ಕನ್ನಡಪ್ರಭ ವಾರ್ತೆ ಬೆಳಗಾವಿ
ಮಾಧ್ಯಮ ಪ್ರತಿನಿಧಿಗಳನ್ನು ದೂರವಿಟ್ಟು ಸಭೆ ನಡೆಸಿದ ಸುರ್ಜೇವಾಲಾ, ಸಚಿವ ಸತೀಶ ಜಾರಕಿಹೊಳಿ ಹಾಗೂ ಮಾಜಿ ಸಂಸದ ಡಿ.ಕೆ. ಸುರೇಶ್ ಅವರನ್ನು ತಮ್ಮ ಅಕ್ಕ ಪಕ್ಕದಲ್ಲಿ ಕೂರಿಸಿಕೊಂಡಿದ್ದು ಅಚ್ಚರಿಗೆ ಕಾರಣವಾಯಿತು. ಸಭೆಯಲ್ಲಿ ಸಚಿವರಾದ ಆರ್.ಬಿ. ತಿಮ್ಮಾಪುರ, ಬೋಸರಾಜು, ಶಾಸಕರಾದ ಲಕ್ಷ್ಮಣ ಸವದಿ, ರಾಜು ಕಾಗೆ, ಬಾಬಾಸಾಹೇಬ ಪಾಟೀಲ, ವಿಶ್ವಾಸ ವೈದ್ಯ, ಪ್ರಕಾಶ ಹುಕ್ಕೇರಿ ಸೇರಿದಂತೆ ಬೆಳಗಾವಿ, ಚಿಕ್ಕೋಡಿ, ಬಾಗಲಕೋಟೆ ನಾಯಕರು ಇದ್ದರು.
ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡದ ಸುರ್ಜೇವಾಲಾ ಅವರು, ಡಿ.ಕೆ.ಶಿವಕುಮಾರ್ ವಿರುದ್ಧ ಮುನಿಸಿಕೊಂಡಿರುವ ಸಚಿವ ಸತೀಶ ಜಾರಕಿಹೊಳಿ ಅವರ ಮನವೊಲಿಕೆಗೆ ಯತ್ನಿಸಿದರು ಎನ್ನಲಾಗಿದೆ. ಸಭೆ ಬಳಿಕ ಸತೀಶ ಜಾರಕಿಹೊಳಿ, ಸುರ್ವೇವಾಲಾ ಮತ್ತು ಡಿ.ಕೆ. ಸುರೇಶ್ ಅವರು ಒಂದೇ ವಾಹನದಲ್ಲಿ ತೆರಳಿದರು. ಬಳಿಕ ಅವರು ಗಾಂಧಿ ಭಾರತ ಕಾರ್ಯಕ್ರಮ ನಡೆಯಲಿರುವ ಸಿಪಿಎಡ್ ಮೈದಾನದಲ್ಲಿ ಸಿದ್ಧತೆ ಪರಿಶೀಲಿಸಿದರು. ಕಾರ್ಯಕರ್ತರ ಸಭೆ ಬಳಿಕ ಸತೀಶ ಜಾರಕಿಹೊಳಿ ಅವರು ಕಾಗವಾಡಕ್ಕೆ ತೆರಳಿದರು. ನಗರದ ಖಾಸಗಿ ಹೊಟೇಲ್ನಲ್ಲಿ ಸುರ್ವೇವಾಲಾ ಅವರು ಡಿಸಿಎಂ ಡಿ.ಕೆ.ಶಿವಕುಮಾರ್ ಜೊತೆಗೆ ಪ್ರತ್ಯೇಕವಾಗಿ ಅರ್ಧ ಗಂಟೆ ಸಭೆ ನಡೆಸಿದರು. ಈ ವೇಳೆ ಡಿ.ಕೆ.ಸುರೇಶ್ ಕೂಡ ಜತೆಗಿದ್ದರು. ಬಳಿಕ ಮೂವರು ಒಂದೇ ವಾಹನದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ ದಾಖಲಾಗಿರುವ ಆಸ್ಪತ್ರೆಗೆ ತೆರಳಿ, ಆರೋಗ್ಯ ವಿಚಾರಿಸಿದರು.