ದುರಸ್ತಿ ಭಾಗ್ಯ ಕಾಣದ ವಸತಿನಿಲಯದಲ್ಲಿ ಜೂಜುಕೋರರ ಹಾವಳಿ ಬಿಸಿಎಂ ಅಧಿಕಾರಿಗಳ ನಿರ್ಲಕ್ಷ್ಯ: ವಸತಿ ನಿಲಯ ಅಧೋಗತಿಗೆ ನಾಗರಾಜ್ ನ್ಯಾಮತಿ ಕನ್ನಡಪ್ರಭ ವಾರ್ತೆ ಸುರಪುರ ಹಿಂದುಳಿದ ವರ್ಗಗಳ ಇಲಾಖೆಯ ವಿದ್ಯಾರ್ಥಿನಿಲಯ ನಿರ್ಮಾಣಗೊಂಡು 50 ವರ್ಷ ಕಳೆದು ಲಕ್ಷಾಂತರ ವಿದ್ಯಾರ್ಥಿಗಳ ಬದುಕಿಗೆ ತಾಣವಾಗಿತ್ತು. ಕಳೆದ ನಾಲ್ಕೈದು ವರ್ಷಗಳ ಹಿಂದೆ ಕಟ್ಟಡ ದುರಸ್ತಿ ಹೆಸರಲ್ಲಿ ವಿದ್ಯಾರ್ಥಿಗಳನ್ನು ಮತ್ತೊಂದು ಕಟ್ಟಡಕ್ಕೆ ವರ್ಗಾಯಿಸಿದ ಬಳಿಕ ಈಗಿದು ಪಾಳುಬಿದ್ದು ಅನೈತಿಕ ಚಟುವಟಿಕೆಯ ಅಡ್ಡೆಯಾಗಿ ಮಾರ್ಪಾಡಾಗಿದೆ. 1970ರ ಕಾಲದಲ್ಲಿ ಸುಮಾರು 30 ಲಕ್ಷ ರು. ವೆಚ್ಚದಲ್ಲಿ ಸುರಪುರ ನಗರದ ಉದ್ದಾರ ಓಣಿಯಲ್ಲಿ ಈ ಹಾಸ್ಟೆಲ್ ಅನ್ನು ನಿರ್ಮಿಸಲಾಗಿತ್ತು. ಕಟ್ಟಡ ಹೊರಗಿನಿಂದ ನೋಡಿದಾಗ ಚೆನ್ನಾಗಿಯೇ ಕಾಣುತ್ತದೆ. ಅಲ್ಲದೆ ಕೆಲ ಕೊಠಡಿಗಳು ಮೇಲ್ಛಾವಣಿ ಉದುರಿ ಬಿದ್ದಿದೆ. ಕೆಲ ಸಜ್ಜಗಳು ಮುರಿದು ಹೋಗಿವೆ. ಸಣ್ಣ ಪುಟ್ಟ ದುರಸ್ತಿ ಹೊರತುಪಡಿಸಿದರೆ ಗುಣಮಟ್ಟದಿಂದ ಚನ್ನಾಗಿಯೇ ಕಾಣುತ್ತದೆ. ದುರಸ್ತಿ ಮಾಡಿಸಿ ಸುಣ್ಣಬಣ್ಣ ಮಾಡಿಸಿದರೆ ಹೊಸ ಕಟ್ಟಡದಂತೆ ಕಾಣುತ್ತದೆ ಆದರೆ, ಬಿಸಿಎಂ ಅಧಿಕಾರಿಗಳ ನಿರ್ಲಕ್ಷö್ಯದಿಂದ ಸರಕಾರದ ಕಟ್ಟಡಗಳು ಪಾಳು ಬೀಳುವತ್ತ ಸಾಗುತ್ತಿವೆ. ನಿರ್ಲಕ್ಷ್ಯ: ವಸತಿ ನಿಲಯದ ಕಟ್ಟಡ ಸದೃಢವಾಗಿ ಇರುವಾಗಲೇ ಸಂಬಂಧಪಟ್ಟ ಇಲಾಖೆಗಳ ಸೂಕ್ತ ನಿರ್ವಹಣೆ ಇಲ್ಲದೆ ಕಟ್ಟಡ ಪಾಳು ಬಿದ್ದು ನಿರುಪಯುಕ್ತವಾಗಿದೆ. ಕಟ್ಟಡದ ಬಾಗಿಲು ನೆಪಕ್ಕೆ ಮಾತ್ರ ಬೀಗ ಹಾಕಲಾಗಿದೆ. ಹಗಲು ರಾತ್ರಿಯೆನ್ನದೆ ತೆರೆದು ಒಳಹೋಗುತ್ತಾರೆ. ಮತ್ತೊಂದೆಡೆ ಗೋಡೆಯನ್ನು ಒಡೆದು ಒಳಗೆ ಹೋಗುವ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಸಮಾಜಬಾಹಿರ ಚಟುವಟಿಕೆಗಳು ಈ ಕಟ್ಟಡದಲ್ಲಿ ನಡೆಯುತ್ತಿರುವ ಬಗ್ಗೆ ಸ್ಥಳೀಯರು ದೂರಿದ್ದಾರೆ. ಗಿಡಗಂಟಿ: ಕಟ್ಟಡದ ಕಿಟಕಿಯ ಗಾಜುಗಳು ಸಂಪೂರ್ಣವಾಗಿ ಹಾನಿಗೊಂಡಿವೆ. ಮುನಷ್ಯರು, ನಾಯಿಗಳು ಸೇರಿದಂತೆ ಪ್ರಾಣಿಗಳು ವಾಸ ಮಾಡುತ್ತಿದ್ದು, ಕಟ್ಟಡದ ಒಳಗೆ ಇಸ್ಪೀಟ್ ಎಲೆಗಳು, ಬ್ರಾಂಡಿ ಬಾಟಲ್, ಪೌಚ್ಗಳು, ಗುಟ್ಕಾದ ಕಲೆಗಳು ಹೆಪ್ಪುಗಟ್ಟಿ ನಿಂತಿವೆ. ಕಟ್ಟಡದ ಸುತ್ತಲೂ ಗಿಡಗಂಟಿ ತುಂಬಿಹೋಗಿದೆ. ಒಳಗಡೆಯೇ ಮಲ, ಮೂತ್ರ ವಿಸರ್ಜನೆ ಮಾಡುತ್ತಿದ್ದಾರೆ. ಇದರಿಂದ ಅಕ್ಕಪಕ್ಕದ ನಿವಾಸಿಗಳು ತಾಪತ್ರಯ ಎದುರಿಸುವಂತಾಗಿದೆ. ಕಟ್ಟಡದ ಒಂದು ಕೊಠಡಿಗಳಲ್ಲಿ ಅಲ್ಲಲ್ಲಿ ವಿದ್ಯಾರ್ಥಿ ನಿಲಯದ ಪೀಠೋಪಕರಣ ದಾಸ್ತಾನು ಮಾಡಲಾಗಿದೆ. ಇದಕ್ಕೆ ಯಾವುದೇ ಭದ್ರತೆ ಇಲ್ಲವಾಗಿದೆ. ಯಾವುದೇ ಸಂದರ್ಭದಲ್ಲಿ ಪೀಠೋಪಕರಣಗಳನ್ನು ಕಳ್ಳರು ಕದಿಯುವ ಸಾಧ್ಯತೆ ಇದೆ. ಹಾಸ್ಟೆಲ್ ಸುತ್ತ ಗಿಡಗಂಟಿ ತುಂಬಿ ಹೋಗಿರುವುದರಿಂದ ವಿಷ ಜಂತುಗಳು ಇವೆ ಎನ್ನಲಾಗುತ್ತಿದೆ. ವಿದ್ಯಾರ್ಥಿ ವಸತಿ ನಿಲಯದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲೆಯ 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ಆಶ್ರಯ ಪಡೆದಿದ್ದರು. ಅಲ್ಲದೆ ಪ್ರಾಥಮಿಕ ಮತ್ತು ಪ್ರೌಢಶಾಲೆ ಪಕ್ಕದಲ್ಲಿ ಇದ್ದದ್ದರಿಂದ ಹೋಗಿ ಬರಲು ಅನುಕೂಲವಿತ್ತು. ಆದರೆ ಒಂದೆರಡು ಕಿ.ಮೀ. ದೂರ ಆಗುತ್ತಿದೆ. ಬಿಸಿಎಂ ವಿಸ್ತೀರ್ಣಾಧಿಕಾರಿ ನಿರ್ಲಕ್ಷ್ಯದಿಂದ ತೊಂದರೆ ಅನುಭವಿಸುವಂತಾಗಿದೆ ಅಂತಾರೆ ಜನರು. ಕೋಟ್.. ಬಾಲಕರ ಹಾಸ್ಟೆಲ್ ಕಟ್ಟಡ ಸಾರ್ವಜನಿಕರ ಉಪಯೋಗವಾಗಬೇಕು. ಪಾಳುಬಿದ್ದಿರುವ ಬಗ್ಗೆ ಮಾಹಿತಿಯಿಲ್ಲ. ಅಧಿಕಾರಿಗಳನ್ನು ಕರೆದು ಮಾತನಾಡಿ ವಸತಿ ನಿಲಯ ನಿರುಪಯುಕ್ತವಾಗಿರುವ ಬಗ್ಗೆ ಪರಿಶೀಲನೆ ನಡೆಸಿ ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡುವಂತೆ ಅಧಿಕಾರಿಯವರಿಗೆ ಸೂಚಿಸಲಾಗುವುದು. ಅದಕ್ಕೆ ಬೇಕಾದ ಅನುದಾನ ಒದಗಿಸಿ ದುರಸ್ತಿಗೆ ಕ್ರಮ ಕೈಗೊಳ್ಳಲಾಗುತ್ತದೆ. - ರಾಜಾ ವೆಂಕಟಪ್ಪ ನಾಯಕ, ಶಾಸಕ, ಸುರಪುರ. ---- ವಸತಿ ನಿಲಯ ಕಟ್ಟಡದ ಗುಣಮಟ್ಟ ಚನ್ನಾಗಿದೆ. ಸ್ವಲ್ಪ ದುರಸ್ತಿ ಮಾಡಿಸಿದರೂ ಸಾರ್ವಜನಿಕರ ಪರವಾಗಿ ಹಲವಾರು ಕಾರ್ಯಕ್ರಮಗಳನ್ನು ಮಾಡಬಹುದು. ಸಾರ್ವಜನಿಕರ ಕಲ್ಯಾಣ ಮಂಟಪಕ್ಕೆ ಕೊಟ್ಟರೆ ಜನರಿಗೆ ಅನುಕೂಲವಾಗುತ್ತದೆ. ಇಲ್ಲಿ ಮದುವೆ ಸೇರಿದಂತೆ ವಿವಿಧ ಕಾರ್ಯಕ್ರಮಗಳು ನಡೆದಿವೆ. ಶೀಘ್ರವೇ ಶಾಸಕರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗುತ್ತದೆ. - ಕಾಮಣ್ಣ ದೊರೆ, ಉದ್ದಾರ ಓಣಿ, ಸುರಪುರ.