ಮುಂಡರಗಿ: ಹಿಂದಿನಿಂದಲೂ ಕಾಂಗ್ರೆಸ್ ಸರ್ಕಾರ ಕೇವಲ ಹಿಂದೂ ದೇವಸ್ಥಾನಗಳನ್ನು ಟಾರ್ಗೆಟ್ ಮಾಡುತ್ತಾ ಬಂದಿದ್ದು, ಇದೀಗ ಧರ್ಮಸ್ಥಳದ ವಿಚಾರದಲ್ಲಿಯೂ ಅದನ್ನೇ ಮಾಡಿ ಹಿಂದೂ ದೇವಾಲಯಗಳನ್ನು ವಶಕ್ಕೆ ಪಡೆಯುವುದು ಕಾಂಗ್ರೆಸ್ ಸರ್ಕಾರದ ಅಜೆಂಡಾ ಆಗಿದೆ ಎಂದು ಶಿರಹಟ್ಟಿ ಶಾಸಕ ಡಾ. ಚಂದ್ರು ಲಮಾಣಿ ಆರೋಪಿಸಿದರು.
ಶ್ರೀ ಕ್ಷೇತ್ರ ಧರ್ಮಸ್ಥಳವು ಕೇವಲ ಕರ್ನಾಟಕದಲ್ಲಷ್ಟೇ ಅಲ್ಲ, ದೇಶಾದ್ಯಂತ ಕೋಟ್ಯಂತರ ಭಕ್ತರನ್ನು ಹೊಂದಿದ್ದು, ಹಿಂದೂಗಳ ಭಾವನೆಗಳನ್ನು ಘಾಸಿಗೊಳಿಸುವ ಹುನ್ನಾರ ಇದಾಗಿದೆ. ಭಾರತದ ನ್ಯಾಯ ಸಂಹಿತೆ ಅಡಿಯಲ್ಲಿ ಅನಾಮಿಕ ವ್ಯಕ್ತಿಯೊಬ್ಬ ಯಾವುದೇ ಆಧಾರಗಳಿಲ್ಲದೇ ಮಾಡಿದ ಆರೋಪಕ್ಕೆ ರಾಜ್ಯ ಸರ್ಕಾರ ಲಕ್ಷಾಂತರ ರು.ಗಳನ್ನು ವ್ಯಯಿಸಿ ಆತ ಹೇಳಿದ ಕಡೆಗಳೆಲ್ಲೆಲ್ಲಾ ಗುಂಡಿ ತೋಡಿದೆ. ಈ ಅನಾಮಿಕನ ಹಿಂದಿರುವ ವ್ಯಕ್ತಿಗಳು ಯಾರು? ಮತ್ತು ಅವರ ಸಂಚುಗಳು ಏನೆನ್ನುವುದನ್ನು ಸರ್ಕಾರ ಈ ವರೆಗೂ ಬಹಿರಂಗಪಡಿಸಿಲ್ಲ ಎಂದರು.
ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಲಿಂಗರಾಜ ಪಾಟೀಲ ಮಲ್ಲಾಪುರ, ದೇಶದಲ್ಲಿ ಕಾಂಗ್ರೆಸ್ ಅವಸಾನದ ಅಂಚಿಗೆ ತಲುಪುತ್ತಿದ್ದು, ಜಾತಿ ಜಾತಿಗಳ ಮಧ್ಯೆ, ಧರ್ಮ ಧರ್ಮಗಳ ಮಧ್ಯದಲ್ಲಿ ಬೆಂಕಿ ಹಚ್ಚುವ ಕಾರ್ಯ ಇದಾಗಿದೆ. ಇದೊಂದು ಸರ್ಕಾರದ ಪ್ರಾಯೋಜಕ ಕೃತ್ಯವಾಗಿದೆ. ಸತ್ಯ ಯಾವಾಗಲೂ ಎದ್ದು ನಿಲ್ಲುತ್ತದೆ. ಹಾಗೆ ಧರ್ಮಸ್ಥಳಕ್ಕೆ ಯಾರೇ ಹೆಸರು ಕೆಡಿಸಲು ನೋಡಿದರೂ ಅದು ಕೆಡುವುದಿಲ್ಲ ಎಂದರು.ಮುಖಂಡ ಕರಬಸಪ್ಪ ಹಂಚಿನಾಳ, ಕುಮಾರಸ್ವಾಮಿ ಹಿರೇಮಠ, ಮಂಜುನಾಥ ಇಟಗಿ, ನಾಗೇಶ ಹುಬ್ಬಳ್ಳಿ ಮಾತನಾಡಿ, ಧರ್ಮಸ್ಥಳ ಹಾಗೂ ಹಿಂದೂ ಧರ್ಮದ ಮತ್ತು ಧರ್ಮಾಧಿಕಾರಿ ವೀರೇಂದ್ರ ಹೆಗಡೆ ವಿರುದ್ಧ ಅವಹೇಳನಕಾರಿ ಮಾತು ಆಡುತ್ತಿರುವುದನ್ನು ನೋಡಿದರೆ ಇದು ಸರ್ಕಾರದ ಷಡ್ಯಂತ್ರ ಎಂದು ತಿಳಿಯುತ್ತದೆ. ಇಂತಹ ಘಟನೆಗಳನ್ನು ಸೃಷ್ಟಿಸಿ ದೇವಸ್ಥಾನವನ್ನು ಸರ್ಕಾರಕ್ಕೆ ಮಾಡಿಕೊಳ್ಳುವ ಹುನ್ನಾರ ಇದಾಗಿದೆ. ಒಂದು ಸರ್ಕಾರ ಮಾಡಲು ಆಗದ ಕಾರ್ಯವನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಮಹಿಳಾ ಸ್ವಸಹಾಯ ಸಂಘಗಳನ್ನು ರಚಿಸುವ ಮೂಲಕ ಕೋಟ್ಯಂತರ ಕುಟುಂಬಗಳಿಗೆ ಆಸರೆಯಾಗುತ್ತಿದೆ ಎಂದರು.
ಪಟ್ಟಣದ ಗಣೇಶ ದೇವಸ್ಥಾನದಿಂದ ಪ್ರಾರಂಭವಾದ ಮೆರವಣಿಗೆ ಬಸ್ ನಿಲ್ದಾಣ, ಅಂಬಾಭವಾನಿ ನಗರ, ಬಜಾರ್, ಜಾಗೃತ ವೃತ್ತದಿಂದ ಕೊಪ್ಪಳ ವೃತ್ತಕ್ಕೆ ತಲುಪಿ ಅಲ್ಲಿಂದ ತಹಸೀಲ್ದಾರ್ ಕಚೇರಿಗೆ ತಲುಪಿತು. ಸಿಪಿಐ ಮಂಜುನಾಥ ಕುಸಗಲ್ ತಮ್ಮ ಸಿಬ್ಬಂದಿಯೊಂದಿಗೆ ಬಿಗಿ ಬಂದೋಬಸ್ತ್ ಕೈಗೊಂಡಿದ್ದರು.