ಸಾಗರ: ಸಮಾಜದ ಪ್ರತಿಭಾವಂತ ಮಕ್ಕಳನ್ನು ಪ್ರೋತ್ಸಾಹಿಸಿದರೆ ಭವಿಷ್ಯದಲ್ಲಿ ಅವರಿಂದ ಇನ್ನಷ್ಟು ಉನ್ನತ ಸಾಧನೆ ನಿರೀಕ್ಷೆ ಮಾಡಲು ಸಾಧ್ಯ ಎಂದು ಪ್ರಾಂತ್ಯ ಆರ್ಯ ಈಡಿಗರ ಸಂಘದ ಅಧ್ಯಕ್ಷ ರವಿಕುಮಾರ್ ಸಿಗಂದೂರು ಹೇಳಿದರು.
ನಮ್ಮ ಸಮುದಾಯದಲ್ಲಿ ಹಿಂದೆ ಅಕ್ಷರಸ್ತರ ಸಂಖ್ಯೆ ಕಡಿಮೆ ಇತ್ತು. ಇತ್ತೀಚಿನ ವರ್ಷಗಳಲ್ಲಿ ಸ್ವಯಂ ಪ್ರಯತ್ನದಿಂದ ಸಮುದಾಯ ಬಾಂಧವರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಮೂಲಕ ಅವರನ್ನು ಉನ್ನತ ಸ್ಥಾನದಲ್ಲಿ ನೋಡುವ ತಮ್ಮ ಕನಸನ್ನು ನನಸು ಮಾಡಿಕೊಂಡಿದ್ದಾರೆ ಎಂದ ಅವರು, ಸಮಾಜದಲ್ಲಿ ಉನ್ನತ ಸಾಧನೆ ಮಾಡಿದ ಸಾಧಕರು ಇದ್ದಾರೆ. ಸಮುದಾಯದ ಅಭಿವೃದ್ಧಿಗೆ ಅವರು ಕೊಡುಗೆ ನೀಡುವ ಮೂಲಕ ಸಮಷ್ಟಿ ಸಮಾಜದ ಅಭಿವೃದ್ಧಿಗೂ ತಮ್ಮ ಕೊಡುಗೆ ನೀಡಿದ್ದಾರೆ, ಅವರನ್ನು ಸನ್ಮಾನಿಸಲಾಗಿದೆ. ಸಂಘವು ವಿವಿಧ ಕಾರ್ಯಕ್ರಮಗಳ ಮೂಲಕ ಸಮುದಾಯದ ಏಳಿಗೆಗೆ ಶ್ರಮಿಸುತ್ತಿದೆ ಎಂದರು.
ಸಂಘದ ಉಪಾಧ್ಯಕ್ಷ ಕಲಸೆ ಶಿವಪ್ಪ ಮಾತನಾಡಿ, ಸಮುದಾಯದ ಮಕ್ಕಳ ಶೈಕ್ಷಣಿಕ ಪ್ರತಿಭೆ ಗಮನಾರ್ಹವಾಗಿ ಬೆಳೆಯುತ್ತಿದೆ. ಈ ಬಾರಿ ಪಿಯುಸಿ ಮತ್ತು ಎಸ್ಎಸ್ಎಲ್ಸಿಯಲ್ಲಿ ಶೇ.೯೫ಕ್ಕಿಂತ ಹೆಚ್ಚು ಅಂಕ ಗಳಿಸಿದ ಸುಮಾರು ೧೦೦ ವಿದ್ಯಾರ್ಥಿಗಳನ್ನು ಗುರುತಿಸಲಾಗಿದ್ದು, ಅವರಲ್ಲಿ ಶೇ.೯೭ಕ್ಕಿಂತ ಹೆಚ್ಚು ಅಂಕ ಗಳಿಸಿದವರನ್ನು ಪುರಸ್ಕರಿಸಲಾಗಿದೆ. ಪ್ರತಿಭಾ ಪುರಸ್ಕಾರಕ್ಕಾಗಿ ದತ್ತಿನಿಧಿ ಸ್ಥಾಪಿಸುವ ಉದ್ದೇಶ ಹೊಂದಿದ್ದು, ಸಮಾಜದವರು ಸಹಕಾರ ನೀಡುವಂತೆ ಮನವಿ ಮಾಡಿದರು.ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಕಾರ್ಯಕ್ರಮ ಉದ್ಘಾಟಿಸಿದರು. ಪರಮೇಶ್ವರ ಟಿ., ಶಿವಪ್ಪ, ಟಿ.ವಿ.ಪಾಂಡುರಂಗ, ತಾರಾಮೂರ್ತಿ, ಕೆ.ಎಂ.ಕರುಣಾಕರ, ಬಿ.ಎಂ.ಮಂಜಪ್ಪ, ಕೆ.ಹೊಳೆಯಪ್ಪ, ಗಿರೀಶ್ ಕೋವಿ, ಮಹಾಬಲ ಕೌತಿ, ವೆಂಕಟೇಶ ಗಲ್ಲಿ, ಅಶೋಕ ಬೇಳೂರು, ಅದರಂತೆ ನಾರಾಯಣಪ್ಪ, ಡಾ.ರಾಜನಂದಿನಿ ಕಾಗೋಡು, ವಿಶ್ವನಾಥ ಕುಗ್ವೆ, ಡಿ.ಗಣಪತಪ್ಪ, ತುಕಾರಾಮ ಶಿರವಾಳ, ಕಿರಣ್ ದೊಡ್ಮನೆ ಹಾಜರಿದ್ದರು.