ್ಲಿಸಿದವರು. ಅವರ ಕುಟುಂಬಕ್ಕೆ ನಾವೆಲ್ಲರೂ ಆಸರೆಯಾಗಿ ನಿಲ್ಲಬೇಕು ಎಂದು ಹೇಳಿದರು.ಹಿರಿಯ ನಾಟಕಕಾರ ವಿಜಯಕುಮಾರ್ ಕೊಡಿಯಾಲ್ ಬೈಲ್, ಅಖಿಲ ಭಾರತ ತುಳು ಒಕ್ಕೂಟದ ಅಧ್ಯಕ್ಷ ಎ.ಸಿ. ಭಂಡಾರಿ ಮಾತನಾಡಿದರು. ಸಂಸದ ಬ್ರಿಜೇಶ್ ಚೌಟ, ಮುಖಂಡರಾದ ರಾಮಚಂದರ್ ಬೈಕಂಪಾಡಿ, ರಾಜಗೋಪಾಲ್ ರೈ, ಯೋಗೀಶ್ ಶೆಟ್ಟಿ ಜೆಪ್ಪು, ಲಕುಮಿ ಕಿಶೋರ್ ಕುಮಾರ್ ಶೆಟ್ಟಿ, ಬಜಿಲಕೇರಿ ಕಮಲಾಕ್ಷ, ಆನಂದ ಶೆಟ್ಟಿ, ಸಂಜಯ್ ಕುಮಾರ್ ಶೆಟ್ಟಿ ಗೋಣಿ ಬೀಡು, ರವಿ ಅಲೆವೂರಾಯ, ಸುಂದರರಾಜ್ ರೈ ಅವರ ಸಹೋದರ ರಮೇಶ್ ರೈ, ರಮೇಶ್ ಮಂಚಕಲ್, ಡಾ.ಮೀನಾಕ್ಷಿ ರಾಮಚಂದ್ರ, ವಿಜಯ ಲಕ್ಷ್ಮೀ ಶೆಟ್ಟಿ, ಕುಶಲಾಕ್ಷಿ ಕಣ್ವತೀರ್ಥ, ಪಿ.ಎ.ಪೂಜಾರಿ, ಮುರಳಿ ಹೊಸಮಜಲು ಇದ್ದರು.
ತುಳು ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಕಾರ್ಯಕ್ರಮ ನಡೆಸಿಕೊಟ್ಟರು.