ಶಿಕಾರಿಪುರ: ರಾಜ್ಯ ಪರಿಶಿಷ್ಟ ಪಂಗಡಗಳ ನೌಕರರ ಸಂಘದ ತಾಲೂಕು ಘಟಕದಿಂದ ವಾರ್ಷಿಕ ಮಹಾಸಭೆ ಅಂಗವಾಗಿ ಸತತ 7ನೇ ವರ್ಷದ ಪ್ರತಿಭಾ ಪುರಸ್ಕಾರ ಹಾಗೂ ಅಭಿನಂದನಾ ಕಾರ್ಯಕ್ರಮವನ್ನು ಸೆ.28ರ ಭಾನುವಾರ ಇಲ್ಲಿನ ಗುರುಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ಪರಿಶಿಷ್ಟ ಪಂಗಡಗಳ ನೌಕರರ ಸಂಘದ ತಾಲೂಕು ಘಟಕದ ಅಧ್ಯಕ್ಷ ಎಂ.ಎಚ್.ಮಲ್ಲಿಕಾರ್ಜುನ್ ತಿಳಿಸಿದರು.
ಕಾರ್ಯಕ್ರಮವನ್ನು ಶಿವಮೊಗ್ಗ ಜಿ.ಪಂ ಉಪಕಾರ್ಯದರ್ಶಿ ಅನ್ನಪೂರ್ಣ ಮುದುಕಮ್ಮನವರ್ ಉದ್ಘಾಟಿಸಲಿದ್ದು, ವಿಶೇಷ ಆಹ್ವಾನಿತರಾಗಿ ಬೆಂಗಳೂರಿನ ಹಿರಿಯ ಉಪನೋಂದಣಾಧಿಕಾರಿ ಜಿ.ಪ್ರಸನ್ನ, ಬೆಳಗಾಂ ಎಂಎಸ್ಐಎಲ್ ಮ್ಯಾನೇಜರ್ ಬಿ.ಕೃಷ್ಣಮೂರ್ತಿ, ಹೆಸರಾಂತ ಹೃದಯ ರೋಗ ತಜ್ಞ ವೈದ್ಯ ಡಾ.ಮಹೇಶ್ ಮೂರ್ತಿ ಸಹಿತ ಹಲವು ಗಣ್ಯರು ಪಾಲ್ಗೊಳ್ಳಲಿದ್ದಾರೆ. ವಾಲ್ಮೀಕಿ ನಾಯಕ ಸಮುದಾಯದ ಇತಿಹಾಸ ಮತ್ತು ವರ್ತಮಾನದ ಬಗ್ಗೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಪಿ.ವಿ.ಸತೀಶ ನಾಯಕ ಉಪನ್ಯಾಸ ನೀಡಲಿದ್ದಾರೆ ಎಂದು ತಿಳಿಸಿದರು.
ಸಂಘದ ಗೌರವಾಧ್ಯಕ್ಷ, ನಿವೃತ್ತ ಮೆಸ್ಕಾಂ ಎಂಜಿನಿಯರ್ ಟಿ.ಸಿದ್ದಪ್ಪ ಮಾತನಾಡಿ, ಸಂಘದ ವಾರ್ಷಿಕ ಮಹಾಸಭೆಯಲ್ಲಿ ಸದಸ್ಯರು, ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಮನವಿ ಮಾಡಿದರು.ಪತ್ರಿಕಾಗೋಷ್ಠಿಯಲ್ಲಿ ಸಂಘದ ಪ್ರ.ಕಾ ತಿಪ್ಪೇಶ್, ಡಾ.ಜಿ.ಪ್ರಕಾಶ್, ಖಜಾಂಚಿ ಸೋಮಶೇಖರಪ್ಪ, ಸಂ.ಕಾ ಕೊಟ್ರೇಶಪ್ಪ, ಆರ್.ಟಿ.ಹನುಮಂತಪ್ಪ, ನೇತಾಜಿ ಇತರರಿದ್ದರು.