ಕನ್ನಡಪ್ರಭ ವಾರ್ತೆ ಬೆಂಗಳೂರು
ಗಾಂಧಿನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಚಿಕ್ಕಪೇಟೆಗೆ ಹೊಂದಿಕೊಂಡಿರುವ ಅಂಚೆ ಪೇಟೆಯ ರಜತಾ ಕಾಂಪ್ಲೆಕ್ಸ್ ಕಟ್ಟಡವು ಜಿಬಿಎ ಸ್ವತ್ತಾಗಿದೆ. ಇದು ಸುಮಾರು 20 ಸಾವಿರ ಚದರ ಅಡಿಗೂ ಹೆಚ್ಚಿನ ವಿಸ್ತೀರ್ಣ ಹೊಂದಿದೆ. ಈ ಸ್ವತ್ತಿನ ಕೆಳ ಮಹಡಿಯ ಗುತ್ತಿಗೆ ಅವಧಿ ಮುಗಿದು ಹಲವು ವರ್ಷ ಕಳೆದಿದೆ. ಈ ಸ್ವತ್ತಿನ ಮೊದಲ ಮತ್ತು ಎರಡನೇ ಅಂತಸ್ತಿನಲ್ಲಿ ಸರ್ಕಾರಿ ಪ್ರೌಢಶಾಲೆ ನಡೆಯುತ್ತಿದೆ. ನೆಲ ಅಂತಸ್ತಿನ ಮಳಿಗೆಗಳು ಅನಧಿಕೃತವಾಗಿ ಕಾರ್ಯ ನಿರ್ವಹಿಸುತ್ತಿವೆ. ಶಿಥಿಲಾವಸ್ಥೆಗೆ ತಲುಪಿರುವ ಈ ಕಟ್ಟಡದಲ್ಲಿ ಹಲವರು ಕಾನೂನು ಬಾಹಿರವಾಗಿ ಮಳಿಗೆಗಳನ್ನು ನಡೆಸುತ್ತಿದ್ದಾರೆ. ಈ ಮಳಿಗೆಗಳನ್ನು ತಮ್ಮ ಹೆಸರಿಗೆ ಖಾತಾ ಮಾಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಚಿಕ್ಕಪೇಟೆಗೆ ಹೊಂದಿಕೊಂಡಿರುವ ಮಾಮೂಲು ಪೇಟೆಯ ಮಹಾರಾಜ ಪ್ಲಾಜಾ ವಾಣಿಜ್ಯ ಕಟ್ಟಡವು ಜಿಬಿಎ ಸ್ವತ್ತಾಗಿದೆ. ಸಮಾರು 25 ಸಾವಿರ ಚದರ ಅಡಿಗೂ ಹೆಚ್ಚಿನ ವಿಸ್ತೀರ್ಣ ಹೊಂದಿರುವ ಈ ಕಟ್ಟಡದ ಮೊದಲ ಮತ್ತು ಎರಡನೇ ಮಹಡಿಯಲ್ಲಿ ಸರ್ಕಾರಿ ಶಾಲೆ ನಡೆಯುತ್ತಿದೆ. ನೆಲ ಅಂತಸ್ತಿನ ಮಳಿಗೆಗಳನ್ನು ಹಲವು ವ್ಯಕ್ತಿಗಳು ಅತಿಕ್ರಮಿಸಿದ್ದಾರೆ. ಈ ಮಳಿಗೆಗಳನ್ನು ಅಕ್ರಮವಾಗಿ ತಮ್ಮ ಹೆಸರಿಗೆ ಮಾಡಿಸಿಕೊಳ್ಳಲು ಮುಂದಾಗಿರುವ ಬಗ್ಗೆ ತಿಳಿದು ಬಂದಿದೆ.ಜಿಬಿಎಗೆ ಸೇರಿದ ಈ ಎರಡೂ ಸ್ವತ್ತುಗಳ ಮಾರುಕಟ್ಟೆ ಮೌಲ್ಯದ ಸುಮಾರು 100 ಕೋಟಿ ರು.ಗೂ ಹೆಚ್ಚಿದೆ. ಗುತ್ತಿಗೆ ಅವಧಿ ಮುಗಿದಿದ್ದರೂ ಈ ಕಟ್ಟಡಗಳ ಮಳಿಗೆಗಳನ್ನು ಖಾಲಿ ಮಾಡದೆ ಕಬಳಿಸಲು ಯತ್ನಿಸುತ್ತಿರುವ ಈ ಅತಿಕ್ರಮಣಕಾರರನ್ನು ತಕ್ಷಣ ತೆರವುಗೊಳಿಸಬೇಕು. ಈ ಎರಡೂ ಸ್ವತ್ತುಗಳನ್ನು ಜಿಬಿಎ ವ್ಯಾಪ್ತಿಗೆ ತೆಗೆದುಕೊಳ್ಳಲು ಸೂಕ್ತ ಕ್ರಮ ಕೈಗೊಳ್ಳಬೇಕು. ಈ ಅತಿಕ್ರಮಣಕಾರೊಂದಿಗೆ ಸಹಕರಿಸಿರುವ ಜಿಬಿಎ ಗಾಂಧಿನಗರ ವಿಭಾಗದ ಕಂದಾಯ ಇಲಾಖೆಯ ಅಧಿಕಾರಿಗಳ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳುವಂತೆ ಎನ್.ಆರ್.ರಮೇಶ್ ಆಗ್ರಹಿಸಿದ್ದಾರೆ.