ಕನ್ನಡಪ್ರಭ ವಾರ್ತೆ ಗುಡಿಬಂಡೆ
ಸರ್ಕಾರ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಹಾಗೂ ಸಮರ್ಪಕ ದಾಖಲೆ ಇಲ್ಲದ ಆಸ್ತಿಗಳ ಮಾಲೀಕರು ನೇರವಾಗಿ ಇ-ಖಾತಾ ಮಾಡಿಸಿಕೊಳ್ಳುವ ಹಾಗೂ ಮಧ್ಯವರ್ತಿಗಳ ಹಾವಳಿ ತಪ್ಪಿಸಿ ಜನತೆಗೆ ಅನುಕೂಲ ಮಾಡುವ ಉದ್ದೇಶದಿಂದ ಇ-ಖಾತಾ ಆಂದೋಲನ ಹಮ್ಮಿಕೊಂಡಿದ್ದು, ಇದನ್ನು ಜನತೆ ಸದ್ಬಳಕೆ ಮಾಡಿಕೊಳ್ಳುವಂತೆ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸಬಾ ಶಿರೀನ್ ಮನವಿ ಮಾಡಿದರು.ಸ್ಥಳೀಯ ಪಟ್ಟಣ ಪಂಚಾಯತಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಇ-ಖಾತಾ ಅಭಿಯಾನದ ಕುರಿತು ಜನರಿಗೆ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸರ್ಕಾರ ಇ-ಖಾತಾ ಅಭಿಯಾನವನ್ನು ಜಾರಿ ಮಾಡಿದೆ ಎಂದರು.
ಬಿ-ಖಾತಾಗೂ ಮಾನ್ಯತೆ ಇದೆಹಲವರಲ್ಲಿ ಈ ಬಿ-ಖಾತೆ ಮಾಡಿಸಿಕೊಂಡರೆ ಅದಕ್ಕೆ ಬೆಲೆಯಿಲ್ಲ ಎಂಬ ಅನುಮಾನ ಇದೆ. ಆದರೆ ಬಿ-ಖಾತಾಗೂ ಬೆಲೆಯಿದೆ ಎಂಬುದನ್ನು ಜನರು ಅರ್ಥ ಮಾಡಿಕೊಳ್ಳಬೇಕು. ಯಾವುದೇ ಸುಳ್ಳು ವದಂತಿಗಳಿಗೆ ಕಿವಿಗೊಡಬಾರದರು. ಆದಷ್ಟು ಶೀಘ್ರವಾಗಿ ಜನರು ತಮ್ಮ ಸ್ವತ್ತುಗಳಿಗೆ ಸಂಬಂಧಿಸಿದಂತೆ ಬಿ-ಖಾತಾ ಮಾಡಿಸಿಕೊಳ್ಳಬೇಕು ಎಂದರು.
ಬಳಿಕ ಪ.ಪಂ ಅಧ್ಯಕ್ಷ ವಿಕಾಸ್ ಮಾತನಾಡಿ, ಜನರು ತಮ್ಮ ಸ್ವತ್ತುಗಳಿಗೆ ಖಾತಾ ಮಾಡಿಸಿಕೊಳ್ಳಲು ಯಾವುದೇ ಮಧ್ಯವರ್ತಿಗಳ ಬಳಿ ಹೋಗದೆ ಈ ಅಭಿಯಾನದ ಮೂಲಕ ನೇರವಾಗಿ ಸ್ಥಳೀಯ ಸಂಸ್ಥೆಗಳ ಕಚೇರಿಗೆ ಹೋಗಿ ದಾಖಲೆಗಳನ್ನು ಸಲ್ಲಿಸಿ ಇ-ಖಾತೆ ಪಡೆಯಬಹುದಾಗಿದೆ. ಜನರು ನೇರವಾಗಿ ಪುರಸಭೆ ಕಚೇರಿಗೆ ಬಂದು ಸಂಬಂಧಪಟ್ಟ ದಾಖಲೆಗಳನ್ನು ಸಲ್ಲಿಸಿದರೆ, ಅರ್ಜಿ ಸಲ್ಲಿಸಿದ 15 ದಿನಗಳಲ್ಲಿ ನಿಮ್ಮ ಆಸ್ತಿಯ ಇ-ಖಾತೆ ಮಾಡಿಕೊಡಲಾಗುವುದು ಎಂದರು.ಇದೇ ಸಮಯದಲ್ಲಿ ಪಪಂ ಸದಸ್ಯ ಇಸ್ಮಾಯಿಲ್ ಅಜಾದ್ ಬಾಬು, ನಾಮಿನಿ ಸದಸ್ಯ ಅಂಬರೀಶ್ ಇ-ಖಾತಾ ಅಭಿಯಾನದ ಕುರಿತು ಜನರಿಗೆ ಅರಿವು ಮೂಡಿಸಿದರು. ಈ ಸಮಯದಲ್ಲಿ ಪಪಂ ಉಪಾಧ್ಯಕ್ಷ ಗಂಗರಾಜು, ಸದಸ್ಯರಾದ ಬಷೀರ್, ಪಪಂ ಸಿಬ್ಬಂದಿಯಾದ ಬಾಲಪ್ಪ ಮತ್ತಿತರರು ಇದ್ದರು.