ಚನ್ನಪಟ್ಟಣ: ಇಂದು ಮೊಬೈಲ್ ಹಾವಳಿ ಹೆಚ್ಚಾಗಿ ಸೈಬರ್ ಕ್ರೈಂಗಳು ಹೆಚ್ಚಾಗುತ್ತಿವೆ. ವಿದ್ಯಾರ್ಥಿಗಳು, ಯುವ ಸಮೂಹ ಮೊಬೈಲ್ನಿಂದ ಸೈಬರ್ ಅಪರಾಧಗಳಿಗೆ ಮತ್ತು ಡ್ರಗ್ಸ್ ಇತರ ಚಟಗಳಿಗೆ ಬಲಿಯಾಗುತ್ತಿರುವುದು ಅಪಾಯಕಾರಿ ಬೆಳವಣಿಗೆ ಎಂದು ಡಯಟ್ ಉಪ ನಿರ್ದೇಶಕ ಶಿವಪ್ಪ ಕಳವಳ ವ್ಯಕ್ತಪಡಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಅವರು, ಯುವಜನರ ದುಶ್ಚಟಗಳಿಂದ ತಂದೆ, ತಾಯಿ, ಕುಟುಂಬ ಹಾಗೂ ಸಮಾಜದ ನೆಮ್ಮದಿ ಹಾಳಾಗುತ್ತಿದ್ದು ಮಕ್ಕಳನ್ನು ಮೊಬೈಲ್, ಸೈಬರ್ ಅಪರಾಧ, ಡ್ರಗ್ ಚಟದಿಂದ ದೂರವಿರುವಂತೆ ನೋಡಿಕೊಂಡು, ಉತ್ತಮ ಶಿಕ್ಷಣ, ಪುಸ್ತಕಗಳನ್ನು ಓದುವುದರ ಜೊತೆಗೆ ನಮ್ಮ ಸಂಸ್ಕೃತಿ, ಸಂಸ್ಕಾರ, ಮಾನವೀಯಗುಣಗಳನ್ನು ಕಲಿಸಿ ಸನ್ಮಾರ್ಗದಲ್ಲಿ ಬೆಳೆಸಿದಾಗ ಮಾತ್ರ ಮಕ್ಕಳ ಭವಿಷ್ಯ ಉಜ್ವಲವಾಗುತ್ತದೆ ಎಂದು ತಿಳಿಸಿದರು.
ಬೇವೂರು ಸಿದ್ದರಾಮೇಶ್ವರ ಪ.ಪೂ.ಕಾಲೇಜಿನ ಪ್ರಾಂಶುಪಾಲ ಡಿ.ಸಿ.ಸುರೇಶ್ ಮಾತನಾಡಿ, ವಿಶ್ವದಲ್ಲೇ ನಮ್ಮ ಭಾರತದ ಸಂಸ್ಕೃತಿ, ಸಂಸ್ಕಾರ ಶ್ರೀಮಂತವಾಗಿದೆ. ಮಾನವ ಸಂಪನ್ಮೂಲ ಹೆಚ್ಚಾಗಿದೆ. ಸಾಮಾಜಿಕ ವ್ಯವಸ್ಥೆಯನ್ನು ಹೊಂದಿದೆ. ಆದರೂ ಮನುಷ್ಯ ವಿರುದ್ಧ ಚಟುವಟಿಕೆಗಳು, ಮನುಷ್ಯ ಸಂಬಂಧಗಳು ಕಳಚಿಕೊಳ್ಳುವ ವ್ಯವಸ್ಥೆ ಹೆಚ್ಚಾಗುತ್ತಿದೆ. ಯುವಶಕ್ತಿ ತನ್ನ ಜವಾಬ್ದಾರಿಯನ್ನು ಮರೆಯುತ್ತಿದೆ. ಮಕ್ಕಳು ಮತ್ತು ಯುವ ಸಮೂಹಕ್ಕೆ ಉತ್ತಮ ಮಾರ್ಗದರ್ಶನ ನೀಡಿ ದೇಶ ಕಟ್ಟುವ ಕೆಲಸವನ್ನು ನಾವೆಲ್ಲರೂ ಕೂಡಿ ಮಾಡಬೇಕಾಗಿದೆ ಎಂದರು.ಸಂಸ್ಥೆಯ ಅಧ್ಯಕ್ಷ ಬಿ.ಎನ್.ಕಾಡಯ್ಯ ಮಾತನಾಡಿ, ನಮ್ಮ ಸಂಸ್ಥೆ ಸಾಹಚರ್ಯ, ಸಹಯೋಗ, ಸೇವೆ, ಸಂಸ್ಕಾರ ಹಾಗೂ ಸಂಸ್ಕೃತಿ ಎಂಬ ಪಂಚ ಸಂದೇಶಗಳೊಂದಿಗೆ ಕಳೆದ ೨ ವರ್ಷಗಳಿಂದ ಸೇವಾ ಕಾರ್ಯಗಳನ್ನು ನಡೆಸಿಕೊಂಡು ಬರುತ್ತಿದೆ. ಕಾರ್ಯಕ್ರಮದ ಅಂಗವಾಗಿ ಇಬ್ಬರು ಸಾಧಕರನ್ನು ಸನ್ಮಾನಿಸುವುದರ ಜೊತೆಗೆ ನಮ್ಮ ಸಂಸ್ಥೆಯ ಪ್ರಮುಖ ಸೇವಾ ಕಾರ್ಯಗಳಲ್ಲಿ ಒಂದಾದ ಮಡಿಲು ತುಂಬುವ ಕಾರ್ಯಕ್ರಮದಡಿ ಓರ್ವ ಬಡ ಗರ್ಭಿಣಿ ಮಹಿಳೆಗೆ ಸೀಮಂತ ಕಾರ್ಯಕ್ರಮ ಮತ್ತು ಓರ್ವ ಬಡ ವಿದ್ಯಾರ್ಥಿಯ ವ್ಯಾಸಂಗಕ್ಕೆ ಆರ್ಥಿಕ ನೆರವು ನೀಡಲಾಗುತ್ತಿದೆ ಎಂದು ಹೇಳಿದರು.
ನಗರಸಭಾ ಸದಸ್ಯರು ಹಾಗೂ ರೋಟರಿ ಟಾಯ್ಸ್ ಸಿಟಿ ಸಂಸ್ಥೆ ಅಧ್ಯಕ್ಷರು ಆದ ಬಿ.ಎಂ.ನಾಗೇಶ್, ಚಂದ್ರು ಲ್ಯಾಬ್-ಡಯಾಗ್ನೋಸ್ಟಿಕ್ ಸೆಂಟರ್ ಮಾಲೀಕ ವಿ.ಸಿ.ಚಂದ್ರೇಗೌಡ,ಲಯನ್ಸ್ ಸಂಸ್ಥೆಯ ಜಿಲ್ಲಾ ವ್ಯವಸ್ಥಾಪಕ ಕೆ.ತಿಪ್ರೇಗೌಡ, ಪತ್ರಕರ್ತರ ಸಂಘದ ಜಿಲ್ಲಾ ಉಪಾಧ್ಯಕ್ಷ ಲಕ್ಷ್ಮೀಪತಿ ಮಂಗಳವಾರಪೇಟೆ, ಎಂ.ಎಚ್.ಕೃಷ್ಣಕುಮಾರ್, ಸಮಾಜ ಸೇವಕರಾದ ವಿ.ಟಿ.ರಮೇಶ್, ವಸಂತಕುಮಾರ್ ಇತರರಿದ್ದರು.ಸಂದರ್ಭದಲ್ಲಿ ಶ್ರೀ ಅಯ್ಯಪ್ಪಸ್ವಾಮಿ ದೇವಸ್ಥಾನದ ಪ್ರಧಾನ ಅರ್ಚಕ ಬಿ.ಎನ್.ನಂಜುಂಡಸ್ವಾಮಿ, ಪ್ರೌಢಶಾಲಾ ಶಿಕ್ಷಕ ಚಿಕ್ಕಚನ್ನೇಗೌಡ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಗರ್ಭಿಣಿ ಮಹಿಳೆಗೆ ಮಡಿಲು ತುಂಬುವ ಸೀಮಂತ ಕಾರ್ಯಕ್ರಮವನ್ನು ನಡೆಸಿಕೊಡಲಾಯಿತು. ಬಡ ವಿದ್ಯಾರ್ಥಿಗೆ ಆರ್ಥಿಕ ನೆರವು ನೀಡಿ ಪ್ರೋತ್ಸಾಹಿಸಲಾಯಿತು.
ಪೊಟೋ೧೨ಸಿಪಿಟಿ೨:ಚನ್ನಪಟ್ಟಣದಲ್ಲಿ ನೇಗಿಲಯೋಗಿ ಸಮಾಜ ಸೇವಾ ಟ್ರಸ್ಟ್ ಕಚೇರಿಯಲ್ಲಿ ಹಮ್ ಫೌಂಡೇಷನ್ ಭಾರತ್, ಚನ್ನಪಟ್ಟಣ ವ್ಯಾಸ ಶಾಖೆಯಿಂದ ಪರಿವಾರ ಮಿಲನ, ಸಾಧಕರಿಗೆ ಸನ್ಮಾನ ಹಾಗೂ ವಾರ್ಷಿಕ ಮಹಾಸಭಾ ಕಾರ್ಯಕ್ರಮ ನಡೆಯಿತು.