ಎಲೆಕ್ಟ್ರಿಕ್ ವಾಹನಗಳಿಂದ ಸುಸ್ಥಿರ ಅಭಿವೃದ್ಧಿ: ಪ್ರೊ.ರಮೇಶ ಸಾಲಿಯಾನ

KannadaprabhaNewsNetwork |  
Published : Aug 22, 2025, 12:00 AM IST
21ಕೆಡಿವಿಜಿ5-ದಾವಣಗೆರೆ ವಿವಿಯಲ್ಲಿ ಎಂಬಿಎ ವಿಭಾಗ ಹಮ್ಮಿಕೊಂಡಿದ್ದ ರಾಷ್ಟ್ರೀಯ ಮಟ್ಟದ ವಿಚಾರಗೋಷ್ಟಿ ಉದ್ಘಾಟಿಸಿದ ನವದೆಹಲಿಯ ಜೆಎನ್‌ಯು ಪ್ರಾಧ್ಯಾಪಕ ಪ್ರೊ.ರಮೇಶ್ ಸಾಲಿಯಾನ. ಕುಲಪತಿ ಪ್ರೊ.ಬಿ.ಡಿ.ಕುಂಬಾರ, ಪ್ರಶಾಂತ ಇತರರು ಇದ್ದರು. | Kannada Prabha

ಸಾರಾಂಶ

ಭಾರತದಂತಹ ಜನಸಂಖ್ಯೆ ಹೆಚ್ಚಾಗಿರುವ ರಾಷ್ಟ್ರಗಳಲ್ಲಿ ಇಂಧನ ಭದ್ರತೆ, ವಾಯುಮಾಲಿನ್ಯ, ಆರ್ಥಿಕ ಸಮಸ್ಯೆ ನಿವಾರಣೆ ಮತ್ತು ಜಾಗತಿಕ ತಾಪಮಾನದಂತಹ ಸಮಸ್ಯೆ ನಿವಾರಿಸಿ, ಸುಸ್ಧಿರ ಅಭಿವೃದ್ಧಿಯತ್ತ ಮುನ್ನಡೆಯಲು ಎಲೆಕ್ಟ್ರಿಕ್ ವಾಹನಗಳ ಪ್ರಮುಖ ಪರಿಹಾರ ಮಾರ್ಗವಾಗಿವೆ ಎಂದು ನವದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ಪ್ರಾಧ್ಯಾಪಕ ಪ್ರೊ.ರಮೇಶ ಸಾಲಿಯಾನ ತಿಳಿಸಿದರು.

ಕನ್ನಡಪ್ರಭ ವಾರ್ತೆ ದಾವಣಗೆರೆ

ಭಾರತದಂತಹ ಜನಸಂಖ್ಯೆ ಹೆಚ್ಚಾಗಿರುವ ರಾಷ್ಟ್ರಗಳಲ್ಲಿ ಇಂಧನ ಭದ್ರತೆ, ವಾಯುಮಾಲಿನ್ಯ, ಆರ್ಥಿಕ ಸಮಸ್ಯೆ ನಿವಾರಣೆ ಮತ್ತು ಜಾಗತಿಕ ತಾಪಮಾನದಂತಹ ಸಮಸ್ಯೆ ನಿವಾರಿಸಿ, ಸುಸ್ಧಿರ ಅಭಿವೃದ್ಧಿಯತ್ತ ಮುನ್ನಡೆಯಲು ಎಲೆಕ್ಟ್ರಿಕ್ ವಾಹನಗಳ ಪ್ರಮುಖ ಪರಿಹಾರ ಮಾರ್ಗವಾಗಿವೆ ಎಂದು ನವದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ಪ್ರಾಧ್ಯಾಪಕ ಪ್ರೊ.ರಮೇಶ ಸಾಲಿಯಾನ ತಿಳಿಸಿದರು.

ತಾಲೂಕಿನ ತೋಳಹುಣಸೆಯ ಶಿವಗಂಗೋತ್ರಿಯ ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಗುರುವಾರ ಎಂಬಿಎ ವಿಭಾಗವು ಐಸಿಎಸ್‌ಎಸ್‌ಆರ್ ಪ್ರಾಯೋಜಕತ್ವದಲ್ಲಿ ಹಮ್ಮಿಕೊಂಡಿದ್ದ ಭಾರತದಲ್ಲಿ ಎಲೆಕ್ಟ್ರಿಕ್‌ ವಾಹನಗಳು: ಸುಸ್ಥಿರತೆಯತ್ತ ಚಾಲನೆ ಕುರಿತ ರಾಷ್ಟ್ರ ಮಟ್ಟದ ವಿಚಾರಗೋಷ್ಠಿ ಉದ್ಘಾಟಿಸಿ ಮಾತನಾಡಿದರು.

ಕೇವಲ ಆರ್ಥಿಕ ಲಾಭವನ್ನಷ್ಟೇ ಪರಿಗಣಿಸದೇ, ಸುಸ್ಥಿರ ಆರೋಗ್ಯವನ್ನೂ ಪರಿಗಣಿಸುವುದು ಮುಖ್ಯ. ದೇಶದಲ್ಲಿ ವಾಯುಮಾಲಿನ್ಯವೇ ಅತ್ಯಂತ ಗಂಭೀರ ಸಮಸ್ಯೆಯಾಗಿದೆ. ಪೆಟ್ರೋಲ್, ಡೀಸೆಲ್ ವಾಹನಗಳು ಹೊರ ಸೂಸುವ ಹಾನಿಕಾರಕ ಹೊಗೆ, ಅನಿಲಗಳು ಪರಿಸರ ಮತ್ತು ಜನಾರೋಗ್ಯದ ಮೇಲೆ ಪರಿಣಾಮ ಬೀರುತ್ತವೆ. ಎಲೆಕ್ಟ್ರಿಕ್ ವಾಹನಗಳ ಬಳಕೆಯಿಂದ ವಾಯುಮಾಲಿನ್ಯವನ್ನು ಗಣನೀಯವಾಗಿ ಕಡಿಮೆ ಮಾಡಲು ಸಾಧ್ಯ ಎಂದರು.

ಪ್ರಸ್ತುತ ಜಾಗತಿಕ ಮಟ್ಟದಲ್ಲಿ ಇಂಧನಕ್ಕಾಗಿ ಸಂಘರ್ಷ ನಡೆಯುತ್ತಿದೆ. ಭಾರತವು ಪೆಟ್ರೋಲ್ ಮತ್ತು ಡೀಸೆಲ್‌ಗಾಗಿ ವಿದೇಶಗಳನ್ನು ಅವಲಂಭಿಸಿದೆ. ಈ ಆರ್ಥಿಕತೆಯ ಒತ್ತಡ ನಿವಾರಿಸಿ, ದೇಶೀಯವಾಗಿ ಉತ್ಪಾದನೆಯಾಗುವ ವಿದ್ಯುತ್ ಶಕ್ತಿ ಬಳಕೆ ಮಾಡಿಕೊಂಡರೆ ತೈಲ ಆಮದು ವೆಚ್ಚವನ್ನೂ ಕಡಿಮೆ ಮಾಡಬಹುದು. ದೇಶದ ಆರ್ಥಿಕತೆ (ಜಿಡಿಪಿ) ಸಹ ಬಲಗೊಳ್ಳುತ್ತದೆ ಎಂದು ವಿವರಿಸಿದರು.

ಎಲೆಕ್ಟ್ರಿಕ್ ವಾಹನಗಳ ಕಡೆ ಸಾಗುವ ಪ್ರಯಾಣವು ದೊಡ್ಡ ಸವಾಲು ಮತ್ತು ಜವಾಬ್ದಾರಿಯಾಗಿದೆ. ಎಲ್ಲರೂ ಒಟ್ಟಾಗಿ ಇಂತಹ ಪರಿವರ್ತನೆಯಲ್ಲಿ ಭಾಗವಹಿಸಬೇಕಾಗಿದೆ. ಸ್ವಾವಲಂಬಿ, ಸುಭದ್ರ ಆರ್ಥಿಕತೆಯ ಭಾರತ ನಿರ್ಮಾಣಕ್ಕೆ ಹೆಜ್ಜೆ ಇಡಲು ಪರ್ಯಾಯಗಳ ಚಿಂತನೆ ಅನಿವಾರ್ಯ ಎಂದು ತಿಳಿಸಿದರು.

ಮಹಾಂತ ಮೋಟಾರ್ಸ್‌ ವ್ಯವಸ್ಥಾಪಕ ನಿರ್ದೇಶಕ ಪ್ರಶಾಂತ ಮಾತನಾಡಿ, ಎಲೆಕ್ಟ್ರಿಕ್ ವಾಹನಗಳ ನಿರ್ವಹಣಾ ವೆಚ್ಚ ಸಾಂಪ್ರದಾಯಿಕ ವಾಹನಗಳಿಗಿಂತ ಕಡಿಮೆಯಾಗಿದೆ. ಅಲ್ಲದೇ, ವಿದ್ಯುತ್‌ ಇಂಧನದ ಬೆಲೆ ಇತರ ಇಂಧನಗಳಿಗಿಂತ ತೀರಾ ಅಗ್ಗವಾಗಿದ್ದು, ಗ್ರಾಹಕರಿಗೆ ಆರ್ಥಿಕವಾಗಿ ಲಾಭವಾಗುತ್ತದೆ ಎಂದರು.

ಬ್ಯಾಟರಿ ತಯಾರಿಕೆಗೆ ಬೇಕಾದ ಲೀಥಿಯಂ, ಕೋಬಾಲ್ಟ್, ನಿಕೆಲ್‌ನಂತಹ ಖನಿಜಗಳ ಲಭ್ಯತೆ ಭಾರತದಲ್ಲಿ ಸೀಮಿತವಾಗಿದ್ದು, ವಿದೇಶಗಳನ್ನೇ ಅವಲಂಭಿಸಬೇಕಾಗಿದೆ. ಅಲ್ಲದೇ ಬ್ಯಾಟರಿಗಳನ್ನು ಸರಿಯಾಗಿ ವಿಲೇ ಮಾಡುವುದು, ಮರುಬಳಕೆ ಮಾಡುವುದು ದೊಡ್ಡ ಸವಾಲಾಗಿದೆ. ಇಂತಹ ಸವಾಲುಗಳನ್ನು ಎದುರಿಸುವ ನಿಟ್ಟಿನಲ್ಲಿ ಪ್ರಯತ್ನಗಳು ನಿರಂತರ ನಡೆಯುತ್ತಲೇ ಇದೆ ಎಂದು ವಿವರಿಸಿದರು.

ಬೆಂಗಳೂರಿನ ಸಿಗ್ನೆಟ್ ಎಂಟರ್‌ಪ್ರೈಸಸ್ ಸಿಇಒ ಬಿ.ವಿ.ವೆಂಕಟಶ್ಯಾಮ್ ಮಾತನಾಡಿ, ತಂತ್ರಜ್ಞಾನ ಸುಧಾರಣೆ, ಬ್ಯಾಟರಿ ವೆಚ್ಚದಲ್ಲಿ ಇಳಿಕೆ, ಸಮರ್ಪಕ ನೀತಿಗಳ ಮೂಲಕ ಎಲೆಕ್ಟ್ರಿಕ್ ವಾಹನಗಳು ಭಾರತದಲ್ಲಿ ಮುಂದಿನ ದಿನಗಳಲ್ಲಿ ಕ್ರಾಂತಿಕಾರಿ ಬದಲಾವಣೆ ತರುವ ನಿರೀಕ್ಷೆ ಇದೆ. ಇದು ಸ್ವಚ್ಛ, ಹಸಿರು ಮತ್ತು ಆರ್ಥಿಕವಾಗಿ ಸದೃಢವಾದ ಭಾರತ ನಿರ್ಮಾಣಕ್ಕೆ ದಾರಿ ಮಾಡಿಕೊಡಲಿದೆ ಎಂದು ಅಭಿಪ್ರಾಯಪಟ್ಟರು.

ಕುಲಪತಿ ಪ್ರೊ.ಬಿ.ಡಿ.ಕುಂಬಾರ, ವಿವಿ ಎಂಬಿಎ ವಿಭಾಗ ಮುಖ್ಯಸ್ಥ ಮತ್ತು ಡೀನ್ ಪ್ರೊ.ಆರ್.ಶಶಿಧರ, ಹಿರಿಯ ಪ್ರಾಧ್ಯಾಪಕ ಪ್ರೊ.ಜೆ.ಕೆ.ರಾಜು, ಕಾರ್ಯಕ್ರಮ ಸಹ ಸಂಚಾಲಕಿ ಡಾ.ಸುನೀತಾ, ಡಾ. ರಮೇಶ್‌ ಚಂದ್ರಹಾಸ್, ಡಾ.ಆಸೀಫುಲ್ಲಾ, ಬೋಧಕ-ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಇದ್ದರು.

PREV

Recommended Stories

‘ಪಿಒಪಿ ಗಣಪ ಬಳಸಲ್ಲ’ ಮುಚ್ಚಳಿಕೆ ಬರೆಸಿ ಉತ್ಸವಕ್ಕೆ ಒಪ್ಪಿಗೆ: ಖಂಡ್ರೆ
ಕರ್ನಾಟಕದಲ್ಲಿ ಅಡಕೆ ಕ್ಯಾನ್ಸರ್‌ ಕಾರಕವೇ? : ಶೀಘ್ರ ವರದಿಗೆ ಕೃಷಿ ಸಚಿವ ಚೌಹಾಣ್ ಸೂಚನೆ