ತುರುವೇಕೆರೆ: ತಾಲೂಕಿನ ಕಸಬಾ ಹೋಬಳಿಯ ಅಜ್ಜೇನಹಳ್ಳಿ ನಿವಾಸಿ ಎ.ಎಸ್.ಕಂಚಿರಾಯ (56) ವಿಷಜಂತು ಕಡಿದು ಶುಕ್ರವಾರ ಸಾವನ್ನಪ್ಪಿದ್ದಾರೆ. ಮೃತರು ದಂಡಿನಶಿವರ ಕೆಪಿಎಸ್ ಶಾಲೆಯ ಸಹ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇವರು ಶುಕ್ರವಾರ ಸ್ಥಳೀಯ ರಜೆ ಇದ್ದ ಕಾರಣ ತೋಟಕ್ಕೆ ತೆರಳಿದ್ದರು. ಅಲ್ಲಿ ಹುಲ್ಲು ಸ್ವಚ್ಛಗೊಳಿಸುವ ವೇಳೆ ಯಾವುದೋ ವಿಷಪೂರಿತ ಜಂತು ಕಚ್ಚಿದೆ. ತಕ್ಷಣ ಗಾಬರಿಗೊಂಡು ಮನೆಗೆ ಓಡಿದ್ದಾರೆ. ತೀವ್ರ ಅಸ್ವಸ್ಥಗೊಂಡ ಎ.ಎಸ್.ಕಂಚಿರಾಯನವರ ಬಾಯಿಯಲ್ಲಿ ಜೊಲ್ಲು ಸುರಿಯುತ್ತಿತ್ತು. ನನಗೆ ಏನೋ ಕಡಿದಿದೆ ಎಂದು ಮಾತ್ರ ಮನೆಯವರಿಗೆ ಹೇಳಿದರೆಂದು ತಿಳಿದುಬಂದಿದೆ. ಮನೆಯವರು ಕೂಡಲೇ ಕಾರಿನಲ್ಲಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಕರೆತಂದಿದ್ದಾರೆ. ಆ ವೇಳೆಗಾಗಲೇ ಶಿಕ್ಷಕರು ಮೃತರಾಗಿದ್ದರೆಂದು ಎಂದು ತಿಳಿದುಬಂದಿದೆ. ಶಿಕ್ಷಕ ಎ.ಎಸ್.ಕಂಚಿರಾಯರವರು ನಿವೃತ್ತಿಯ ಅಂಚಿನಲ್ಲಿದ್ದರು ಜೊತೆಗೆ ಹೊಸ ಮನೆ ಕಟ್ಟುತ್ತಿದ್ದರು. ಇನ್ನು ಕೆಲವೇ ದಿನಗಳಲ್ಲಿ ಗೃಹ ಪ್ರವೇಶಕ್ಕೆ ಸಿದ್ಧತೆ ಮಾಡಿಕೊಂಡಿದ್ದರು. ಈಗ ಅವರ ಸಾವು ಕುಟುಂಬದ ಸದಸ್ಯರಿಗೆ ಬರಸಿಡಿಲು ಬಡಿದಂತೆ ಆಗಿದೆ. ಕುಟುಂಬಸ್ಥರ ರೋಧನ ಮುಗಿಲು ಮುಟ್ಟಿತ್ತು. ಮೃತ ಶಿಕ್ಷಕರಿಗೆ ಪತ್ನಿ, ಓರ್ವ ಪುತ್ರ ಹಾಗೂ ಅಪಾರ ಬಂಧು ಬಳಗ ಇದೆ. ಈ ಸಂಬಂಧ ದಂಡಿನಶಿವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಸಬ್ ಇನ್ಸ್ ಪೆಕ್ಟರ್ ಮೂರ್ತಿ ತಿಳಿಸಿದ್ದಾರೆ.