ಮಕ್ಕಳಿಗೆ ಗುಲಾಬಿ ಹೂ ನೀಡಿದ ತಹಸೀಲ್ದಾರ್

KannadaprabhaNewsNetwork | Published : May 31, 2025 1:06 AM
ಆನವಟ್ಟಿಯ ಸರ್ಕಾರಿ ಬಾಲಿಕಾ ಪ್ರೌಢ ಶಾಲೆಯ ವಿದ್ಯಾರ್ಥಿಗಳಿಗೆ ಗುಲಾಬಿ ಹೂ ಹಾಗೂ ಸಿಹಿ ನೀಡುವ ಮೂಲಕ ಅತ್ಯಂತ ಸಂಭ್ರಮದಿಂದ ತಹಸೀಲ್ದಾರ್‌ ಮಂಜುಳಾ ಹೆಗಡಾಳ್‌ ಅವರು ಮೊದಲ ದಿನ ವಿದ್ಯಾರ್ಥಿಗಳಿಗೆ ಶಾಲೆಗೆ ಬರಮಾಡಿಕೊಂಡರು.

ಕನ್ನಡಪ್ರಭ ವಾರ್ತೆ ಆನವಟ್ಟಿ

ಆನವಟ್ಟಿಯ ಸರ್ಕಾರಿ ಬಾಲಿಕಾ ಪ್ರೌಢ ಶಾಲೆಯ ವಿದ್ಯಾರ್ಥಿಗಳಿಗೆ ಗುಲಾಬಿ ಹೂ ಹಾಗೂ ಸಿಹಿ ನೀಡುವ ಮೂಲಕ ಅತ್ಯಂತ ಸಂಭ್ರಮದಿಂದ ತಹಸೀಲ್ದಾರ್‌ ಮಂಜುಳಾ ಹೆಗಡಾಳ್‌ ಅವರು ಮೊದಲ ದಿನ ವಿದ್ಯಾರ್ಥಿಗಳಿಗೆ ಶಾಲೆಗೆ ಬರಮಾಡಿಕೊಂಡರು.

ಶುಕ್ರವಾರ ಸರ್ಕಾರಿ ಬಾಲಿಕಾ ಪ್ರೌಢ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಶಾಲೆ ಪ್ರಾರಂಭೋತ್ಸವ ಹಾಗೂ ಪಠ್ಯಪುಸ್ತಕ, ಸಮವಸ್ತ್ರ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಶಿಕ್ಷಕರ ಪರಿಶ್ರಮದಿಂದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸರ್ಕಾರಿ ಶಾಲೆಯಲ್ಲಿ ಸಿಗುತ್ತಿದ್ದು, ಶಿಕ್ಷಕರ ಪರಿಶ್ರಮಕ್ಕೆ ತಕ್ಕಂತೆ ವಿದ್ಯಾರ್ಥಿಗಳು ಸಹ ಚನ್ನಾಗಿ ಅಭ್ಯಾಸ ಮಾಡಿ ಉತ್ತಮ ಸಾಧನೆ ಮಾಡಿದ್ದಾರೆ. ಎಸ್‌ಎಸ್‌ಎಲ್‌ಸಿಯಲ್ಲಿ ಆಂಗ್ಲ ಮಾಧ್ಯಮದಲ್ಲಿ ಶೇ 100, ಕನ್ನಡ ಮಾಧ್ಯಮದಲ್ಲಿ ಶೇ 87 ಫಲಿತಾಂಶ ಗಳಿಸುವ ಮೂಲಕ ಬಾಲಿಕಾ ಪ್ರೌಢ ಶಾಲೆ ಉತ್ತಮ ಸಾಧನೆ ಮಾಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿ, ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ದಾಖಲಿಸಿ ಎಂದು ಕರೆ ನೀಡಿದರು.

ವಿದ್ಯಾರ್ಥಿ ದೆಸೆಯಲ್ಲಿ ವಿದ್ಯಾಭ್ಯಾಸದ ಕಡೆ ಮಾತ್ರ ಗಮನ ನೀಡಬೇಕು. ಓದುದನ್ನು ಬಿಟ್ಟು ಇತರೆ ಯಾವ ಆಲೋಚನೆಗಳು ವಿದ್ಯಾರ್ಥಿಗಳು ಮಾಡಬಾರದು. ಶಿಕ್ಷಕರು ಹಾಗೂ ಪೋಷಕರನ್ನು ಗೌರವ ಬಾವದಿಂದ ಕಾಣಬೇಕು. ಉತ್ತಮ ಸಂಸ್ಕಾರ ರೂಢಿಸಿಕೊಂಡಾಗ ಮಾತ್ರ ಸಾಧನೆಯ ಜೊತೆಗೆ ಉತ್ತಮ ಗೌರವ ಸಿಗುತ್ತದೆ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಆಂಗ್ಲ ಮಾಧ್ಯಮದಲ್ಲಿ ಚಂದನ 622 ಅಂಕ ಪಡೆದು ಸರ್ಕಾರಿ ಶಾಲೆಯ ಕೀರ್ತೀ ಹೆಚ್ಚಿಸಿದ್ದಾರೆ. ಇಂತಹ ಪ್ರತಿಭಾವಂತ ವಿದ್ಯಾರ್ಥಿನಿ ನಿಮ್ಮಗೆ ಮಾದರಿಯಾಗಬೇಕು ಎಂದರು.

ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಆರ್‌,ಪುಷ್ಪಾ, ಸಮನ್ವಯಾಧಿಕಾರಿ ದಯಾನಂದ ಕಲ್ಲೇರ್‌, ಮುಖ್ಯ ಶಿಕ್ಷಕ ವೀರಭದ್ರ ಗೌಡ, ಸಿಆರ್‌ಪಿ ರುದ್ರೇಶ್‌, ಎಸ್‌ಡಿಎಂಸಿ ಸದಸ್ಯರು ಇದ್ದರು.